Sunday, August 30, 2009

ಪ್ರೇಕ್ಷಕರಿಗೆ ಸಭಾ ಸಂಹಿತೆ .....




ಉಡುಪಿಯಲ್ಲಿ ನಡೆದ ಅರ್ಥಧಾರಿ - ಸಂಘಟಕರ ಸಮಾವೇಶದಲ್ಲಿ ಕೆಲವೊಂದು ಉತ್ತಮ ನಿರ್ಣಯಗಳನ್ನು ಕೈಗೊಂಡಿದ್ದು, ಅದರಲ್ಲಿ ಗಮನ ಸೆಳೆಯುವ ಅಂಶವೆಂದರೆ ಪ್ರೇಕ್ಷಕರಿಗೂ ಕೆಲವು ನಿಬಂಧನೆಗಳನ್ನು ನಿರ್ಣಯರೂಪದಲ್ಲಿ ಅಂಗೀಕರಿಸಿದ್ದು . ಅವು ಈ ಕೆಳಗಿನಂತಿವೆ




ಸಭಿಕರು
೧. ಕ್ಲಪ್ತ ಸಮಯಕ್ಕೆ ಬಂದು ಕಾರ್ಯಕ್ರಮದ ಕೊನೆಯವರೆಗೆ ಇರಬೇಕು .

೨. ಮಧ್ಯದಲ್ಲಿ ಎದ್ದು ಹೋಗಬೇಕಾದ ಅನಿವಾರ್ಯತೆ ಇರುವವರು ಎದುರು ಸಾಲುಗಳಲ್ಲಿ ಕುಳಿತುಕೊಳ್ಳಬಾರದು.

೩. ಮಂಗಳ ಪದ್ಯ ಆಗುತ್ತಿರುವಾಗ ಎದ್ದು ಹೊರಡುವುದು ಸೂಕ್ತವಲ್ಲ.

೪. ಬೇರೆ ಮಾತುಗಳನ್ನಾಡುತ್ತ ಉಳಿದ ಶ್ರೋತೃಗಳಿಗೆ ತೊಂದರೆ ಕೊಡಬಾರದು.

೫. ಸಿಳ್ಳೆ ನಿಷೇಧಿಸಬೇಕು . ಚಪ್ಪಾಳೆ ಮಿತಿಯಲ್ಲಿರಲಿ .

೬. ಒಬ್ಬ ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ತಟ್ಟಿ ಸ್ವಾಗತಿಸುವುದು ಉಳಿದ ಕಲಾವಿದರಿಗೆ ಅಗೌರವ ತೋರಿಸಿದಂತೆ. ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ಬೇಡ.

೭. ಕಾರ್ಯಕ್ರಮದ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಗಳನ್ನು ಸಕಾರಣವಾಗಿ ಸಂಘಟಕರಿಗೆ ತಿಳಿಸುವ ಅಭ್ಯಾಸವಿರಲಿ .

೮. ಮೊಬೈಲ್ ಫೋನ್ ಸೈಲೆಂಟ್ ಮೋಡನಲ್ಲಿರಲಿ . ಮೊಬೈಲ್ನಲ್ಲಿ ಮಾತಾಡಲೇ ಬೇಕೆಂಬ ಅನಿವಾರ್ಯತೆ ಇದ್ದಾಗ ಸಭೆಯಿಂದ ಹೊರಗೆ ಹೋಗಿ ಮಾತಾಡಿ ಬನ್ನಿ .


ಇಂಥದ್ದೊಂದು ನಿರ್ಣಯ ನಿಜಕ್ಕೂ ಸ್ವಾಗತಾರ್ಹ . ಇದನ್ನು ಪಾಲಿಸುವ ಪ್ರೇಕ್ಷಕರೂ ಸುಸಂಸ್ಕೃತರಾಗಿರಬೇಕು.
ಹಲವಾರು ಬಾರಿ ತಾಳಮದ್ದಲೆ ಕಾರ್ಯಕ್ರಮಗಳಿಗೆ ಆರಂಭದಲ್ಲಿ ಪ್ರೇಕ್ಷಕರೇ ಇರುವುದಿಲ್ಲ . ಯಕ್ಷಗಾನ ಸಂಘಗಳ ವಾರ್ಷಿಕೋತ್ಸವ ಆದರಂತೂ ಸಭಾ ಕಾರ್ಯಕ್ರಮ ಮುಗಿದ ಮೇಲೆ ಜನ ಜಮಾಯಿಸತೊಡಗುತ್ತಾರೆ . ಇದರಿಂದಾಗಿಯೇ ಆಯೋಜಕರು "ಒಂತೆ ಜನ ಬರಡ್ ಮಾರಾಯರೇ ಬುಕ್ಕನೆ ಸುರು ಮಲ್ಪುಗ " ಅಂತ ಕಾರ್ಯಕ್ರಮ ಆರಂಭಿಸುವುದನ್ನೇ ತಡ ಮಾಡಿ ಕೆಲವೊಮ್ಮೆ ಸ್ವಾರಸ್ಯಕರ ಸನ್ನಿವೇಶಗಳಿಗೆ , ಸರಿಯಾದ ಚರ್ಚೆಗಳಿಗೆ ಕಲಾವಿದರಿಗೆ ಸಮಯಾವಕಾಶ ಸಿಗದೇ ತರಾತುರಿಯಲ್ಲಿ ಮುಗಿಸುವುದನ್ನು ನೋಡುತ್ತೇವೆ .

ಇನ್ನು ಕೆಲವರಂತೂ ಕಾರ್ಯಕ್ರಮದ ಮಧ್ಯೆ ಎದ್ದು ಹೋಗುವುದು ಸಾಮಾನ್ಯ . ಬಹುಶ ಮೇಲೆ ತೆಗೆದುಕೊಂಡ ನಿರ್ಣಯ "ಅತೀ ಗಣ್ಯ ಅತಿಥಿಗಳಿಗೆ " ಅನ್ವಯ ಮಾಡಲು ಕಷ್ಟವೇನೂ ? ರಾಜಕಾರಣಿಗಳು , ಮಠಾಧಿಪತಿಗಳು , ದೊಡ್ಡ ದೊಡ್ಡ ವ್ಯಾಪಾರಸ್ಥರು ಮುಂತಾದವರಿಗೆ ಪೂರ್ಣ ಅವಧಿ ಕುಳಿತುಕೊಳ್ಳಲು ಸಮಯವೆಲ್ಲಿದೆ ? ಅಂಥವರು ಬಂದಾಗ ಅವರನ್ನು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಲಿಕ್ಕೂ ಆಗದೆ "ಧರ್ಮ ಸಂಕಟ " ಅನುಭವಿಸಬೇಕಾದ ಪ್ರಮೇಯ ಬಂದರೂ ಮೇಲಿನ ನಿರ್ಣಯದಲ್ಲಿ "ಅತೀ ಗಣ್ಯರನ್ನು ಹೊರತುಪಡಿಸಿ " ಅಂತ ನಾವು -ನೀವು ಜನ ಸಾಮಾನ್ಯರು ಸ್ವತಹ ಅರ್ಥೈಸಬೇಕು .

ಮಂಗಳ ಪದ್ಯ "ಮಜ್ಜಿಗೆ ಊಟದಂತೆ " ಅದನ್ನು ಕೇಳದೆ ಹೋಗುವುದು ಒಳ್ಳೆಯದಲ್ಲ . ಚುಟುಕಾಗಿ , ಚುರುಕಾಗಿ ಮುಗಿಯುವ ಪದ್ಯ ಕೇಳಲು ಆಕರ್ಷಕ .ವಾರಿಜದಳಾ೦ಬಕಾಯ ಜಯ ಮಂಗಳಂ ....., ಶ್ರೀಮಂಜುನಾಥ .... ಮುಂತಾದ ಅದ್ಭುತ ಪದ್ಯಗಳು ಕೊನೆಯಲ್ಲಿ ಕೊಡುವ ಪರಿಣಾಮವೇ ಬೇರೆ . ಅದನ್ನು ಅನುಭವಿಸಿದರೆ ಸವಿ ತಿಳಿಯುವುದು ...


ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಹಲವು ರೀತಿಯ ಕೀಳಭಿರುಚಿಗಳು ಕಾರ್ಯಕ್ರಮ ಅಂದಗೆಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಬೆಳವಣಿಗೆಗಳು ಜನರ ಬದುಕಿಗೆ ಅತ್ಯುಪಯುಕ್ತವಾದರೂ, ಅದರ ಬಳಕೆಯ ಬಗ್ಗೆ ಸರಿಯಾದ ಜ್ಞಾನವಿಲ್ಲದೇ ಹೋದರೆ ಇಂಥದ್ದೊಂದು ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ ಎಂಬುದುವಿಷಾದನೀಯವಾದರೂ ಸತ್ಯ .

ಇಂದು ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು , ಪಾತ್ರಧಾರಿ ತಲ್ಲೀನನಾಗಿ ಅಭಿನಯಿಸುತ್ತಿರುವಾಗ , ಅರ್ಥಧಾರಿ ಅರ್ಥ ಹೇಳುತ್ತಿರುವಾಗ ಹಲವು ವೈವಿಧ್ಯಮಯ ಶಬ್ಧಗಳೊಂದಿಗೆ ಧ್ವನಿಸುವ ಮೊಬೈಲ್ಗಳು ಇತರ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವುದು ಸಾಮನ್ಯ ವಿಷಯ . ಈ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮದ ಮೊದಲೇ ಪ್ರೇಕ್ಷಕರಿಗೆ ಸೂಚನಾರೂಪದಲ್ಲಿ ಮೇಲಿನ ನಿರ್ಣಯಗಳನ್ನು ಹೇಳುವುದು ಇಂದಿನ ಅನಿವಾರ್ಯತೆ ಅಂದರೂ ತಪ್ಪಲ್ಲ !

ಏನಿದ್ದರೂ ಈ ನಿರ್ಣಯಗಳಿಂದಲಾಗಿಯಾದರೂ ಪ್ರೇಕ್ಷಕ ಪ್ರಭುಗಳಿಗೆ ಸ್ವಯಂಪ್ರಜ್ಞೆ ಬೆಳೆಯಬೇಕೆಂಬ ಸಂದೇಶ ಮಾತ್ರ ಸಮಯೋಚಿತ ..

ನಿಮಗೇನನಿಸುತ್ತದೆ ?

5 comments:

Lanabhat said...

Well said Subrahmanyanna...

nijavagaloo illi tilisiruva ella tippanigaloo swagatarha mattu swalpa prajnavanta prekshaka varga ee tappugalannu maduvudilla.... ;)

Ullas said...

nijavagiyoo utthama nirnayagalu
utthama lekhana

YAKSHA CHINTANA said...

ಸಭ್ಯ ಸುಸಂಸ್ಕೃತ ವ್ಯಕ್ತಿಗೆ ಈ ನಿರ್ಣಯ ಮಂಡಿಸುವ ಅಗತ್ಯವೇ ಇರುವುದಿಲ್ಲ. ಬಹುಶಃ ಇಂದು ನಮ್ಮ ಸಂಸ್ಕಾರ ದಿಶೆ ಯನ್ನು ಈ ನಿರ್ಣಯಗಳು ಪರೋಕ್ಷವಾಗಿ ತೋರಿಸುತ್ತದೆ. ಜನಪ್ರಿಯ ಕಲಾವಿದ ಬಂದಾಗ ಕರತಾಡನ ಮಾಡಿ ಸ್ವಾಗತಿಸುವ ಬದಲು ಕಾರ್ಯಕ್ರಮ ಮುಗಿದಾಗ ಸಾಧ್ಯವಾದರೆ ಕಲಾವಿದನನ್ನು ಕಂಡು ಅಂದಿನ ಕಾರ್ಯಕ್ರಮ ಮತ್ತು ನಿರ್ವಹಣೆಯ ಬಗ್ಗೆ ಮುಖತಃ ಹೇಳಿದರೆ ಕಲಾವಿದನಿಗೆ ಆತ್ಮಸ್ಥೈರ್ಯ ನೀಡಿದಂತೆ. ಕಾರ್ಯಕ್ರಮದ ಋಣಾತ್ಮಕ ಅಂಶಗಳನ್ನು ಕೇಳುವಂತಹ ಸ್ತಿತಪ್ರಜ್ಞತೆಯನ್ನು ಸಂಘಟಕರೂ ಬೆಳೆಸಿಕೊಳ್ಳಬೇಕು. ಒಟ್ಟಿನಲ್ಲಿ ಅದ್ಭುತ ಹಾಗು ಉತ್ತಮ ನಿರ್ಣಯಗಳನ್ನು ಬಳಕೆಗೆ ತರುವಲ್ಲಿ ಎಷ್ಟು ಯಶಸ್ವಿಯಾಗುವೆವೋ ಕಾಲವೇ ಉತ್ತರಿಸಬೇಕು.

ಚೆ೦ಬಾರ್ಪು said...

yes, these are the basic etiquette that are expected from audience. But i don't know how successfully they get implemented..

chirantana said...

decisions are good but how to implement it ? - a million dollar question is it?