Tuesday, April 28, 2009

ಅಪ್ರತಿಮ ಹಿಮ್ಮೇಳ ವಾದಕನಿಗೆ ನುಡಿ ನಮನ ....


ಎಡನೀರು ಮೇಳದವರು " ಜಾಂಬವತಿ ಕಲ್ಯಾಣ -ವೀರ ಅಭಿಮನ್ಯು " ಪ್ರಸಂಗವನ್ನು ಆಡಲಿರುವರು ಎಂಬ ವಿಚಾರ ತಿಳಿದ ನಾವು ಬಸವ ಜಯಂತಿ ಪ್ರಯುಕ್ತ ರಜೆ ಇದ್ದುದರಿಂದ ಈ ಸಲದ ಎಡನೀರು ಮೇಳದ ಒಂದು ಆಟವಾದರೂ ನೋಡಬೇಕೆಂಬ ಆಸೆಯಿಂದ ಬೆಂಗಳೂರಿನ ಕೋರಮಂಗಲದ ಎಡನೀರು ಮಠಕ್ಕೆ ಮಿತ್ರರಾದ ರಾಜಣ್ಣನವರೊಂದಿಗೆ ಸಂಜೆ ಎಳೂಕಾಲರ ಸುಮಾರಿಗೆ ತಲುಪಿದಾಗ ನಮಗೆ "ಚಿಪ್ಪಾರು ಬಲ್ಲಾಳರು " ಇನ್ನಿಲ್ಲ ಎಂಬ ಆಘಾತಕಾರಿ ವಿಷಯ ತಿಳಿಯಿತು .ಕಲಾವಿದರೆಲ್ಲ ದು:ಖಾರ್ತರಾಗಿದ್ದ ಸನ್ನಿವೇಶ ಬಹಳಷ್ಟು ಸಂಕಟವನ್ನು ಉಂಟುಮಾಡಿತು . ಮೃತರ ಗೌರವಾರ್ಥ ಆ ದಿನದ ಆಟವನ್ನು ರದ್ದುಗೊಳಿಸಲಾಯಿತು .


ಚಿಕ್ಕಂದಿನಿಂದಲೂ ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದ ನಮಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು . ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹಿರಿಯ- ಕಿರಿಯ ಕಲಾವಿದರಿಗೆಲ್ಲ ಚೆಂಡೆ ಮದ್ದಲೆ ಸಾಥ್ ನೀಡಿ ಅವರೆಲ್ಲರ ಪದ್ಯಗಳು ಮೆರೆಸುವಂತೆ ಮಾಡಿದ ಖ್ಯಾತಿ ಇವರದ್ದು. ೧೯೨೮ ರ ಎಪ್ರಿಲ್ ೨ ರಂದು ಜನಿಸಿದ ಇವರು ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ ಅನುಭವಿಸಿದವರು. ದಿವಂಗತ ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಕಡತೋಕ -ಬಲ್ಲಾಳರ ಜೋಡಿ ಯಕ್ಷರಂಗ ಕಂಡ ಅದ್ಭುತ .

ಮೂಲ್ಕಿ ಮೇಳದಿಂದ ಆರಂಭಗೊಂಡ ಇವರ ಕಲಾಸೇವೆ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ 50 ವರ್ಷಗಳ ಕಾಲ ಮುಂದುವರಿದು ಮೇಳದಿಂದ ನಿವೃತ್ತರಾದರೂ ಯಕ್ಷಗಾನಗಳಲ್ಲಿ ಸಕ್ರಿಯರಾಗಿದ್ದರು .
ಸದಾ ಸ್ಥಿತಪ್ರಜ್ಞರಂತೆ ಕಾಣುತ್ತಿದ್ದ ಬಲ್ಲಾಳರು ಸಂತೃಪ್ತ ಜೀವನವನ್ನು ನಡೆಸಿದವರು. ಎಡನೀರು ಮೇಳದ ಆಟಕ್ಕೋಸ್ಕರ ಬೆಂಗಳೂರು ನಗರಕ್ಕೆ ಬಂದಿದ್ದ ಇವರು ಚೌಕಿ ಪೂಜೆಯಾಗುತ್ತಿದ್ದಂತೆ ನಮ್ಮನ್ನು ಬಿಟ್ಟು ಅಗಲಿದರು . ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ ... ಎಂಬಂತೆ ಸುಖ ಮರಣವನ್ನು ಪಡೆದ ಇವರು ಧನ್ಯರು.

ಅವರಂತೆ ಚೆಂಡೆ ಮದ್ದಲೆ ನುಡಿಸಬಲ್ಲ ಕಲಾವಿದರು ವಿರಳ .ಹಳೆಯ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಬಲು ದೊಡ್ಡ ನಿರ್ವಾತವನ್ನು ನಿರ್ಮಾಣವಾಯಿತು. ಇದು ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟ . ಅವರ ದಿವ್ಯಾತ್ಮವು ಚಿರ ಶಾಂತಿಯನ್ನು ಹೊಂದಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತೇವೆ..

2 comments:

YAKSHA CHINTANA said...

ಧರ್ಮಸ್ಥಳ ಮೇಳದ ವೇದಿಕೆಯ ಒಂದು ಮೂಲೆ ಇವರದ್ದೇ ಅದನ್ನು ಹಲವು ದಶಕಗಳವರೆಗೆ ಆಳಿದ ಇವರ ಸಾಧನೆ ಅನನ್ಯ.. ನನ್ನೊಂದಿಗೆ ಆಘಾತವನ್ನು ಅ ಘಳಿಗೆಯಲ್ಲಿ ಅನುಭವಿಸಿದ್ದು ಮರೆಯಲಾಗದ ಒಂದು ಘಟನೆ.

chirantana said...

really a sad news.
may his soul rest in peace.