
ಯಕ್ಷಗಾನದಲ್ಲಿ "ದಶಾವತಾರ" ವೆಂಬ ಕಥಾನಕ ಸುಪ್ರಸಿದ್ಧ . ವಿಷ್ಣುವಿನ ಹತ್ತು ಅವತಾರಗಳನ್ನು ಒಂದೇ ರಾತ್ರಿಯಲ್ಲಿ ಪ್ರದರ್ಶಿಸುವುದು ಈ ಪ್ರಸಂಗದಲ್ಲಿ . ಸಾಮಾನ್ಯವಾಗಿ ಪ್ರಸಂಗ ದಶಾವತಾರವಾದರೂ ವಿಷ್ಣುವಿನ ಎಂಟು ಅವತಾರಗಳಾದ ಮತ್ಸ್ಯ , ವರಾಹ ,ನರಸಿಂಹ , ಕೂರ್ಮ , ವಾಮನ ,ಪರಶುರಾಮ , ಶ್ರೀರಾಮ ಹಾಗೂ ಕೃಷ್ಣಾವತಾರಗಳನ್ನು ಮಾತ್ರ ರಂಗದಲ್ಲಿ ಪ್ರದರ್ಶಿಸುವುದು ಸಂಪ್ರದಾಯ . ಇಂದಿಗೂ ಕಟೀಲು ಮೇಳದವರು ಸಂಪ್ರದಾಯದಂತೆ ಎಂಟು ಅವತಾರಗಳನ್ನು ಮಾತ್ರ "ದಶಾವತಾರ" ಪ್ರಸಂಗದಲ್ಲಿ ಆಡಿ ತೋರಿಸುತ್ತಾರೆ . ನಾನಾ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಪೋಣಿಸಿ ಸಿದ್ಧ ಪಡಿಸಿದ ಈ ಪ್ರಸಂಗ ನಿಜಕ್ಕೂ ಆಕರ್ಷಣೀಯವಾಗಿದೆ .

ದಶಾವತಾರದ ಕಥೆಯನ್ನೇ ಆಧರಿಸಿದ ಆದರೆ ಎಂಟು ಅವತಾರಗಳನ್ನು ಮಾತ್ರ "ವಿಷ್ಣು ಲೀಲೆ " ಎಂಬ ಹೆಸರಿನಿಂದ ಶ್ರೀಧರ್ಮಸ್ಥಳ ಮೇಳದವರು ಪ್ರದರ್ಶಿಸುತ್ತಾರೆ . ವಿಷ್ಣು ಲೀಲೆ ಪ್ರಸಂಗವನ್ನು ವಿದ್ವಾನ್ ಶ್ರೀ ಡಿ.ವಿ.ಹೊಳ್ಳರು ಬರೆದುದಾಗಿದ್ದು ಒಳ್ಳೆಯ ಪದ್ಯ ರಚನೆಗಳಿಂದ ಕೂಡಿದೆ. ಅಂತೆಯೇ ಅಡೂರು ಬಳಕಿಲ ವಿಶ್ಣ್ವಯ್ಯನವರು ರಚಿಸಿದ "ದಶಾವತಾರ" ಕೃತಿ ಪ್ರಕಟವಾಗಿದ್ದು ರಂಗದಲ್ಲಿ ಪ್ರಯೋಗಕ್ಕೆ ಇದುವರೆಗೆ ಬಂದಿಲ್ಲ .ಕುತೂಹಲದ ವಿಷಯವೆಂದರೆ ಬೌದ್ಧಾವತಾರ ಹಾಗೂ ಕಲ್ಕ್ಯಾವತಾರವನ್ನೇಕೆ ಮೇಳಗಳು"ದಶಾವತಾರ"ಪ್ರಸಂಗದಲ್ಲಿ ಆಡುತ್ತಿಲ್ಲ ?

ಇದೇ ಬರುವ ಜೂನ್ ತಿಂಗಳಿನಲ್ಲಿ ಮಂಗಳೂರು ಪುರಭವನದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ( ಬೌದ್ಧಾವತಾರ ಹಾಗೂ ಕಲ್ಕ್ಯಾವತಾರ ಸಹಿತ ) ಒಳಗೊಂಡ "ದಶಾವತಾರ" ಪ್ರಸಂಗವನ್ನು ಆಯೋಜಿಸಲಾಗಿದೆ ಎಂದು ಯಕ್ಷಗಾನ ಮಾಸ ಪತ್ರಿಕೆ ಯಕ್ಷಪ್ರಭಾದಲ್ಲಿ ಪ್ರಕಟವಾಗಿದೆ . ಇದರಲ್ಲಿ ಬೌದ್ಧಾವತಾರ ಕ್ಕಾಗಿ "ತ್ರಿಪುರ ಮಥನ " ಪ್ರಸಂಗವನ್ನು ಅಳವಡಿಸಲಾಗಿದೆ . ತ್ರಿಪುರ ಮಥನದಲ್ಲಿ ಬರುವ "ಚಾರ್ವಾಕನೆ " ಬೌದ್ಧಾವತಾರದ "ಬೌದ್ಧ" ಎಂಬುದು ಕುತೂಹಲದ ವಿಚಾರ . ಎಲ್ಲರಿಗೂ ಚಿರಪರಿಚಿತನಾದ ಗೌತಮ ಬುದ್ಧ ದಶಾವತಾರದ ಬುದ್ಧನಲ್ಲ ಎಂಬುದು ಗಮನಿಸಬೇಕಾದ ಅಂಶ.

ಹಾಗೆಯೇ ಬಲಿಪ ನಾರಾಯಣ ಭಾಗವತರು ರಚಿಸಿದ "ಕಲ್ಕ್ಯಾವತಾರ"ಪ್ರಸಂಗದಲ್ಲಿ ಕಲಿಯು ಮ್ಲೇ೦ಛರನ್ನು ದಮನ ಮಾಡಿ ಧರ್ಮ ಸಂರಕ್ಷಣೆ ಮಾಡುವ ಕಥೆಯಿದೆ . ಈ ಪ್ರಸಂಗವು ಅಪ್ರಕಟಿತವಾಗಿದ್ದು ಆಸಕ್ತರು ಪ್ರಕಟಿಸುವ ಕಾರ್ಯ ಮಾಡಿದಲ್ಲಿ ಅನುಕೂಲವಾಗುತ್ತದೆ .

ದಶಾವತಾರದ ವರ್ಣನೆಯನ್ನು ಪುರಂದರ ದಾಸರು ತಮ್ಮ ಕೀರ್ತನೆಯೊಂದರಲ್ಲಿ ತುಂಬ ಸೊಗಸಾಗಿ ,ಸರಳವಾಗಿ ಹೇಳಿದ್ದು ಹೀಗೆ
ಜಲದಲಿ ಮತ್ಸ್ಯವತಾರನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹವತಾರಗೆ
ತರಳನ ಕಾಯ್ದ ನರಸಿಂಹನಿಗೆ
ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದಿರನೆಂಬ ದಶರಥ ಸುತನಿಗೆ
ಭಾಮೆಯರರಸ ಗೋಪಾಲನಿಗೆ
ಬತ್ತಲೆ ನಿಂತಿಹ ಬೌದ್ಧನಿಗೆ
ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ
ಹತ್ತವತಾರದಿ ಭಕ್ತರ ಪೊರೆಯುವ
ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ
ಇದರಲ್ಲಿ ಬರುವ ಬೌದ್ಧ ಚಾರ್ವಾಕ ಸಿದ್ಧಾಂತ ಬೋಧಿಸಿದ ಚಾರ್ವಾಕನೆಂಬುದು ವಿದ್ವಾಂಸರ ಅಭಿಮತ .
ಮೇಲಿನ ದಾಸರ ಪದವನ್ನು ಯಕ್ಷಗಾನಕ್ಕೆ ಅಳವಡಿಸಿ ಹಾಡುವುದನ್ನು ಆಗಾಗ ನಾವು ನೋಡುತ್ತಿರುತ್ತೇವೆ . ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದವರು ಬಿಡುಗಡೆ ಮಾಡಿದ ಪೂರ್ವರಂಗ ಪುಸ್ತಕದಲ್ಲಿ ಈ ಹಾಡನ್ನು ಯಕ್ಷಗಾನದ ರಾಗಕ್ಕೆ ಅಳವಡಿಸಿ ಪಾಠಾ೦ತರ ಮಾಡಿದ್ದು ಓದಲು ಸೊಗಸಾಗಿದೆ.
ಒಟ್ಟಿನಲ್ಲಿ ವಿಷ್ಣುವಿನ ಎಲ್ಲ ಹತ್ತು ಅವತಾರದ "ಸಂಪೂರ್ಣ ದಶಾವತಾರ " ಯಕ್ಷಗಾನವನ್ನು ರಂಗದಲ್ಲಿ ನೋಡಬೇಕಾದಲ್ಲಿ ಜೂನ್ ೬ ರ ಕುರಿತು ಕಾಯಲೇಬೇಕು !
***