Thursday, November 12, 2009

ತೆಂಕಬೈಲು ಹಾಡಿದರೆಂದರೆ...


ರವಿವಾರದ ಸುಂದರ ಸಂಜೆಯ ಹೊತ್ತು ಪುಸ್ತಕ ತಿರುವಿ ಹಾಕುತ್ತಾ ಧ್ವನಿ ಸುರುಳಿಯ ಯಕ್ಷಗಾನ ಹಾಡುಗಳನ್ನು ಕೇಳುತ್ತಾ ಇದ್ದ ನನಗೆ ಹಿರಿಯ ಕವಿಯೊಬ್ಬರು ಗದುಗಿನ ನಾರಣಪ್ಪನವರ ಕುರಿತು

" ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ..."

ಎಂದು ಹೇಳಿದ್ದನ್ನು ಓದಿದಾಗ ಅನಿಸಿದ್ದು ,
ಯಾವನೇ ಯಕ್ಷಗಾನ ಅಭಿಮಾನಿ ಇರುತ್ತಿದ್ದರೆ ಕೆಳಗಿನ ಸಾಲನ್ನು ಹೇಳುತ್ತಿದ್ದ ಅನಿಸಿತ್ತು .

ತೆಂಕಬೈಲು (ಮನಸ್ಸಿಟ್ಟು) ಹಾಡಿದರೆಂದರೆ
ಪ್ರಸಂಗವು ಕಣ್ಣಲಿ ಕುಣಿಯುವುದು
ನಿತ್ಯವೂ ಮನವನು ಕಾಡುವುದು !

ಇನ್ನಾರೆನ್ನನು ಗುಣದಲಿ ಬಣ್ಣಿಸಿ ಮನ್ನಿಸಿ ಕರೆವರು...... ಎಂದು ಸುಶ್ರಾವ್ಯ ಕಂಠದಲ್ಲಿ ಭಾವಪೂರ್ಣವಾಗಿ ಶಾಸ್ತ್ರಿಯವರು ಹಾಡುತ್ತಿದ್ದರೆ ಎಂಥವನೇ ಆದರೂ ಪದ್ಯದ ಲಯದೊಂದಿಗೆ ಲೀನವಾಗಿ ಹೋಗುವಂಥ ಸನ್ನಿವೇಶ ನಿರ್ಮಾಣವಾಗಿರುತ್ತದೆ . ಒಬ್ಬ ಅಪೂರ್ವ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಶ್ತ್ರಿಯವರ ಬಗ್ಗೆ ಕೆಲವೊಂದು ವಿಚಾರಗಳನ್ನು ಬರೆಯಬೇಕೆಂದು ಅನಿಸಿದ್ದು ಅವರ ಉತ್ಕೃಷ್ಠ ಪದ್ಯಗಳನ್ನು ನಿರಂತರ ಆಸ್ವಾದಿಸಿದ ಮೇಲೆ...

ಒಮ್ಮೆಗೇ ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡ ಅನನ್ಯ ಭಾಗವತ . ಶೃಂಗಾರ, ಕರುಣ ದು:ಖ ರಸದ ಪದ್ಯಗಳನ್ನು ಮನಮುಟ್ಟುವಂತೆ ಹಾಡುವ ಇವರು ತಮ್ಮ ವಿಶಿಷ್ಟ ಶೈಲಿಯಿಂದಾಗಿಯೇ ಕಲಾರಸಿಕರನ್ನು ಮತ್ತೆ ಮತ್ತೆ ಹಿತವಾಗಿ ಕಾಡುತ್ತಾರೆ !

ಹಾಗೆಂದು ತೆಂಕಬೈಲುರವರ ಭಾಗವತಿಕೆಯ ಮೇಲೆ ನಿರೀಕ್ಷೆಯಿಟ್ಟು ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ! ಹಾಗೇನಾದರೂ ಹೋದಿರೋ ಆ ದಿನ "ಯಾಕಾದರೂ ಈ ಕೆಟ್ಟ ಹಾಡು ಕೇಳಲು ಬಂದೆನೋ " ಅನಿಸುವಸ್ಟೂ ಪದ್ಯಗಳನ್ನು ಕುಲಗೆಡಿಸಿ ಬಿಟ್ಟಾರು ! ಒಂದು ವೇಳೆ ಸಂಘಟಕನ ಅದೃಷ್ಟ ಶಾಸ್ತ್ರಿಯವರ ಉಲ್ಲಸದಾಯಕ ಮನಸ್ಸು ಜೊತೆ ಸೇರಿದರೆ ಅವರ ಶೈಲಿಯ ಉತ್ತುಂಗ ಸ್ಥಿತಿಯ ಅನಾವರಣವಾಗುತ್ತದೆ. ಅದರ ಸಹಜ ಸೌ೦ದರ್ಯವನ್ನು ಕಂಡ ಎಂಥ ಪ್ರೇಕ್ಷಕನೇ ಆದರೂ "ಸೈ " ಅನ್ನಲೇಬೇಕು . ಹಲವು ನೋವನ್ನು ಅನುಭವಿಸಿದರೂ ಮಾತೆಯೋರ್ವಳು ತಾನು ಪ್ರಸವಿಸಿದ ಮಗುವಿನ ಮೊಗವನ್ನು ನೋಡಿ ನೋವನ್ನು ಮರೆವಂತೆ ಹಿಂದೆ ಕೇಳಿದ ಎಲ್ಲಾ ಕೆಟ್ಟ ಪದ್ಯಗಳನ್ನೂ ಹೊಡೆದು ಹಾಕಿ ಬಿಡಬಲ್ಲ ಅಸಾಧಾರಣ ಸಾಮರ್ಥ್ಯ ತೆಂಕಬೈಲುರವರಲ್ಲಿ ಮಾತ್ರ ಕಾಣಬಹುದೇನೋ?

ದಕ್ಷಾಧ್ವರ-ಗಿರಿಜಾಕಲ್ಯಾಣ , ಇಂದ್ರಜಿತು ಕಾಳಗ , ತುಳಸಿ ಜಲಂಧರ , ಕಂಸವಧೆ ,ಕರ್ಣಪರ್ವ ,ಸುಧನ್ವ ಮೋಕ್ಷ , ಪಟ್ಟಾಭಿಷೇಕ , ವಿದ್ಯುನ್ಮತಿ ಕಲ್ಯಾಣ ,ಶರಸೇತು ಬಂಧನ ಮುಂತಾದ ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಇವರ ಕುರಿತು ಹಿರಿಯ ಭಾಗವತರೊಬ್ಬರು ಹೇಳಿದ್ದು ಹೀಗೆ " ಶಾಸ್ತ್ರಿಯವರಲ್ಲಿ ವೃತ್ತಿಪರತೆಯ ಸ್ಥಿರತೆಯ ಕೊರತೆ ಇದೆ. ಅದೊಂದು ಬಿಟ್ಟರೆ ಯಾವ ಕ್ಷಣದಲ್ಲಾದರೂ ಸಿಡಿಲಮರಿಯ ಹಾಗೆ ಅವರು ವಿಜೃ೦ಭಿಸಿಯಾರು . ಅದು ಯಾವಾಗ ಅಂತ ತರ್ಕಿಸುವುದೇ ಕಷ್ಟ ". ಆದ್ದರಿಂದಲೇ ಅವರೊಬ್ಬ ಅನನ್ಯ (unique) ಭಾಗವತ ...!

ಅವರ ಶೈಲಿಯನ್ನು ಅನುಕರಿಸುವುದು ಅಸಾಧ್ಯ . ಅಪ್ಪನ ಶೈಲಿಯನ್ನು ಮಕ್ಕಳು ಅನುಸರಿಸುವುದು ಹಿರಿಯ ಭಾಗವತರ ಮನೆತನದಲ್ಲಿ ಕಾಣುತ್ತೇವೆ . ಆದರೂ ಇವರ ಮಗ ಅಪ್ಪನಂತೆ ಪ್ರಸಂಗವನ್ನು ಮೆರೆಸುವ ಕ್ರಮವನ್ನು ಕರಗತ ಮಾಡಿಕೊಳ್ಳಬೇಕಿದೆ . ಅವರ ಶೈಲಿಯ ಉತ್ತರಾಧಿಕಾರಿಗಳು ಅದನ್ನು ಸಮರ್ಥವಾಗಿ ಕಲಿತರೆ ಪ್ರೇಕ್ಷಕನಿಗಾಗುವ ಲಾಭ ಅಪರಿಮಿತ . ಸಮೀಪವರ್ತಿಗಳು ಹೇಳುವಂತೆ ತೆಂಕಬೈಲುರವರು ಶೀಘ್ರಕೋಪಿ (ದೂರ್ವಾಸರ ಕುಲದವರು !). ಅವರಿಗೇನಾದರೂ ಸ್ವರ ಬಿದ್ದರೆ "ಛೆ " ಮದ್ದಲೆ ಸರಿ ಇಲ್ಲೆ" ಎಂದು ಎದ್ದು ಹೋದದ್ದೂ ಇದೆ !

ದ್ವಂದ್ವ ಕಾರ್ಯಕ್ರಮ , ಯಕ್ಷ ಸಂಗೀತ ಕಾರ್ಯಕ್ರಮಗಳಲ್ಲಿ ಎದ್ದು ಕಾಣಿಸುವ ಇವರ ಬತ್ತಳಿಕೆಯಲ್ಲಿ ಅಪೂರ್ವ ರಾಗಗಳ ಸಂಗ್ರಹವೇ ಇದೆ. ಪ್ರಸಂಗವನ್ನು ಸರಿಯಾಗಿ ಅಧ್ಯಯನ ಮಾಡಿಯೇ ರಂಗವೇರುವ ಇವರು ಸದಾ ಮನಸೂರೆಗೊಳ್ಳುವ ಭಾಗವತರಲ್ಲಿ ಪ್ರಮುಖರು.




ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ನೆಲೆಯಾಗಿರುವ ಇವರಿಗೆ ಹೆಚ್ಚಿನ ಅವಕಾಶ, ಪ್ರಚಾರಗಳು ದೊರಕದಿದ್ದರೂ, ಕೇಳುಗರ ಮನದಲ್ಲಿ "ಹಿತವಾಗಿ ಗಿರಕಿ ಹೊಡೆಯುವ " ಅಪೂರ್ವ ಕಲೆಗಾರಿಕೆ ಹೊಂದಿದ ಇವರ ಕಂಠದಲ್ಲಿ ಮೂಡಿ ಬಂದ
ದೇವಿ ಮಹಾತ್ಮೆಯ "ನೋಡಿದನು ಕಲಿ ರಕ್ತಬೀಜನು ....." ರಾವಣವಧೆಯ " ಕಂಡನು ದಶವದನ ...." ದಕ್ಷಾಧ್ವರದ "ಯಾತಕೆ ಬಂದೆನು ತಾನೇ
ಪಾತಕಿ ಮಾಡುವ ...." ಜಲಂಧರನ ಕಾಳಗದ " ಕೇಳು ಶ್ರೀರಮೆ ... ಕರುಣ ಸಾಗರೆ " ಕರ್ಣ ಪರ್ವದ "ಭಾನುಸುತ ರಥವಿಳಿದು ...." ಮುಂತಾದ ಪದಗಳು ಮತ್ತೆ ಮತ್ತೆ ಕೇಳುವಂತೆ ಮಾಡಿ ತಲೆಯಲ್ಲಿ ಹಿತವಾಗಿ ಸುತ್ತುತ್ತಾ , ಬಾಯಿಯಲ್ಲಿ ಗುನುಗುನಿಸುತ್ತಾ " ಕೊಂಡಾಟದ " ಅನುಭವವನ್ನು ನೀಡುತ್ತದೆ.

ಕೆಳಗಿನ ಕೊಂಡಿಯಲ್ಲಿ ತೆಂಕಬೈಲು ಶಾಸ್ತ್ರಿಯವರ ಹಾಡುಗಳನ್ನು ಕೇಳಿ ಆನ೦ದಿಸಬಹುದು .

http://oyakshagana.googlepages.com/audios.htm




ಏನಿದ್ದರೂ ಇಂಥ ಅಪೂರ್ವ ಕಲಾವಿದನ ಪದ್ಯಗಳ ಮಾದರಿ ಸಂಗ್ರಹವನ್ನು ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಇಡಬೇಕಾದ ಹೊಣೆಗಾರಿಕೆ ಇಂದು ಅವರ ಪದ್ಯಗಳನ್ನು ಆಸ್ವಾದಿಸುವ ಕಲಾರಸಿಕರಾದ ನಮ್ಮೆಲ್ಲರ ಗುರುತರ ಜವಾಬ್ದಾರಿಯಲ್ಲವೆ ?

***

Wednesday, November 11, 2009

ಪುಟಾಣಿಗಳ ಯಕ್ಷಲೋಕ



ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ . ಹಲವು ಶತಮಾನಗಳ ಇತಿಹಾಸವಿರುವ ಈ ಕಲೆ ಆರಾಧನಾ ಕಲೆಯಾಗಿ ಆವಿರ್ಭವಿಸಿ , ಮನೋರಂಜನಾ ಕಲೆಯಾಗಿ ಬೆಳೆದು ಬಂದಿದೆ. ಗಂಡು ಮೆಟ್ಟಿನ ಕಲೆಯೆಂದೇ ಯಕ್ಷಗಾನ ಪ್ರಸಿದ್ದವಾದರೂ ಸ್ತ್ರೀಯರೂ ಇತ್ತೀಚಿಗೆ ಈ ಕಲೆಯನ್ನು ಮೈಗೂಡಿಸಿ ಪ್ರದರ್ಶನಗಳನ್ನು ನೀಡುತ್ತಿರುವುದನ್ನು ನಾವು ಇತ್ತೀಚಿಗೆ ಕಾಣುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ . ಇಂದು ಅಳಿದುಳಿದಿರುವ ಕಲೆಯನ್ನು ಮಕ್ಕಳಿಗೆ ಕಲಿಸಿ "ಬಿಡುವಿಲ್ಲದ" ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಹಲವು ಹಿರಿಯರನ್ನು ನಾವು ಮನಸಾ ಮೆಚ್ಚಲೇಬೇಕು .

ಮಕ್ಕಳಿಗೆ ಯಾವುದೇ ಕಲೆಯನ್ನು ಕಲಿಸುವುದು ಸುಲಭ . ನಿರ್ಮಲ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತಲು ಬಾಲ್ಯವೇ ಸಕಾಲ. ಕಲಿಸಿದ ವಿಚಾರಗಳನ್ನು ಶೀಘ್ರವಾಗಿ ಕರಗತ ಮಾಡಿಕೊಳ್ಳಬಲ್ಲ , ಹೇಳಿಕೊಟ್ಟದ್ದನ್ನು ಚಾಚೂ ತಪ್ಪದೆ ಒಪ್ಪಿಸುವ ಕಲೆಗಾರಿಕೆಯುಳ್ಳ ಮಕ್ಕಳು ಉತ್ತಮವಾದ ಯಕ್ಷಗಾನ ಪ್ರದರ್ಶನ ನೀಡುವುದು ಸಂತಸದ ವಿಚಾರ .
ಮಕ್ಕಳ ಮೇಳ ಎಂದೇ ಪ್ರಸಿದ್ಧವಾಗಿರುವ ಸಾಲಿಗ್ರಾಮದ ಮಕ್ಕಳ ಮೇಳ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ದಕ್ಷಿಣ ಕನ್ನಡದ ಹಲವಾರು ಶಾಲೆಗಳಲ್ಲಿ ಇಂಥ ಮಕ್ಕಳ ಮೇಳಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ .
ಬೆಂಗಳೂರು , ಮುಂಬೈಯಂಥ ಮಹಾನಗರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕರಾವಳಿ ಕರ್ನಾಟಕ ಮೂಲದ ಪಾಲಕರ / ಪೋಷಕರ ಪರಿಶ್ರಮದಿಂದಾಗಿ ರೂಪುಗೊಂಡ ವೃತ್ತಿಪರ ಮಟ್ಟದ ಪ್ರದರ್ಶನವನ್ನು ನೀಡಬಲ್ಲ ಮಕ್ಕಳ ಮೇಳವಿರುವುದು ಹೆಮ್ಮೆಯ ವಿಷಯ.



ಮಕ್ಕಳ ಮನಸ್ಸಿನಲ್ಲಿ ಪೌರಾಣಿಕ ಜ್ಞಾನ , ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂಥ ಪ್ರಯತ್ನಗಳು ಸಹಕಾರಿಯಾಗುತ್ತವೆ. ಹಿರಿಯ ಕಲಾವಿದರ ಮಾರ್ಗದರ್ಶನ , ಮುಖವರ್ಣಿಕೆ , ಪ್ರಸಂಗ ಸಾಹಿತ್ಯ ಪರಿಚಯವೇ ಮೊದಲಾದುವನ್ನು ಸರಿಯಾಗಿ ಸಮ್ಮಿಳಿತಗೊಳಿಸಿ ಮಕ್ಕಳಿಗೆ ಕಲಿಸಿದಲ್ಲಿ ಅವರ ಭಾಷಾ ಜ್ಞಾನ , ಮಾತುಗಾರಿಕಾ ಕೌಶಲ ಹೆಚ್ಚುವುದರೊಂದಿಗೆ ಯಕ್ಷಗಾನ ಕಲೆಯು ಜೀವಂತವಾಗಿ ಮುಂದಿನ ಪೀಳಿಗೆಯಲ್ಲೂ ಮುಂದುವರಿದು ಅದರ ರಸಾಸ್ವಾದನೆಗೆ ಅವಕಾಶವಾಗುತ್ತದೆ ಅಲ್ಲವೇ ?
***

Friday, October 23, 2009

ಮತ್ತೆ ಕಳೆಯಿತು ದೀಪಾವಳಿ....




ದೀಪಾವಳಿ ಬರುತ್ತಿದ್ದಂತೆ ಮನೆಗಳಲ್ಲಿ ಸಡಗರ ಸಂಭ್ರಮ . ಮಕ್ಕಳೆಲ್ಲ ಸೇರಿ ಪಟಾಕಿಗಳನ್ನು "ಸಂಪಾದಿಸುವ " ಲೆಕ್ಕಾಚಾರ ಹಾಕಿ ಅಪ್ಪನಿಗೆ ತಿಳಿಸಲು ಅಮ್ಮನಲ್ಲಿ "ಮಸ್ಕ" ಹಾಕುವ ನಾನಾ ಉಪಾಯಗಳನ್ನು ಮಾಡುತ್ತಿದ್ದ ಕಾಲ . ಅಕ್ಕಂದಿರೆಲ್ಲ ಸೇರಿ ಮಹಿಳಾ ಮಂಡಲದಿಂದ ತಂದ ಬಗೆ ಬಗೆಯ ಕಾದಂಬರಿಗಳನ್ನು ಓದಿ ಮುಗಿಸುವ ತರಾತುರಿಯಲ್ಲಿದ್ದರೂ ತಿಂಡಿ ತಯಾರಿಸುವ ಕಾಯಕದಲ್ಲಿ ಪುಸ್ತಕ ಹಿಡಿದೇ ಭಾಗಿಗಳಾಗುತ್ತಿದ್ದುದು ಒಂದೆಡೆಯಾದರೆ ಅಪ್ಪನ ಮಿತ್ರರು ಸಂಜೆಯ ಹೊತ್ತಿನಲ್ಲಿ ಈ ಸರ್ತಿ ಧರ್ಮಸ್ಥಳ ಮೇಳದ ಹೊಸ ಪ್ರಸಂಗ ಯಾವುದು? ಯಾರೆಲ್ಲ ಕಲಾವಿದರು ? ಎಲ್ಲಿ ಪ್ರದರ್ಶನ ? ಇತ್ಯಾದಿ ಚರ್ಚೆಯಲ್ಲಿ ತೊಡಗುತ್ತಿದ್ದರು.


ಗುಡ್ಡೆಯ ಮುಳಿ ಹುಲ್ಲು ಕಟಾವಿಗೆ ಬಂದು , ನೆಲ್ಲಿಕಾಯಿ ಮರದಲ್ಲಿ ಪೀಚುಗಾಯಿ ಬಲಿಯುವ ಸಮಯ .... ತೋಟದ ಬದಿ ದಾಟಿ ಆ ಕಡೆಯ ಗುಡ್ಡದ ನೆಲ್ಲಿಕಾಯಿ ಮರಕ್ಕೆ ದಿನಕ್ಕೊಮ್ಮೆಯಾದರೂ ಬಲಿ ಬರದೆ ಇದ್ದರೆ " ಅದೇನೋ" ಕಳಕೊಂಡ ಅನುಭವ !


ಬೆಳಗ್ಗೆ ನಾವು ಏಳುವ ಮೊದಲೇ "ಮೋತಿ " ಮತ್ತು "ದಾಸು" ಎಂಬ ಶುನಕೋತ್ತಮರು ಚಿಕ್ಕಿನ ಮರದ ಕೆಳಗೆ ಬಿದ್ದ ಮರದಲ್ಲೇ ಹಣ್ಣಾದ ಚಿಕ್ಕಿನ ಹಣ್ಣನ್ನು ಸವಿದು ಮೆಲ್ಲನೆ "ಸುಭಗರಂತೆ " ಬಂದು ಬೆಳಗ್ಗಿನ ತಿಂಡಿಗೋಸ್ಕರ ಕಾಯುತ್ತಿದ್ದರೆ, ಚಿಕ್ಕ ಕೊಕ್ಕೆಯನ್ನು ಹಿಡಿದು ಮರದ ಬಳಿಗೆ ಹೋಗುವ ಅಮ್ಮ ಒಂದು ಹಣ್ಣು ಸಿಕ್ಕರೆ ಸಣ್ಣ ಮಗನಿಗೆ ಕೊಡಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದರೆ, ಚಿಕ್ ಚಿಕ್ ಚೀವ್ ಎಂದು ಮರವೇರುವ ಅಳಿಲು ಅಣಕಿಸುವಂತೆ ಓಡುತ್ತಿತ್ತು .

ಹಟ್ಟಿಯಿಂದ "ಕಮಲಿ" ತನ್ನ ಮಗಳು ನಂದಿನಿಯ ಬೆನ್ನನ್ನು ನೆಕ್ಕುತ್ತ ಶುಭ್ರ ಮಾಡುತ್ತಿದ್ದಾರೆ , ಕೆಲಸದ ಸಂಕಪ್ಪಣ್ಣ ತುಂಡು ಬೀಡಿಯನ್ನು ಸೇದುತ್ತ ಅದರ ಕೊನೆಯ ರಸಾಸ್ವಾದನೆ ಮಾಡುತ್ತ ಕತ್ತಿ ಮಸೆಯಲು ಕೂರುತ್ತಿದ್ದ. ಅದಾಗಲೇ ಆ ದಿನದ ಕೆಲಸವೇನೆಂದು ಅಪ್ಪ ಹೇಳಿ ಬಿಡುತ್ತಿದ್ದರೆ ನಾವೆಲ್ಲ "ಸ೦ಕಪ್ಪಣ್ಣ ಒಂದು ಗೂಡು ದೀಪ ಮಾಡಿ ಕೊಡೆಕ್ಕು " ಎಂಬ ಅಪ್ಪಣೆಯನ್ನು ನೀಡುತ್ತಿದ್ದರೆ "ದೇಶಾವರಿ ನಗೆ " ಬೀರುತ್ತ "ಆತು ಅಬ್ಬೋ ಮತ್ತೆ ಮಾಡಿ ಕೊಡ್ತೆ !" ಎಂದು ಹೇಳುವಲ್ಲಿವರೆಗೆ ನಮ್ಮ ಕಾಟ ತಪ್ಪುತ್ತಿರಲಿಲ್ಲ ! ಮಾದೇರಿ ಬಳ್ಳಿಯಿಂದ ತಯಾರಿಸಿದ ಗೂಡು ದೀಪಕ್ಕೆ ನಾನಾ ಬಣ್ಣದ ಕಾಗದವನ್ನು ಅಂಟಿಸಿ ಅದರೊಳಗೆ ಒಂದು ಉರಿಯುವ ಹಣತೆಯಿಟ್ಟರೆ ರಾತ್ರಿಯಲ್ಲಿ ಕಾಣುವ ಸೊಬಗೇ ಬೇರೆ !



ಮಧ್ಯಾಹ್ನ ಊಟ ಕಳೆದು ಅಪ್ಪ ಕಿರು ನಿದ್ದೆಗೆ ಜಾರಿದಾಗ ಏನೆಲ್ಲಾ ಪಟಾಕಿ ಎಲ್ಲಿ ಸಿಗುತ್ತದೆ ? ಇತ್ಯಾದಿಯ ಬಗ್ಗೆ ಸವಿವರವಾದ ಚರ್ಚೆ ಅಣ್ಣನೊಡನೆ ಆದ ಬಳಿಕ ಅಪ್ಪ ಏಳುವುದನ್ನೇ ಕಾಯುವ ತವಕ . ಎದ್ದ ಮೇಲೆ ಪೇಟೆಗೆ ಹೋಗುವಾಗ ಜತೆಯಲ್ಲಿ ಯಾರು ಹೋಗುದು ? ಎಂಬ ವಿಚಾರ ಬಂದಾಗ ಅನುಭವೀ ಅಣ್ಣನೆ ಹೋಗುವುದೊಳಿತು ಎಂಬ ನಿರ್ಧಾರವೂ ಆಗಿರುತ್ತಿತ್ತು.

ಅಪ್ಪ ಎದ್ದು ಮುಖ ತೊಳೆದು ಅಮ್ಮ ಕೊಟ್ಟ ಚಹಾ ಸೇವಿಸಿ "ಚೀಲ ತಾ " ಎಂದಾಗ ಓಡಿ ಹೋಗಿ ಚಡ್ಡಿ ಅಂಗಿ ಸಿಕ್ಕಿಸಿಕೊಂಡ ಅಣ್ಣ ಅಪ್ಪನೊಡನೆ ಹೊರಟಾಗ ದೂರದಿ೦ದಲೇ ಅಸೆಗಣ್ಣಿನಿ೦ದ "ಬೇಗ ಬರೆಕ್ಕು ಆತಾ? " ಎಂದು ಹೇಳಿ ಕಳುಹಿಸಿದ ಮೇಲೆ ಕ್ಷಣವೊಂದು ಯುಗವಾದ ಅನುಭವ !

ಅಣ್ಣ ಹೇಳಿದ ಎಲ್ಲ ಪಟಾಕಿ ತರುತ್ತಾನೋ ಇಲ್ಲವೋ ? ಒಂದು ವೇಳೆ ಪೈಗಳ ಅಂಗಡಿಯಲ್ಲಿ ಪಟಾಕಿ ಮುಗಿದಿದ್ದರೆ ? ಇತ್ಯಾದಿ ಮನದಲ್ಲಿ ಸ್ವಲ್ಪ ತಳಮಳ ... ಅಣ್ಣ ಎಲ್ಲ ಪಟಾಕಿ ತಂದರೆ ಯಾವುದರ ಬಳಿಕ ಯಾವುದು? ಬಿಡುವುದು ಇತ್ಯಾದಿ ಕಲ್ಪನಾಲೋಕ ದಲ್ಲಿ ವಿಹರಿಸಿ ಅಮ್ಮನಲ್ಲಿ "ಅಪ್ಪ ಎಷ್ಟು ಹೊತ್ತಿಂಗೆ ಬಕ್ಕು ?" ಎಂದು ಕೇಳಿ ಎರಡು ಬೈಗುಳ ತಿನ್ನುವುದರ ಹಿತ ಬಲ್ಲವನಿಗೆ ಗೊತ್ತು!

ಅಂತೂ ಸಂಜೆಯ ಹೊತ್ತಿಗೆ ಅಂತೂ ಸಂಜೆಯ ಹೊತ್ತಿಗೆ ಅಪ್ಪನ ಸಮೇತ ಅಣ್ಣ ದೂರದ ಗೇಟಿನ ಬಳಿ ಪ್ರತ್ಯಕ್ಷವಾದಾಗ ಓಡಿ ಹೋಗಿ "ಎಲ್ಲ ಸಿಕ್ಕಿದ್ದ ?" ಎಂದು ಸಡಗರದಿಂದ ಕೇಳಿ ಹ್ನೂ ... ಎಂಬ ಉತ್ತರ ಪಡೆದಾಗ ಏನೋ ತೃಪ್ತಿ ...

ಸೂರ್ಯಾಸ್ತವಾದ ಬಳಿಕ ಅಮ್ಮ ದೀಪ ಹಚ್ಚಿದ ಕೂಡಲೇ ಅಪ್ಪ ಸ್ನಾನಕ್ಕೆ ಹೋಗಿ ಬಂದು ಪೂಜೆ ಮುಗಿಸುದನ್ನೇ ಕಾದು ಕುಳಿತು ಬಹು ನಿರೀಕ್ಷಿತ ಪಟಾಕಿ ಬಿಡುವ ಕಾರ್ಯಕ್ರಮ ಆರಂಭವಾಗುತ್ತಿತ್ತು. ದೊಡ್ಡ ಶಬ್ದದ ಪಟಾಕಿ ಅಪ್ಪನಿಗೆ , ನೆಲಚಕ್ರ , ಹೂ ಕುಂಡ ಇತ್ಯಾದಿ ಅಣ್ಣನಿಗೆ ಸಿಕ್ಕರೆ ನಕ್ಷತ್ರ ಕಡ್ಡಿಗಳ ಒಡೆತನ ನನ್ನ ಪಾಲಾಗುತ್ತಿತ್ತು!

ಅಪ್ಪನ ಜೇಬಿನ ದುಡ್ಡುಗಳೆಲ್ಲವು
ಚಟ ಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಪ್ಪದೆ ದಾರಿಯ ಹಿಡಿಯುವುವು

ಎಂದು ಕವಿ ಪುಂಗವರೊಬ್ಬರು ಹೇಳಿದರೂ ಪಟಾಕಿ ಬಿಡುವ ಆನಂದ ಬಹುಶ ಅವರು ಸವಿದಿರಲಿಕ್ಕಿಲ್ಲ ಎಂಬ ಸತ್ಯಾ೦ಶವನ್ನೂ ಹೊರಗೆಡಹುತ್ತದೆಯಷ್ಟೆ?

ಏನಿದ್ದರೂ ನಿರ್ಮಲ ಮನಸ್ಸಿನ ಬಾಲ್ಯದಲ್ಲಿ ಮನೆಯವರೆಲ್ಲ ಸೇರಿ ಗೌಜಿ ಗದ್ದಲದೊಂದಿಗೆ ಪಟಾಕಿ ಸಿಡಿಸಿ ಆನಂದಿಸಿದ್ದು ಬಹುಕಾಲ ಸ್ಮರಣೀಯ.

****

ಹೈಸ್ಕೂಲ್ ದಿನಗಳಲ್ಲೋ ಪಟಾಕಿಯ ಸೆಳೆತ ಕಡಿಮೆಯೇನಲ್ಲ ... ಆಗಂತೂ ಅಪ್ಪನಿಗೆ ಕಾಯುವ ಅವಶ್ಯವಿಲ್ಲ ... ಪಟಾಕಿ ಎಲ್ಲಿ ಸಿಗುತ್ತದೆ.. ಎಷ್ಟು ತರಬೇಕು ಎಲ್ಲ ನಮ್ಮದೇ ಪಾರುಪತ್ಯ ...
ಅಕ್ಕಂದಿರೋ ತಮ್ಮ ಪದವಿ ಪರೀಕ್ಷೆಗಳ ತರಾತುರಿಯಲ್ಲಿದ್ದರೆ ಹಬ್ಬದ ಆಚರಣೆ ನಿರಾತಂಕ... !

ಶಾಲೆಯಲ್ಲಿ ಯಕ್ಷಗಾನದ ತರಗತಿಗಳು ; ಮನೆಯಲ್ಲಿ ಅಭ್ಯಾಸ....ಮಧ್ಯೆ ಮಧ್ಯೆ ಗಣಿತದ ಮೇಸ್ಟ್ರ ಮನೆಲೆಕ್ಕದ ಹಾವಳಿ ! ಬರೆದೂ ಬರೆದೂ ಸುಸ್ತಾಗುವಷ್ಟು ನೋಟ್ಸ್ ಗಳು ಅಯ್ಯಪ್ಪಾ ಸಾಕು ಸಾಕು ....

ಹೀಗಿದ್ದರೂ ದೀಪಾವಳಿ ಕಳೆಯುವುದನ್ನೇ ಕಾಯುತ್ತಿದ್ದುದು "ಉದಯವಾಣಿಯಲ್ಲಿ " ಬರುವ ಧರ್ಮಸ್ಥಳ ಮೇಳದ "ವೇಳಾ ಪಟ್ಟಿ"ಗೆ !
ಯಾವುದಿರಬಹುದು ಹೊಸ ಪ್ರಸಂಗ ? ಯಾರದಿರಬಹುದು ಕಥೆ ?

ಸುರತ್ಕಲ್ ಮೇಳದವರದ್ದೇನು ಪ್ರಸಂಗ ? ಜೋಗಿ -ಸುಂದರಣ್ಣನ ಜೋಡಿಗೆ ಪದ್ಯಾಣ ಗೆಣಪ್ಪಣ್ಣನ ಪದ! ಶ್ರೀನಿವಾಸ ಕಲ್ಯಾಣ ಪ್ರಸಂಗ ! ಇತ್ಯಾದಿ ಕಾತರ ... ಕುತೂಹಲ...

ಇದರ ಮಧ್ಯೆ ಆಚೆ ಮನೆ ಪೋಸ್ಟ್ ಮಾಸ್ತರ ಮಗಳು ಎಲೆಕ್ಟ್ರಿಸಿಯನ್ ಜೊತೆ ಓಡಿ ಹೋದ ಬಿಸಿ ಬಿಸಿ ರಂಗು ರಂಗಿನ ಸುದ್ದಿ...!

ಇನ್ನೊಂದೆಡೆ ಆಗಷ್ಟೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದ "ದೊಡ್ಡವರ ಚಂದಮಾಮ " "ದೊಡ್ಡವರ ಬಾಲಮಂಗಳದ " ರಸಭರಿತ ಕಥೆಗಳ ಗುಟ್ಟಾದ ವಿನಿಮಯ !

ದೀಪಾವಳಿ ರಂಗೇರಿಸುತ್ತಿದ್ದುದಂತೂ ಸತ್ಯ !

****

ಕಾಲೇಜು ದಿನ ಮುಗಿದು ಅಕ್ಕಂದಿರಿಗೆ ಮದುವೆ ಕಳೆದು ಮತ್ತೆ ಅಕ್ಕ ಭಾವಂದಿರಿಗೆ ಮನೆಯಲ್ಲಿ ಹೊಸ ದೀಪಾವಳಿ ...
ಆಗ ಸೆಮಿಸ್ಟರ್ ಪರೀಕ್ಷೆ ನೆಪದಲ್ಲಿ ಗೈರು ಹಾಜರಿ...!

****

ಪದವಿ ಮುಗಿದು ಕೆಲಸದ "ಗಾಣಕ್ಕೆ " ಹೆಗಲು ನೀಡಿದ ಮೇಲೆ ಅಕ್ಕನ ಮಕ್ಕಳೆಲ್ಲ ಮನೆ ತುಂಬಾ ಗುಲ್ಲೆಬ್ಬಿಸುತ್ತಿದ್ದು "ಮಾಮ ಯಾವಾಗ ಬತ್ತೆ?" ದೂರವಾಣಿ ಕರೆ ....!

ಮತ್ತೆ ಬಂತು ದೀಪಾವಳಿ....

ಎಲ್ಲರೊಡನೆ ಬೆರೆಯಲು ನಾಲ್ಕು ದಿನ ಸವಿಯುಣ್ಣಲು ಹರಸಾಹಸ ಮಾಡಿ ಮೆಜೆಸ್ಟಿಕ್ ದಾರಿ ಹಿಡಿದರೆ ......

"ಸೂಜಿ ಮೊನೆ ಊರುವಷ್ಟು..."
ಜಾಗವಿಲ್ಲ ಜನ ದಟ್ಟಣೆ ... ಬಸ್ಸಿನ ಕಿಟಕಿ ಮೂಲಕ ಒಳ ನುಗ್ಗಿ ಸೀಟ್ ಹಿಡಿದಾಗ ಬರುವುದು "ಉಸ್ಸಪ್ಪಾ" ಎಂಬ ದೀರ್ಘ ಸಮಾಧಾನದ ಉಸಿರು !

ಅಯ್ಯೋ ಎಂಥಾ ಕೆಟ್ಟ ರಸ್ತೆ.... ಘಾಟಿ ರಸ್ತೆಯಂತೂ ಹೇಳಿ ಪ್ರಯೋಜನವಿಲ್ಲ ...ಅದೇ ಹೊ೦ಡ .... ಅದೇ ಗುಂಡಿ ...!

ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಕಾಮಗಾರಿ ಯಾಕೋ ಇನ್ನೂ ನಡೆದೇ ಇಲ್ಲ ...!

ಬೆಳಗ್ಗೆ ಮನೆ ಸೇರಿದಾಗ ಕೊನೆಯ ಸೀಟ್ ನಲ್ಲಿ ಕುಳಿತ ಪರಿಣಾಮ ! ಸೊಂಟದ ಕೀಲುಗಳೆಲ್ಲ "ಸಂಗೀತ " ಹೇಳಲು ತೊಡಗುತ್ತದೆ ..

ಮನೆ ಸೇರಿದ ಮೇಲೆ ತಲೆಗೆ ಎಣ್ಣೆ ( ಹೊಟ್ಟೆಗಲ್ಲ..... ! ) ಹಚ್ಚಿ ಹಂಡೆಯಲ್ಲಿ ಕಾದ ಬಿಸಿ ನೀರಿನ ಸ್ನಾನವಾದಾಗ ಒಮ್ಮೆ ಹಾಯ್ ಎನಿಸಿ ಮಕ್ಕಳೊಡನೆ ಮಕ್ಕಳಾಗುವ ಹಿತ ಏನು ಚೆನ್ನ !

ಈಗಲಂತೂ ಎಲ್ಲರೂ ಸೇರುವ ಸಾದ್ಯತೆ ಇಲ್ಲ .... ಒಬ್ಬರಿಗೆ ತಿಂಗಳ ಟಾರ್ಗೆಟ್ .... ಇನ್ನೊಬ್ಬರಿಗೆ ಇನ್ನೊದು ತುರ್ತು ... ಅದರೂ ಸೇರಿದ ನಾಲ್ಕು ಜನ ಮಜಾ ಮಾಡಿ ಪಟಾಕಿ ಬದಲು ಉಳಿದವರ ಹೊಟ್ಟೆ ಉರಿಸಿ ಸಂತಸ ಪಡುವ ಕಾಲ !

ಹೊಸ ಮೇಳ ... ಹೊಸ ಆಡಳಿತ ...
ಹಳೆ ಚುಂಡಿ ಕಲಾವಿದರು ಮುಖ್ಯ ಪಾತ್ರಧಾರಿಗಳು !
ಹಾಡಿದ್ದೇ ಹಾಡು ಮಾಡಿದ್ದೇ ಆಟ !


ಎಲ್ಲ ಕಾಲಸ್ಯ ಕುಟಿಲಾಗತಿ... ..!




ಏನಿದ್ದರೂ ..... ಹೇಗಿದ್ದರೂ ..

ಮತ್ತೆ ಹೊಸತನ ... ಹೊಸ ಬಾಂಧವ್ಯ ... ಚಿಗುರೊಡೆಯುವ ಸಂಭವ ....
ಹೊಸ ಆಸೆ ... ಹೊಸ ಕಾತರ ... ನಿರೀಕ್ಷೆಗಳನ್ನು ಬಿಟ್ಟು ಮತ್ತೆ ಕಳೆಯಿತು ದೀಪಾವಳಿ....

ಅಲ್ಲವೇ ?

****

Thursday, September 10, 2009

ಎಲ್ಲರು ಮಾಡುವುದು ಹೊಟ್ಟೆಪಾಡಿಗಾಗಿ...














ಮೊದಲೇ ಹೇಳಿಬಿಡುತ್ತೇನೆ . ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ . ಅದ್ದರಿಂದ ಇಂಥ ಒಂದು ವಿಷಯವನ್ನು ಪ್ರಸ್ತಾಪ ಮಾಡಲು ಹೊರಟಿದ್ದೇನೆ .


ಕರಾವಳಿ ಕರ್ಣಾಟಕದ ಹೆಮ್ಮೆಯ ಕಲೆ ಯಕ್ಷಗಾನವೆಂಬುದು ಸರ್ವ ವಿದಿತ . ಯಕ್ಷಗಾನವು ಆರಾಧನಾ ಕಲೆಯಾಗಿ ಆರಂಭಗೊಂಡು ಪೌರಾಣಿಕ ಪುಣ್ಯ ಕಥಾ ಭಾಗಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮನೋರಂಜನಾ ಕಲಾ ಮಾಧ್ಯಮವಾಗಿ ಹಲವು ಶತಮಾನಗಳಿಂದ ಬೆಳೆದು ಬಂದಿದೆ. ಅನುಭವಿಗಳು ಹಿರಿಯರು ಹೇಳುವಂತೆ ಅದು ತನ್ನ ಉನ್ನತಿಕೆಯನ್ನು ಹೊಂದಿ ಇತ್ತೀಚಿಗೆ ಅವನತಿಯತ್ತ ನಿಧಾನಗತಿಯಿಂದ ಸಾಗುತ್ತಿದೆ ಎಂಬುದು ಇಂದಿನ ಹಲವು ಘಟನೆಗಳಿಂದ ಅನುಭವವೇದ್ಯವಾಗುತ್ತಿದೆ . ಯಕ್ಷಗಾನ ಕಲಾ ಪ್ರಕಾರ ಯಾವಾಗ ವಾಣಿಜ್ಯೀಕರಣ ಹೊಂದಿತೋ ಆಗಲೇ ಎಲ್ಲ ಕಲಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕಾಲಗತಿಯಿಂದ ಮತ್ತು ಕಲಾವಿದನ ಆರ್ಥಿಕ ನೆಲೆಗಟ್ಟಿನಲ್ಲಿ ಅದಕ್ಕೆ ವ್ಯಾಪಕ ಪ್ರೋತ್ಸಾಹವೂ ದೊರೆಯಿತು .ಇದು ಒಂದು ದೃಷ್ಟಿಯಿಂದ ಕಲೆಯ ಅವನತಿಗೂ ಕಾರಣವೆಂಬುದು ನಿರ್ವಿವಾದದ ಸಂಗತಿ.

ಇತ್ತೀಚಿಗಿನ ದಿನಗಳಲ್ಲಿ ಯಕ್ಷಗಾನವು ಪ್ರದರ್ಶನದ ವಸ್ತುವಾಗುತ್ತಿರುವುದು ವಿಷಾದನೀಯ ಸಂಗತಿ . ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ , ರಾಜಕೀಯ ಪಕ್ಷದ ನೇತಾರರ ಹುಟ್ಟಿದ ಹಬ್ಬಗಳಿಗೆ ಶುಭ ಹಾರೈಸಲು, ಯಾವುದೊ ಸ್ವಪ್ರತಿಷ್ಠೆಯ ಮೆರವಣಿಗೆಗಳಿಗೆ, ಸಿನೆಮಾದದ ದೃಶ್ಯಗಳಲ್ಲಿ ಅಸಂಬದ್ಧ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿ ಕುಣಿಯಲು ಬಳಕೆಯಾಗುತ್ತಿರುವುದು ಈ ಕಲೆಯ ಸಾಂಸ್ಕೃತಿಕ ದಿವಾಳಿತನದ ಪ್ರತೀಕವಾಗುತ್ತಿರುವುದು ಯಕ್ಷ ಪ್ರೇಮಿಗಳಿಗೆ ಸಹಿಸಲಸಾಧ್ಯವಾದ ಹಿಂಸೆಯಾಗಿ ಪರಿಣಮಿಸತೊಡಗಿದೆ .ನೀವು ಗಮನಿಸಿ ನೋಡಿದರೆ ಇಂಥ ರೋಡ್ ಷೋ ಯಾ ಇತರ ಯಕ್ಷಗಾನದ "ಅನೈತಿಕ" ಬಳಕೆಯಾಗುವಲ್ಲಿ ಯಕ್ಷಗಾನದ ವೇಷ ಭೂಷಣ ತೊಟ್ಟವರು ನಿಜವಾದ ನಟ ಸಾರ್ವಭೌಮರಾಗಿರದೆ ಬರೇ ಚಟ ಸಾರ್ವಭೌಮರಾಗಿರುವವರೆಂದು ಮೊದಲ ನೋಟದಲ್ಲೇ ತಿಳಿದುಬರುತ್ತದೆ ! ಇವರು ತಮಗೆ ಸಿಗುವ ವಿತ್ತದ ಅಸೆಯಿಂದಲೋ, ತಮ್ಮ ಚಟವನ್ನು ಪ್ರದರ್ಶನ ಮಾಡಿ ಹೆಸರುವಾಸಿಯಾಗಲೆಂದೋ? ಮನದಂದಂತೆ ಕುಣಿದು ತೀವ್ರ ಮುಜುಗರ ಉಂಟು ಮಾಡುತ್ತಾರೆ.
ಇವತ್ತಿನ ಕನ್ನಡ ದೈನಿಕವೊಂದರಲ್ಲಿ "ಕೆ. ಪಿ. ಯಲ್ . ಉದ್ಘಾಟನಾ ಸಮಾರ೦ಭದ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರಾವಳಿ ಕರ್ಣಾಟಕದ ಹೆಮ್ಮೆಯ ಯಕ್ಷಗಾನ ವೇಷಗಳು ಮಿಂಚಿತು . ಆದರೆ ಅಲ್ಲಿ ಯಕ್ಷಗಾನ ಪದವಿರದೆ ಇನ್ನಾವುದೋ ಹಾಡಿಗೆ ವೇಷಧಾರಿಗಳು ಹೆಜ್ಜೆ ಹಾಕಬೇಕಾಗಿ ಬಂದದ್ದು ದುರಂತ " ಎಂಬ ವರದಿ ಪ್ರಕಟವಾಗಿದೆ . ಇತ್ತೀಚಿಗೆ ಸರ್ವೇ ಸಾಮಾನ್ಯವೆಂಬಂತೆ ಗೋಚರಿಸುವ ಇಂಥ ವೇಷಗಳನ್ನು ಪ್ರಜ್ಞಾವನ್ತರೆನಿಸಿದ ಕರಾವಳಿಯ ಜನರೇ ಹಾಕುತ್ತಿರುವುದಂತೂ ತೀರಾ ಶೋಚನೀಯ ಸಂಗತಿ. ಇಂಥವರನ್ನು ಕೇಳ ಹೊರಟರೆ ಸಿಗುವ ಸಿದ್ಧ ಉತ್ತರ "ನಮ್ಮ ಕಲೆಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದೇವೆ ; ಅದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬೇಕೆ೦ಬುದೇ ನಮ್ಮ ಆಶಯ " ಇತ್ಯಾದಿ . ನೀವೇನಾದರೂ ಸ್ವರ ಏರಿಸಿ ಮಾತಾಡಿದರೆ ಸಿಗುವ ಉತ್ತರ " ಏನು ಮಾಡುವುದು ಸ್ವಾಮೀ ಎಲ್ಲ ಹೊಟ್ಟೆ ಪಾಡು " !!! ( ಆಗ ಪಾಪ ಬಡಪಾಯಿ ಹೋಗಲಿ ಬಿಡಿ ಎಂಬ ಕನಿಕರ ನಿಮಗೆ ಸಹಜವಾಗಿಯೇ ಮೂಡುವಂತೆ ಅವರು ಮಾಡುತ್ತಾರೆ ಬಿಡಿ !! )
ಏನಿದ್ದರೂ ಯಕ್ಷಗಾನವನ್ನು ಸಿನೆಮಾಗಳಲ್ಲಾಗಲೀ , ಅಂತರರಾಷ್ಟ್ರೀಯ ವೇದಿಕೆಗಳಲ್ಲಾಗಲೀ "ಯಕ್ಷಗಾನವನ್ನಾಗಿಯೇ " ಪ್ರದರ್ಶಿಸುವ ಬಗ್ಗೆ ನಮ್ಮ ವಿರೋಧವಾಗಲೀ ಆಕ್ಷೇಪವಾಗಲೀ ಇಲ್ಲ . ಅದನ್ನು ವಿಕಾರಗೊಳಿಸಿ , ಮನಬಂದಂತೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ , ಅದನ್ನು ದುರುಪಯೋಗ ಪಡಿಸಿ ಕೇವಲ ಹೊಟ್ಟೆಪಾಡು ಎಂಬಂತೆ ಬಿಂಬಿಸುವ ಬಗ್ಗೆ ನಮ್ಮ ತೀವ್ರ ವಿರೋಧವಿದೆ.

ಇಂಥ ವಿಚಾರಗಳನ್ನು ಯಕ್ಷಗಾನ ಆಸಕ್ತರು , ಸಮ್ಮೇಳನಗಳಲ್ಲಿ ಹಾಗೂ ತತ್ಸಂಬಂಧೀ ವಿಚಾರ ಸಂಕಿರಣಗಳಲ್ಲಿ ಗಮನ ಹರಿಸಿ ಸಾರ್ವಜನಿಕ ಅರಿವು ಮೂಡಿಸಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ . ಇದನ್ನು ಹೇಗೆ ಸಾಧಿಸಬಹುದು ? ನಿಮ್ಮ ಅಭಿಪ್ರಾಯಗಳೇನು? ಪುನಃ ಹೇಳುತ್ತಿದ್ದೇನೆ ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ .!

Wednesday, September 2, 2009

ಯಕ್ಷಗಾನ ಛಂದೋ ಗ್ರಂಥಗಳು ...


ಯಕ್ಷಗಾನದ ವಿವಿಧ ಕಥೆಗಳನ್ನೊಳಗೊಂಡ ಕೃತಿಗೆ "ಪ್ರಸಂಗ" ವೆಂದು ಹೆಸರು . ಯಕ್ಷಗಾನದ ಪ್ರತಿಯೊಂದು ಕೃತಿಯೂ ಕನ್ನಡದ ನಾನಾ ಛಂದೋಬಂಧಗಳಿಂದ ಕೂಡಿದೆ . ಇಂಥ ಪ್ರಸಂಗಗಳನ್ನು ರಚಿಸಲು ಇರುವ ವ್ಯಾಕರಣ ಛನ್ಧಸ್ಸಿನ ನಿಯಮಗಳಿಗೆ ನಿರ್ಧಿಷ್ಟವಾದ ಆಧಾರ ಗ್ರಂಥವೊಂದನ್ನು ರಚಿಸಿದವರೆಂದರೆ ಪ್ರಸಿದ್ಧ ಜ್ಯೋತಿಷಿ ಶ್ರೀಯುತ ಕ.ಪು. ಸೀತಾರಾಮ ಕೆದಿಲಾಯರು . ಹಿಂದಿನ ಯಕ್ಷಗಾನ ಕವಿಗಳು ಯಕ್ಷಗಾನ ಪ್ರಸಂಗಗಳನ್ನು ಛಂದೋ ಬದ್ಧವಾಗಿಯೇ ರಚಿಸಿದ್ದರೂ ಯಕ್ಷಗಾನ ವ್ಯಾಕರಣವನ್ನು ಅಧಿಕೃತ ಗ್ರಂಥ ರೂಪದಲ್ಲಿ ಬರೆದವರಲ್ಲಿ ಶ್ರೀಯುತ ಕೆದಿಲಾಯರೇ ಮೊದಲಿಗರು .ಇತರ ಯಾವುದೇ ಕನ್ನಡ ಛಂದಸ್ಸು ಯಾ ವ್ಯಾಕರಣಗಳ ಅಧ್ಯಯನ ಮಾಡದೆ ಯಕ್ಷಗಾನ ಕೃತಿಗಳನ್ನು ರಚಿಸಲು ಅನುಕೂಲವಾಗುವಂತೆ ಶ್ರೀಯುತರು ರಚಿಸಿದ ಕೃತಿಯೇ "ಯಕ್ಷಗಾನ ಛಂದೋವಿವೇಕ " ಶ್ರೀ ವಿ.ಬಿ.ಹೊಸಮನೆಯವರ ಸಾರಥ್ಯದ ಭಾರಧ್ವಾಜ ಪ್ರಕಾಶನದವರು ಈ ಅಪೂರ್ವವಾದ ಕೃತಿಯನ್ನು ಮುದ್ರಿಸಿ ಯಕ್ಷಗಾನಾಸಕ್ತರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಅಂತರ್ಜಾಲದಲ್ಲಿ ಇದರ scanned copy ಲಭ್ಯವಿದ್ದು ಆಸಕ್ತರು ಅದರ ಪ್ರಯೋಜನ ಪಡೆಯಬಹುದಾಗಿದೆ .ಯಕ್ಷಗಾನದಲ್ಲಿ ಹಾಡಲ್ಪಡುವ ವಿವಿಧ ರಾಗ , ತಾಳಗಳ ಪದ್ಯಗಳ ಛಂದಸ್ಸಿನ ಸ್ವರೂಪ , ಪ್ರಾಸಬೇಧ ,ವೃತ್ತಗಳು ,ರಗಳೆಗಳೇ ಮೊದಲಾದ ಛಂದೋ ಸಂಬಂಧಿ ವಿವರಣೆಗಳು ಈ ಕೃತಿಯಲ್ಲಿ ನಿದರ್ಶನಗಳ ಸಮೇತ ಉಪಲಬ್ಧವಿದೆ .

ಯಕ್ಷಗಾನ ಛಂದಸ್ಸಿನ ಬಗ್ಗೆ ಇನ್ನೊದು ಆಕರ ಗ್ರಂಥವನ್ನು ಬರೆದವರು ಶ್ರೀ ಶಿಮಂತೂರು ನಾರಾಯಣ ಶೆಟ್ಟರು . ಇವರು ರಚಿಸಿದ "ಯಕ್ಷಗಾನದ ಅನರ್ಘ್ಯ ಛ೦ದೋರತ್ನಗಳು " ಕೃತಿಯಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಅಲಕ್ಷಿತ ಅಪೂರ್ವವಾದ ಛ೦ದೋಬಂಧಗಳ ಕುರಿತು ವಿವರವಾದ ಮಾಹಿತಿಗಳಿವೆ . ಯಕ್ಷಗಾನ ಸಾಹಿತ್ಯದ ಛಂದಸ್ಸಿನ ಕುರಿತು ಅಧ್ಯಯನನಡೆಸುವವರಿಗೆ , ಭಾಗವತರಿಗೆ ಹಾಗೂ ಯಕ್ಷಗಾನ ಪ್ರಸಂಗ ಕರ್ತರಿಗೆ ಇವೆರಡು ಗ್ರಂಥಗಳೂ ಅತ್ಯುಪಯುಕ್ತ ಗ್ರಂಥಗಳಾಗಿವೆ . ಸ್ನಾತಕೋತ್ತರ ಅಧ್ಯಯನದ ಪಠ್ಯಕ್ರಮಕ್ಕೆ ಸೇರಿಸಬಹುದಾದ ವ್ಯಾಕರಣ ಯಾ ಛಂದಸ್ಸಿನ ಆಕರ ಗ್ರಂಥಗಳಲ್ಲಿ ಮೇಲೆ ತಿಳಿಸಿದ ಎರಡೂ ಗ್ರಂಥಗಳು ಮಹತ್ವದ ಸ್ಥಾನವನ್ನು ಹೊಂದಿದೆ .

ಪಠ್ಯ ಕ್ರಮದಲ್ಲಿ ಯಕ್ಷಗಾನವನ್ನು ಅಳವಡಿಸುವ ಬಗೆಗೆ ಚಿಂತನೆ ನಡೆಸುತ್ತಿರುವ ಈ ಸಮಯದಲ್ಲಿ ಯಕ್ಷ ಛಂದಸ್ಸಿನ ಬಗೆಗೂ ಗಮನ ಹರಿಸಬೇಕಾದುದು ಎಲ್ಲರ ಕರ್ತವ್ಯ. ಇಲ್ಲದೆ ಹೋದರೆ ಸಿನಿಮೀಯ ,ಜಾನಪದ , ಕಂಸಾಳೆ ಹಾಡುಗಳು ಭೂತ ಬೇತಾಳಗಳ೦ತೆ ಕುಣಿದು , ಮೊತ್ತ ಮೊದಲ ಬಾರಿಗೆ ಯಕ್ಷಗಾನವನ್ನು ವೀಕ್ಷಿಸುವ ಕುತೂಹಲಿಗಳಿಗೆ "ಇದೇ ಸತ್ಯ " ಎಂಬ ಭಾವನೆ ತರುವುದರಲ್ಲಿ ಪರ್ಯಾಪ್ತವಾದೀತು ...
ನಿಮಗೇನನಿಸುತ್ತದೆ ?

Sunday, August 30, 2009

ಪ್ರೇಕ್ಷಕರಿಗೆ ಸಭಾ ಸಂಹಿತೆ .....




ಉಡುಪಿಯಲ್ಲಿ ನಡೆದ ಅರ್ಥಧಾರಿ - ಸಂಘಟಕರ ಸಮಾವೇಶದಲ್ಲಿ ಕೆಲವೊಂದು ಉತ್ತಮ ನಿರ್ಣಯಗಳನ್ನು ಕೈಗೊಂಡಿದ್ದು, ಅದರಲ್ಲಿ ಗಮನ ಸೆಳೆಯುವ ಅಂಶವೆಂದರೆ ಪ್ರೇಕ್ಷಕರಿಗೂ ಕೆಲವು ನಿಬಂಧನೆಗಳನ್ನು ನಿರ್ಣಯರೂಪದಲ್ಲಿ ಅಂಗೀಕರಿಸಿದ್ದು . ಅವು ಈ ಕೆಳಗಿನಂತಿವೆ




ಸಭಿಕರು
೧. ಕ್ಲಪ್ತ ಸಮಯಕ್ಕೆ ಬಂದು ಕಾರ್ಯಕ್ರಮದ ಕೊನೆಯವರೆಗೆ ಇರಬೇಕು .

೨. ಮಧ್ಯದಲ್ಲಿ ಎದ್ದು ಹೋಗಬೇಕಾದ ಅನಿವಾರ್ಯತೆ ಇರುವವರು ಎದುರು ಸಾಲುಗಳಲ್ಲಿ ಕುಳಿತುಕೊಳ್ಳಬಾರದು.

೩. ಮಂಗಳ ಪದ್ಯ ಆಗುತ್ತಿರುವಾಗ ಎದ್ದು ಹೊರಡುವುದು ಸೂಕ್ತವಲ್ಲ.

೪. ಬೇರೆ ಮಾತುಗಳನ್ನಾಡುತ್ತ ಉಳಿದ ಶ್ರೋತೃಗಳಿಗೆ ತೊಂದರೆ ಕೊಡಬಾರದು.

೫. ಸಿಳ್ಳೆ ನಿಷೇಧಿಸಬೇಕು . ಚಪ್ಪಾಳೆ ಮಿತಿಯಲ್ಲಿರಲಿ .

೬. ಒಬ್ಬ ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ತಟ್ಟಿ ಸ್ವಾಗತಿಸುವುದು ಉಳಿದ ಕಲಾವಿದರಿಗೆ ಅಗೌರವ ತೋರಿಸಿದಂತೆ. ಕಲಾವಿದ ವೇದಿಕೆಗೆ ಬಂದಾಗ ಚಪ್ಪಾಳೆ ಬೇಡ.

೭. ಕಾರ್ಯಕ್ರಮದ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಗಳನ್ನು ಸಕಾರಣವಾಗಿ ಸಂಘಟಕರಿಗೆ ತಿಳಿಸುವ ಅಭ್ಯಾಸವಿರಲಿ .

೮. ಮೊಬೈಲ್ ಫೋನ್ ಸೈಲೆಂಟ್ ಮೋಡನಲ್ಲಿರಲಿ . ಮೊಬೈಲ್ನಲ್ಲಿ ಮಾತಾಡಲೇ ಬೇಕೆಂಬ ಅನಿವಾರ್ಯತೆ ಇದ್ದಾಗ ಸಭೆಯಿಂದ ಹೊರಗೆ ಹೋಗಿ ಮಾತಾಡಿ ಬನ್ನಿ .


ಇಂಥದ್ದೊಂದು ನಿರ್ಣಯ ನಿಜಕ್ಕೂ ಸ್ವಾಗತಾರ್ಹ . ಇದನ್ನು ಪಾಲಿಸುವ ಪ್ರೇಕ್ಷಕರೂ ಸುಸಂಸ್ಕೃತರಾಗಿರಬೇಕು.
ಹಲವಾರು ಬಾರಿ ತಾಳಮದ್ದಲೆ ಕಾರ್ಯಕ್ರಮಗಳಿಗೆ ಆರಂಭದಲ್ಲಿ ಪ್ರೇಕ್ಷಕರೇ ಇರುವುದಿಲ್ಲ . ಯಕ್ಷಗಾನ ಸಂಘಗಳ ವಾರ್ಷಿಕೋತ್ಸವ ಆದರಂತೂ ಸಭಾ ಕಾರ್ಯಕ್ರಮ ಮುಗಿದ ಮೇಲೆ ಜನ ಜಮಾಯಿಸತೊಡಗುತ್ತಾರೆ . ಇದರಿಂದಾಗಿಯೇ ಆಯೋಜಕರು "ಒಂತೆ ಜನ ಬರಡ್ ಮಾರಾಯರೇ ಬುಕ್ಕನೆ ಸುರು ಮಲ್ಪುಗ " ಅಂತ ಕಾರ್ಯಕ್ರಮ ಆರಂಭಿಸುವುದನ್ನೇ ತಡ ಮಾಡಿ ಕೆಲವೊಮ್ಮೆ ಸ್ವಾರಸ್ಯಕರ ಸನ್ನಿವೇಶಗಳಿಗೆ , ಸರಿಯಾದ ಚರ್ಚೆಗಳಿಗೆ ಕಲಾವಿದರಿಗೆ ಸಮಯಾವಕಾಶ ಸಿಗದೇ ತರಾತುರಿಯಲ್ಲಿ ಮುಗಿಸುವುದನ್ನು ನೋಡುತ್ತೇವೆ .

ಇನ್ನು ಕೆಲವರಂತೂ ಕಾರ್ಯಕ್ರಮದ ಮಧ್ಯೆ ಎದ್ದು ಹೋಗುವುದು ಸಾಮಾನ್ಯ . ಬಹುಶ ಮೇಲೆ ತೆಗೆದುಕೊಂಡ ನಿರ್ಣಯ "ಅತೀ ಗಣ್ಯ ಅತಿಥಿಗಳಿಗೆ " ಅನ್ವಯ ಮಾಡಲು ಕಷ್ಟವೇನೂ ? ರಾಜಕಾರಣಿಗಳು , ಮಠಾಧಿಪತಿಗಳು , ದೊಡ್ಡ ದೊಡ್ಡ ವ್ಯಾಪಾರಸ್ಥರು ಮುಂತಾದವರಿಗೆ ಪೂರ್ಣ ಅವಧಿ ಕುಳಿತುಕೊಳ್ಳಲು ಸಮಯವೆಲ್ಲಿದೆ ? ಅಂಥವರು ಬಂದಾಗ ಅವರನ್ನು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳಲಿಕ್ಕೂ ಆಗದೆ "ಧರ್ಮ ಸಂಕಟ " ಅನುಭವಿಸಬೇಕಾದ ಪ್ರಮೇಯ ಬಂದರೂ ಮೇಲಿನ ನಿರ್ಣಯದಲ್ಲಿ "ಅತೀ ಗಣ್ಯರನ್ನು ಹೊರತುಪಡಿಸಿ " ಅಂತ ನಾವು -ನೀವು ಜನ ಸಾಮಾನ್ಯರು ಸ್ವತಹ ಅರ್ಥೈಸಬೇಕು .

ಮಂಗಳ ಪದ್ಯ "ಮಜ್ಜಿಗೆ ಊಟದಂತೆ " ಅದನ್ನು ಕೇಳದೆ ಹೋಗುವುದು ಒಳ್ಳೆಯದಲ್ಲ . ಚುಟುಕಾಗಿ , ಚುರುಕಾಗಿ ಮುಗಿಯುವ ಪದ್ಯ ಕೇಳಲು ಆಕರ್ಷಕ .ವಾರಿಜದಳಾ೦ಬಕಾಯ ಜಯ ಮಂಗಳಂ ....., ಶ್ರೀಮಂಜುನಾಥ .... ಮುಂತಾದ ಅದ್ಭುತ ಪದ್ಯಗಳು ಕೊನೆಯಲ್ಲಿ ಕೊಡುವ ಪರಿಣಾಮವೇ ಬೇರೆ . ಅದನ್ನು ಅನುಭವಿಸಿದರೆ ಸವಿ ತಿಳಿಯುವುದು ...


ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಹಲವು ರೀತಿಯ ಕೀಳಭಿರುಚಿಗಳು ಕಾರ್ಯಕ್ರಮ ಅಂದಗೆಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಬೆಳವಣಿಗೆಗಳು ಜನರ ಬದುಕಿಗೆ ಅತ್ಯುಪಯುಕ್ತವಾದರೂ, ಅದರ ಬಳಕೆಯ ಬಗ್ಗೆ ಸರಿಯಾದ ಜ್ಞಾನವಿಲ್ಲದೇ ಹೋದರೆ ಇಂಥದ್ದೊಂದು ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ ಎಂಬುದುವಿಷಾದನೀಯವಾದರೂ ಸತ್ಯ .

ಇಂದು ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು , ಪಾತ್ರಧಾರಿ ತಲ್ಲೀನನಾಗಿ ಅಭಿನಯಿಸುತ್ತಿರುವಾಗ , ಅರ್ಥಧಾರಿ ಅರ್ಥ ಹೇಳುತ್ತಿರುವಾಗ ಹಲವು ವೈವಿಧ್ಯಮಯ ಶಬ್ಧಗಳೊಂದಿಗೆ ಧ್ವನಿಸುವ ಮೊಬೈಲ್ಗಳು ಇತರ ಪ್ರೇಕ್ಷಕರಿಗೆ ಕಿರಿ ಕಿರಿ ಉಂಟು ಮಾಡುತ್ತಿರುವುದು ಸಾಮನ್ಯ ವಿಷಯ . ಈ ನಿಟ್ಟಿನಲ್ಲಿ ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮದ ಮೊದಲೇ ಪ್ರೇಕ್ಷಕರಿಗೆ ಸೂಚನಾರೂಪದಲ್ಲಿ ಮೇಲಿನ ನಿರ್ಣಯಗಳನ್ನು ಹೇಳುವುದು ಇಂದಿನ ಅನಿವಾರ್ಯತೆ ಅಂದರೂ ತಪ್ಪಲ್ಲ !

ಏನಿದ್ದರೂ ಈ ನಿರ್ಣಯಗಳಿಂದಲಾಗಿಯಾದರೂ ಪ್ರೇಕ್ಷಕ ಪ್ರಭುಗಳಿಗೆ ಸ್ವಯಂಪ್ರಜ್ಞೆ ಬೆಳೆಯಬೇಕೆಂಬ ಸಂದೇಶ ಮಾತ್ರ ಸಮಯೋಚಿತ ..

ನಿಮಗೇನನಿಸುತ್ತದೆ ?

Tuesday, August 25, 2009

ಚೌತಿಯ ಗಣಪನಿಗೊಂದು ತಾಳಮದ್ದಲೆ ಸೇವೆ ...



ರಾಜ್ಯ ಹೆದ್ದಾರಿಯ ಬಳಿ ಮೊನ್ನೆ ಒಂದು ಗಣೇಶೋತ್ಸವ .ಮದ್ಯಾಹ್ನ ಚೌತಿ ಹಬ್ಬದ ಸಿಹಿಯೂಟವನ್ನು ಮಾಡಿ ಎಲ್ಲರೂ ತುಸು ವಿಶ್ರಾಂತಿ ಪಡೆಯುವ ಸಮಯ , ಪ್ರೇಕ್ಷಕ ಸಮುದಾಯ ಯಾರೂ ೨ ಗಂಟೆಗೆ ಸೇರದಿದ್ದರೂ ಪ್ರತಿಷ್ಠಾಪಿಸಿದ ನಮ್ಮ "ಗಣಪಣ್ಣನಿಗೆ " ಸುಮ್ಮನೆ ಕೂರಲು ಬೋರ್ ಆಗಬಾರದೆಂದು ಪ್ರಸಿದ್ದ ಹಿಮ್ಮೇಳ ಹಾಗೂ ಸ್ಥಳೀಯ ಕಲಾವಿದರ ಕೂಡುವಿಕೆಯಿಂದ ಅಲ್ಲೊಂದು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಏರ್ಪಾಡಾಗಿತ್ತು . ತಾಳಮದ್ದಲೆ ಆರಂಭಕ್ಕೆ ಮಾತೆಯರು , ಮಕ್ಕಳು ಊರಿನ ಸಭ್ಯ ಹಿರಿಯರು ಎಲ್ಲ ಮುಂದಿನ ಕೆಲ ಸಾಲುಗಳಲ್ಲಿ ಲೋಕಾಭಿರಾಮ ಮಾತಾಡುತ್ತ ಕುಳಿತಿದ್ದರೆ, ಹಿಂದೆ ನಿಷ್ಠಾವಂತ ಕಾರ್ಯಕರ್ತರು "ಜಮೆ" ಲೆಕ್ಕಾಚಾರದಲ್ಲಿ ಮುಳುಗಿದ್ದರು . ಸ್ಥಳೀಯ ಕಲಾವಿದರು ಹುರುಪಿನಿಂದ ಕಾರ್ಯಕ್ರಮ ಮುಂದುವರಿಸುತ್ತಿದ್ದಂತೆ , ಮುಂದಿನ ಕಾರ್ಯಕ್ರಮವಾದ ಸಂಗೀತ ರಸ (ಕಸ?) ಮಂಜರಿಗೆ ಬೇಕಾದ ದೊಡ್ಡ ಗಾತ್ರದ ಧ್ವನಿ ಪೆಟ್ಟಿಗೆಗಳು ಮಿನಿ ಲಾರಿಯಲ್ಲಿ ಬಂದಿಳಿದವು . "ಕೂಟ ಮಲ್ತೊಂದಿಪ್ಪಡಿಯ ನಮ ಸೆಟ್ ಮಲ್ಪುಗ , ಬೊಕ್ಕ ತಡ ಅಪುಂಡು " ಅಂತ ನಿರ್ಧರಿಸಿ ಒಂದೊಂದೇ ಸಾಮಾನುಗಳನ್ನು ಬಿಚ್ಚತೊಡಗಿದರು. ಈ ಮಧ್ಯೆ ರಾಜ್ಯ ಹೆದ್ದಾರಿಯ ವಾಹನಗಳು ಗಣೇಶನಿಂಗೆ ನಮಿಸಲೋ ಎಂಬಂತೆ ಪೆಂಡಾಲ್ ಸಮೀಪ ಬಂದಾಗ ಜೋರಾಗಿ ಹಾರ್ನ್ ಮೊಳಗಿಸಿ ಭಕ್ತಿ ಪ್ರದರ್ಶನ ಮಾಡಿ ಸಾಗುತ್ತಿದ್ದರೂ ಸ್ಥಿತ ಪ್ರಜ್ಞರಾದ ಸ್ಥಳೀಯ ಕಲಾವಿದರು , ಹಿರಿಯ ಕಲಾವಿದರು ರಂಗದಲ್ಲಿ ತಮ್ಮ ಸೇವೆಯನ್ನು ಮುಂದರಿಸುತ್ತಲೇ ಇದ್ದರು .

ಸುಮಾರು ನಾಲ್ಕು ಗಂಟೆಯ ಸಮಯವಾಗುತ್ತಿದ್ದಂತೆ ಮಾತೆಯರಿಗೆ ಮನೆ ನೆನಪಾಗಿ , ಹಾಲು ಕರೆಯುವ ಹೊತ್ತಾದ್ದರಿಂದ ಗಣಪನಿಗೆ ನಮಿಸಿ ತಮ್ಮ ಮಕ್ಕಳು ಮರಿಗಳೊಂದಿಗೆ ಮೆಲ್ಲನೆ ಜಾಗ ಖಾಲಿ ಮಾಡತೊಡಗಿದರು .

ಈಗ ನವ ಯುವಕರ ಜಮಾವಣೆಯಾಗಲು ಆರಂಭವಾಯಿತು . ಸ್ಥಳೀಯ ಕಲಾವಿದರಲ್ಲಿ ಕೆಲವರಿಗಂತೂ ಸ್ಫೂರ್ತಿ ಬಂದು ಯಥಾಸಾಧ್ಯ ಧ್ವನಿ ಏರಿಸಿ ತಮ್ಮ ಅರ್ಥ ಪಾಂಡಿತ್ಯ ಮೆರೆಯತೊಡಗಿದರು . ಸಂಜೆ ಐದಾಗುತ್ತಿದ್ದಂತೆ ತಾಳಮದ್ದಲೆಯ ರಸನಿಮಿಷಗಳ ಕುತೂಹಲ ಘಟ್ಟಕ್ಕೆ ಏರಲು ಆರಂಭಿಸಿದಾಗ ಯುವಕರು ರೋಮಾಂಚನಗೊಳ್ಳತೊಡಗಿದರು . ಇದೇನು ಇಷ್ಟು ಉತ್ಸಾಹ ಇವರಿಗೆ ಬಂತು ಎಂದು ಗಮನಿಸಿದಾಗ ತಿಳಿದದ್ದು ಇವರೆಲ್ಲ "ತೀರ್ಥ" ಸೇವಿಸಿಯೇ ಕೂಟ ಸವಿಯಲು ಬಂದಿದ್ದಾರೆಂದು !

ಕಲಾವಿದರೊಬ್ಬರು " ಕೃಷ್ಣಾ ನಾನು ವಜ್ರ ಸ್ಥಂಭ ಇದ್ದ ಹಾಗೆ , ಬಗ್ಗಿಸಿದರೆ ಮುರಿದೇನೆ ಹೊರತು ಬಾಗುವುದಿಲ್ಲ " ಎಂದು ಹೇಳಿದಾಗ ನವ ಯುವಕನೊಬ್ಬ " ಯಾನ್ಲಾ ಅಂಚನೆ ಯೇರೆಗ್ಲಾ ಬಗ್ಗಾಯೆ!! " ಅನ್ನುತ್ತಾ ರಂಗದೆಡೆಗೆ ಧಾವಿಸಿ ಬರತೊಡಗಿದ . ಅದನ್ನು ಕಂಡ ಕಾರ್ಯಕರ್ತರು ಅವನನ್ನು ತಡೆಯುವಲ್ಲಿ ಹರ ಸಾಹಸ ಮಾಡಿ ಸಫಲರಾದರು !

ನಿಧಾನಕ್ಕೆ ಸೂರ್ಯ ಇಳಿಯುತ್ತಿದ್ದಂತೆ ಅರ್ಧ ನಶೆಯೇರಿದ ಯುವಕರು ಚೆಂಡೆಯ ಪೆಟ್ಟಿಗೆ ಕುಣಿಯತೊಡಗಿದರು . ಇನ್ನು ಎಲ್ಲರೂ ಕುಣಿಯುವ ಮೊದಲೇ ಬೇಗನೆ ಮುಗಿಸಿ ಎಂದು ಮೆಲ್ಲನೆ ಸಂಘದ ಕಲಾವಿದರು ಹಿರಿಯ ಭಾಗವತರಿಗೆ ತಿಳಿಸಿದಾಗ ಕಾರ್ಯಕ್ರಮವನ್ನು ಒಂದಿನಿತೂ ಕೊರತೆ ಇಲ್ಲದಂತೆ ಮುಗಿಸಿಕೊಟ್ಟರು.ಅಂತೂ ಚೌತಿಯ ಗಣಪನಿಗೆ ತಾಳಮದ್ದಲೆ ಸೇವೆಯನ್ನು ಸ್ಥಳೀಯ ಕಲಾವಿದರು ಭಕ್ತಿಯಿಂದಲೇ ನೆರವೇರಿಸಿ ಕೃತಾರ್ಥರಾದರು . ಅಷ್ಟು ಹೊತ್ತಿಗಾಗಲೇ ಮುಂದಿನ ಆಕರ್ಷಣೀಯ ಕಾರ್ಯಕ್ರಮದ ಸವಿಯನ್ನು ಸವಿಯಲು ಯುವಕರ ಗುಂಪು ಹೆಚ್ಚಾಗತೊಡಗಿತು . ಅದುವರೆಗೆ ತಾಳಮದ್ದಲೆ ಕೇಳುತ್ತಿದ್ದ "ಗಣಪಣ್ಣ" ಮುಂದೆ ನಡೆಯಲಿರುವ ಕಾರ್ಯಕ್ರಮದ ನಿರೀಕ್ಷೆಯಲ್ಲೋ ಎಂಬಂತೆ ಗಂಭೀರ ಮೌನವಾಗಿ , ಮಂದಹಾಸ ಸೂಸುತ್ತ ಕುಳಿತಿದ್ದ .
ಕತ್ತಲಾಗುತ್ತಿದ್ದಂತೆ ನಾನೂ ಗಣಪಣ್ಣನನ್ನು ಬಿಟ್ಟು ಮನೆ ಸೇರಬೇಕೆಂಬ ತವಕದಿಂದ ಚೀಲ ಹಿಡಿದು ಮನೆಯ ಕಡೆಗೆ ಹೊರಟೇ ಬಿಟ್ಟೆ.
ಹೇಳಲು ಮರೆತೆ ನೋಡಿ .. ....
ಹೆದ್ದಾರಿಯ ಬಳಿಯ ಗಣೇಶನ ಪೆಂಡಾಲ್ ಗಿಂತ ೫೦ ಅಡಿ ದೂರದಲ್ಲಿ, ಕಾರ್ಯಕ್ರಮದ ಸಮಸ್ತ ಉಸ್ತುವಾರಿ ವಹಿಸಿದ್ದ ಕೊಡುಗೈ ದಾನಿಯೋಬ್ಬರಿಗೆ ಸೇರಿದ " ವೈನ್ ಶಾಪ್ " ಇತ್ತು . ಅಲ್ಲಿ ಆ ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ "ನೆನಪಿನ ಕಾಣಿಕೆ " ಜೋಡಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು !
ಯಾರಲ್ಲೂ ಇದನ್ನು ಹೇಳಬೇಡಿ .. ನಮ್ಮಲ್ಲೇ ಇರಲಿ . ಯಾಕೆ ಸುಮ್ಮನೆ ?

ಅವರವರ ಭಕ್ತಿ , ಅವರವರ ಭಾವನೆ ನಮಗೇಕೆ ಅಲ್ಲವೇ ?


ಏಕದ೦ತನೇ ನಮೋನ್ನಮಃ !
***