Thursday, January 22, 2009

ಓ ನನ್ನ ನಲ್ಲೆ .......



ಗಾಬರಿಯಾಗಬೇಡಿ ಭಟ್ಟರು ಏನು ಸಡನ್ನಾಗಿ ರಸಿಕರಾಗಿಬಿಟ್ಟರು ಅಂತ ....!!!!
ನಾನು ಇಲ್ಲಿ ಹೇಳಹೊರಟಿರುವುದು ಹೊಸತಾದ ಒಂದು ಕಥಾನಕವನ್ನು .
ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿದ ಒಂದು ಸಿನೆಮಾವನ್ನು "ಯಕ್ಷಗಾನ" ವಾಗಿ ಪರಿವರ್ತಿಸಿದ್ದು ಖ್ಯಾತ ಪ್ರಸಂಗಕರ್ತ , ಸೂಪರ್ ಹಿಟ್ ಪ್ರಸಂಗಗಳ ಜನಕ ಈ ಕಥಾನಕವನ್ನೂ ಬರೆದು ಮುಂದಿನ ತಿರುಗಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಅದರ ಕಥಾ ಹಂದರ ಎಲ್ಲವೂ ಸಿನೆಮಾದಿಂದ ಪ್ರೇರಣೆ ಮಾತ್ರ ! ಅದೇ ಸಿನೆಮಾದ "ಶಿರೋಗೀತೆಯನ್ನು" ವಿಶೇಷ ಆಕರ್ಷಣೆಯಾಗಿ ಖ್ಯಾತ ಭಾಗವತರು ನೃತ್ಯ ಸಂಯೋಜಿಸಿ ಆಡಿಸಲಿದ್ದಾರೆ . ಇದರ ಕಥಾನಾಯಕ ಗಿಟಾರ್ ನುಡಿಸುವುದರಲ್ಲಿ ನಿಸ್ಸೀಮ . ಬೇಟೆಯ ದೃಶ್ಯ , ಬೆಳದಿಂಗಳ ಕುಣಿತ , ಮಳೆಯಲ್ಲಿ ನಾಟ್ಯ , ಕ್ಷಣ ಕ್ಷಣಕ್ಕೂ ನಕ್ಕು ನಗಿಸಲು ನಾಲ್ಕು ಜನ ಹಾಸ್ಯಗಾರರು , ಕುತೂಹಲ ಭರಿತ ಸನ್ನಿವೇಶಗಳು ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ರಂಗಕ್ಕೆ ಬರಲಿದೆ ನಿರೀಕ್ಷಿಸಿ.....



ಅದರಲ್ಲಿ ಬರುವ ಪ್ರಧಾನ ಪಾತ್ರಗಳ ವೇಷದ ಜಲಕ್ ಇಲ್ಲಿದೆ ....
ನಿಮ್ಮ ಅನಿಸಿಕೆಗಳೇನು ?



















Wednesday, January 7, 2009

ಆಧುನಿಕ 'ಶ್ರೀನಿವಾಸ ಕಲ್ಯಾಣ'

ಇತ್ತೀಚಿಗೆ ಮೇಳಗಳು ಹೆಚ್ಚಾಗಿ ಆಡುತ್ತಿರುವ ಪ್ರಸಂಗಗಳಲ್ಲಿ "ಶ್ರೀನಿವಾಸ ಕಲ್ಯಾಣ" ವು ಒಂದು . ಅಗರಿ ಶ್ರೀನಿವಾಸ ಭಾಗವತರು ರಚಿಸಿದ "ಶ್ರೀ ವೆಂಕಟೇಶ ಮಹಾತ್ಮೆ " ಪ್ರಸಂಗದ ಒಂದು ಭಾಗ ಈ ಶ್ರೀನಿವಾಸ ಕಲ್ಯಾಣ. ಸುಲಲಿತವಾದ ಸುಂದರ ಪದಗಳಿಂದ ಕೂಡಿದ ಈ ಪ್ರಸಂಗವನ್ನು ಸುರತ್ಕಲ್ ಮೇಳದವರು "ತಿರುಪತಿ ಕ್ಷೇತ್ರ ಮಹಾತ್ಮೆ " ಎಂಬ ಹೆಸರಿನಿಂದ ಆಡುತ್ತಿದ್ದು ಶೇಣಿ ಅಜ್ಜ ಈ ಪ್ರಸಂಗದ ಮಾಧವ ಭಟ್ಟ ನ ಪಾತ್ರವನ್ನು ತಮ್ಮದೇ ಅದ ಪ್ರತಿಭೆಯಿಂದ ಮೆರೆಸುತ್ತಿದ್ದರು . ಆ ಸಮಯದಲ್ಲಿ ಶಿವರಾಮ ಜೋಗಿಯವರ ಕಿರಾತ - ವೇಣೂರು ಸುಂದರ ಆಚಾರ್ಯರ ವಿಜಯ ಜೋಡಿ ಅತ್ಯಂತ ಜನಪ್ರಿಯವಾಗಿತ್ತು .



ಇತ್ತೀಚಿಗೆ ಕಟೀಲು ಮೇಳದವರು ಆಡಿದ 'ಪಂಚಕಲ್ಯಾಣ ' ಹಾಗೂ ಧರ್ಮಸ್ಥಳ ಮೇಳದವರು ಆಡಿದ 'ಶ್ರೀನಿವಾಸ ಕಲ್ಯಾಣ' ವನ್ನು ನೋಡುವ ಅವಕಾಶ ನನಗೆ ದೊರೆಯಿತು . ಕಟೀಲು ಮೇಳದ ಆಟದಲ್ಲಿ 'ಅನಾಮಿಕ' ವೇಷಧಾರಿಗಳು (ನನಗೆ ಕಲಾವಿದರ ಹೆಸರು ತಿಳಿದಿಲ್ಲ ) ಕಿರಾತನ -ಪದ್ಮಾವತಿ ಪಾತ್ರಗಳನ್ನು ನಿರ್ವಹಿಸಿದ್ದು ಸಭ್ಯ ಅಭಿನಯದಿಂದ ಮನಮುಟ್ಟುವಲ್ಲಿ ಯಶಸ್ವಿಯಾಯಿತು .



ಧರ್ಮಸ್ಥಳ ಮೇಳದ ಪ್ರಸಿದ್ಧ ಪುಂಡು ವೇಷಧಾರಿಯವರ ಕಿರಾತನ ಅಸಭ್ಯ ವರ್ತನೆಯನ್ನು ನೋಡಿದಾಗ ನಾನು ಧರ್ಮಸ್ಥಳ ಮೇಳದ ಆಟ ನೋಡುತ್ತಿದ್ದೇನೆಯೇ ? ಎಂಬ ಸಂದೇಹ ನನ್ನನ್ನು ಕಾಡಿತ್ತು!! ಸಹಕಲಾವಿದರ ಮೈ ಮುಟ್ಟಿ ಚೇಷ್ಟೆ ಮಾಡುವುದು , ಒದೆಯುವುದು, ಕುಣಿಯುವಾಗ ಅಡ್ಡಗಾಲಿಡುವುದು ಮುಂತಾದ ವರ್ತನೆ ಪ್ರೇಕ್ಷಕರಿಗೆ ಮುಜುಗರ ಕಿರಿಕಿರಿಯುಂಟು ಮಾಡುತ್ತಿತ್ತು. ಉಳಿದ ಪಾತ್ರಧಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಧಾನ ಪಾತ್ರ ಕಿರಾತ ನಾದುದರಿಂದ ಒಟ್ಟು ಪ್ರದರ್ಶನ ಮನಮುಟ್ಟುವಲ್ಲಿ ವಿಫಲವಾಯಿತು.


ಎರಡೂ ಮೇಳದ ಆಟವನ್ನು ಬೆಳಗ್ಗಿನ ವರೆಗೆ ನೋಡಿದ ಬಳಿಕ ನನಗೆ ಅನಿಸಿದ್ದು 'ಶ್ರೀನಿವಾಸ ಕಲ್ಯಾಣ ' ಕೊನೆಯ ಕಥಾಭಾಗವಾಗಿ ಆಡಲು ಸೂಕ್ತವಾದ ಪ್ರಸಂಗವಲ್ಲ ! ಬೆಳಗ್ಗಿನ ಜಾವ ೪ ಗಂಟೆಯ ಬಳಿಕ ಬರೀ ಮದ್ದಳೆಯ ಪದಗಳನ್ನು ಕೇಳಲು ಹಿತವಾಗುವುದಿಲ್ಲ. ಈ ಪ್ರಸಂಗದಲ್ಲಿ ಕೊನೆಯ ಭಾಗಕ್ಕೆ ಚೆಂಡೆಯ ಪದ್ಯಗಳೇ ಇಲ್ಲ. ಒಟ್ಟಿನಲ್ಲಿ ಈ ಪ್ರಸಂಗವನ್ನು ಕೊನೆಗೆ ಆಡಿದಲ್ಲಿ ಆಟವು ನೀರಸವಾಗಿ ಕೊನೆಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ .