Tuesday, August 25, 2009

ಚೌತಿಯ ಗಣಪನಿಗೊಂದು ತಾಳಮದ್ದಲೆ ಸೇವೆ ...



ರಾಜ್ಯ ಹೆದ್ದಾರಿಯ ಬಳಿ ಮೊನ್ನೆ ಒಂದು ಗಣೇಶೋತ್ಸವ .ಮದ್ಯಾಹ್ನ ಚೌತಿ ಹಬ್ಬದ ಸಿಹಿಯೂಟವನ್ನು ಮಾಡಿ ಎಲ್ಲರೂ ತುಸು ವಿಶ್ರಾಂತಿ ಪಡೆಯುವ ಸಮಯ , ಪ್ರೇಕ್ಷಕ ಸಮುದಾಯ ಯಾರೂ ೨ ಗಂಟೆಗೆ ಸೇರದಿದ್ದರೂ ಪ್ರತಿಷ್ಠಾಪಿಸಿದ ನಮ್ಮ "ಗಣಪಣ್ಣನಿಗೆ " ಸುಮ್ಮನೆ ಕೂರಲು ಬೋರ್ ಆಗಬಾರದೆಂದು ಪ್ರಸಿದ್ದ ಹಿಮ್ಮೇಳ ಹಾಗೂ ಸ್ಥಳೀಯ ಕಲಾವಿದರ ಕೂಡುವಿಕೆಯಿಂದ ಅಲ್ಲೊಂದು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಏರ್ಪಾಡಾಗಿತ್ತು . ತಾಳಮದ್ದಲೆ ಆರಂಭಕ್ಕೆ ಮಾತೆಯರು , ಮಕ್ಕಳು ಊರಿನ ಸಭ್ಯ ಹಿರಿಯರು ಎಲ್ಲ ಮುಂದಿನ ಕೆಲ ಸಾಲುಗಳಲ್ಲಿ ಲೋಕಾಭಿರಾಮ ಮಾತಾಡುತ್ತ ಕುಳಿತಿದ್ದರೆ, ಹಿಂದೆ ನಿಷ್ಠಾವಂತ ಕಾರ್ಯಕರ್ತರು "ಜಮೆ" ಲೆಕ್ಕಾಚಾರದಲ್ಲಿ ಮುಳುಗಿದ್ದರು . ಸ್ಥಳೀಯ ಕಲಾವಿದರು ಹುರುಪಿನಿಂದ ಕಾರ್ಯಕ್ರಮ ಮುಂದುವರಿಸುತ್ತಿದ್ದಂತೆ , ಮುಂದಿನ ಕಾರ್ಯಕ್ರಮವಾದ ಸಂಗೀತ ರಸ (ಕಸ?) ಮಂಜರಿಗೆ ಬೇಕಾದ ದೊಡ್ಡ ಗಾತ್ರದ ಧ್ವನಿ ಪೆಟ್ಟಿಗೆಗಳು ಮಿನಿ ಲಾರಿಯಲ್ಲಿ ಬಂದಿಳಿದವು . "ಕೂಟ ಮಲ್ತೊಂದಿಪ್ಪಡಿಯ ನಮ ಸೆಟ್ ಮಲ್ಪುಗ , ಬೊಕ್ಕ ತಡ ಅಪುಂಡು " ಅಂತ ನಿರ್ಧರಿಸಿ ಒಂದೊಂದೇ ಸಾಮಾನುಗಳನ್ನು ಬಿಚ್ಚತೊಡಗಿದರು. ಈ ಮಧ್ಯೆ ರಾಜ್ಯ ಹೆದ್ದಾರಿಯ ವಾಹನಗಳು ಗಣೇಶನಿಂಗೆ ನಮಿಸಲೋ ಎಂಬಂತೆ ಪೆಂಡಾಲ್ ಸಮೀಪ ಬಂದಾಗ ಜೋರಾಗಿ ಹಾರ್ನ್ ಮೊಳಗಿಸಿ ಭಕ್ತಿ ಪ್ರದರ್ಶನ ಮಾಡಿ ಸಾಗುತ್ತಿದ್ದರೂ ಸ್ಥಿತ ಪ್ರಜ್ಞರಾದ ಸ್ಥಳೀಯ ಕಲಾವಿದರು , ಹಿರಿಯ ಕಲಾವಿದರು ರಂಗದಲ್ಲಿ ತಮ್ಮ ಸೇವೆಯನ್ನು ಮುಂದರಿಸುತ್ತಲೇ ಇದ್ದರು .

ಸುಮಾರು ನಾಲ್ಕು ಗಂಟೆಯ ಸಮಯವಾಗುತ್ತಿದ್ದಂತೆ ಮಾತೆಯರಿಗೆ ಮನೆ ನೆನಪಾಗಿ , ಹಾಲು ಕರೆಯುವ ಹೊತ್ತಾದ್ದರಿಂದ ಗಣಪನಿಗೆ ನಮಿಸಿ ತಮ್ಮ ಮಕ್ಕಳು ಮರಿಗಳೊಂದಿಗೆ ಮೆಲ್ಲನೆ ಜಾಗ ಖಾಲಿ ಮಾಡತೊಡಗಿದರು .

ಈಗ ನವ ಯುವಕರ ಜಮಾವಣೆಯಾಗಲು ಆರಂಭವಾಯಿತು . ಸ್ಥಳೀಯ ಕಲಾವಿದರಲ್ಲಿ ಕೆಲವರಿಗಂತೂ ಸ್ಫೂರ್ತಿ ಬಂದು ಯಥಾಸಾಧ್ಯ ಧ್ವನಿ ಏರಿಸಿ ತಮ್ಮ ಅರ್ಥ ಪಾಂಡಿತ್ಯ ಮೆರೆಯತೊಡಗಿದರು . ಸಂಜೆ ಐದಾಗುತ್ತಿದ್ದಂತೆ ತಾಳಮದ್ದಲೆಯ ರಸನಿಮಿಷಗಳ ಕುತೂಹಲ ಘಟ್ಟಕ್ಕೆ ಏರಲು ಆರಂಭಿಸಿದಾಗ ಯುವಕರು ರೋಮಾಂಚನಗೊಳ್ಳತೊಡಗಿದರು . ಇದೇನು ಇಷ್ಟು ಉತ್ಸಾಹ ಇವರಿಗೆ ಬಂತು ಎಂದು ಗಮನಿಸಿದಾಗ ತಿಳಿದದ್ದು ಇವರೆಲ್ಲ "ತೀರ್ಥ" ಸೇವಿಸಿಯೇ ಕೂಟ ಸವಿಯಲು ಬಂದಿದ್ದಾರೆಂದು !

ಕಲಾವಿದರೊಬ್ಬರು " ಕೃಷ್ಣಾ ನಾನು ವಜ್ರ ಸ್ಥಂಭ ಇದ್ದ ಹಾಗೆ , ಬಗ್ಗಿಸಿದರೆ ಮುರಿದೇನೆ ಹೊರತು ಬಾಗುವುದಿಲ್ಲ " ಎಂದು ಹೇಳಿದಾಗ ನವ ಯುವಕನೊಬ್ಬ " ಯಾನ್ಲಾ ಅಂಚನೆ ಯೇರೆಗ್ಲಾ ಬಗ್ಗಾಯೆ!! " ಅನ್ನುತ್ತಾ ರಂಗದೆಡೆಗೆ ಧಾವಿಸಿ ಬರತೊಡಗಿದ . ಅದನ್ನು ಕಂಡ ಕಾರ್ಯಕರ್ತರು ಅವನನ್ನು ತಡೆಯುವಲ್ಲಿ ಹರ ಸಾಹಸ ಮಾಡಿ ಸಫಲರಾದರು !

ನಿಧಾನಕ್ಕೆ ಸೂರ್ಯ ಇಳಿಯುತ್ತಿದ್ದಂತೆ ಅರ್ಧ ನಶೆಯೇರಿದ ಯುವಕರು ಚೆಂಡೆಯ ಪೆಟ್ಟಿಗೆ ಕುಣಿಯತೊಡಗಿದರು . ಇನ್ನು ಎಲ್ಲರೂ ಕುಣಿಯುವ ಮೊದಲೇ ಬೇಗನೆ ಮುಗಿಸಿ ಎಂದು ಮೆಲ್ಲನೆ ಸಂಘದ ಕಲಾವಿದರು ಹಿರಿಯ ಭಾಗವತರಿಗೆ ತಿಳಿಸಿದಾಗ ಕಾರ್ಯಕ್ರಮವನ್ನು ಒಂದಿನಿತೂ ಕೊರತೆ ಇಲ್ಲದಂತೆ ಮುಗಿಸಿಕೊಟ್ಟರು.ಅಂತೂ ಚೌತಿಯ ಗಣಪನಿಗೆ ತಾಳಮದ್ದಲೆ ಸೇವೆಯನ್ನು ಸ್ಥಳೀಯ ಕಲಾವಿದರು ಭಕ್ತಿಯಿಂದಲೇ ನೆರವೇರಿಸಿ ಕೃತಾರ್ಥರಾದರು . ಅಷ್ಟು ಹೊತ್ತಿಗಾಗಲೇ ಮುಂದಿನ ಆಕರ್ಷಣೀಯ ಕಾರ್ಯಕ್ರಮದ ಸವಿಯನ್ನು ಸವಿಯಲು ಯುವಕರ ಗುಂಪು ಹೆಚ್ಚಾಗತೊಡಗಿತು . ಅದುವರೆಗೆ ತಾಳಮದ್ದಲೆ ಕೇಳುತ್ತಿದ್ದ "ಗಣಪಣ್ಣ" ಮುಂದೆ ನಡೆಯಲಿರುವ ಕಾರ್ಯಕ್ರಮದ ನಿರೀಕ್ಷೆಯಲ್ಲೋ ಎಂಬಂತೆ ಗಂಭೀರ ಮೌನವಾಗಿ , ಮಂದಹಾಸ ಸೂಸುತ್ತ ಕುಳಿತಿದ್ದ .
ಕತ್ತಲಾಗುತ್ತಿದ್ದಂತೆ ನಾನೂ ಗಣಪಣ್ಣನನ್ನು ಬಿಟ್ಟು ಮನೆ ಸೇರಬೇಕೆಂಬ ತವಕದಿಂದ ಚೀಲ ಹಿಡಿದು ಮನೆಯ ಕಡೆಗೆ ಹೊರಟೇ ಬಿಟ್ಟೆ.
ಹೇಳಲು ಮರೆತೆ ನೋಡಿ .. ....
ಹೆದ್ದಾರಿಯ ಬಳಿಯ ಗಣೇಶನ ಪೆಂಡಾಲ್ ಗಿಂತ ೫೦ ಅಡಿ ದೂರದಲ್ಲಿ, ಕಾರ್ಯಕ್ರಮದ ಸಮಸ್ತ ಉಸ್ತುವಾರಿ ವಹಿಸಿದ್ದ ಕೊಡುಗೈ ದಾನಿಯೋಬ್ಬರಿಗೆ ಸೇರಿದ " ವೈನ್ ಶಾಪ್ " ಇತ್ತು . ಅಲ್ಲಿ ಆ ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ "ನೆನಪಿನ ಕಾಣಿಕೆ " ಜೋಡಿಸುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು !
ಯಾರಲ್ಲೂ ಇದನ್ನು ಹೇಳಬೇಡಿ .. ನಮ್ಮಲ್ಲೇ ಇರಲಿ . ಯಾಕೆ ಸುಮ್ಮನೆ ?

ಅವರವರ ಭಕ್ತಿ , ಅವರವರ ಭಾವನೆ ನಮಗೇಕೆ ಅಲ್ಲವೇ ?


ಏಕದ೦ತನೇ ನಮೋನ್ನಮಃ !
***

2 comments:

YAKSHA CHINTANA said...

ಈಗಿನ ಪ್ರಪಂಚ ಎಲ್ಲವೂ ಜಾಹಿರಾತು ಮಯ. ಹಾಗಾಗಿ ಎಲ್ಲವೂ ತೋರ್ಪಡಿಕೆಗೆ. ಭಕ್ತಿ , ಕಲಾಭಿಮಾನ, ನಿಷ್ಠೆ, ಹೀಗೆ ಅದ್ಭುತ ಗುಣಗಳು ಇಂದು ಪ್ರದರ್ಶನದ ಗುಣಗಳಾಗಿವೆ. ದಾನಿ ತನ್ನ ದಾನವನ್ನು ಜಾಹಿರಾತು ಮಾಡಿದರೆ, ಭಕ್ತ ತನ್ನ ಇಲ್ಲದ ಭಕ್ತಿಯನ್ನು ಜಾಹಿರಾತು ಮಾಡುತ್ತಾನೆ. ಅಂತೆ ಕಲಾಭಿಮಾನಿ ತನ್ನ ಅಭಿಮಾನವನ್ನೇ ಜಾಹಿರಾತು ಆಗಿ ಮಾಡಿಬಿಡುತ್ತಾನೆ. ಕಿಂಚಿತ್ ಆದರು ಸ್ವಾರ್ಥ ಇಲ್ಲವಾದರೆ ಈ ಬದುಕು ಏನು ಸ್ವಾಮಿ?

Lanabhat said...

nanoo monne ondu chowti talamaddale atakke hogide road side pendall nalli...

illi tilisiruvudalli kelavannu bittu berella heege agide :)...

nanu karyakramada koneyavarege irlikke aglilla eega annista ide innoo swalpa manaranjane swalpa jaasti sitittu anta :P ...