Thursday, September 10, 2009

ಎಲ್ಲರು ಮಾಡುವುದು ಹೊಟ್ಟೆಪಾಡಿಗಾಗಿ...














ಮೊದಲೇ ಹೇಳಿಬಿಡುತ್ತೇನೆ . ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ . ಅದ್ದರಿಂದ ಇಂಥ ಒಂದು ವಿಷಯವನ್ನು ಪ್ರಸ್ತಾಪ ಮಾಡಲು ಹೊರಟಿದ್ದೇನೆ .


ಕರಾವಳಿ ಕರ್ಣಾಟಕದ ಹೆಮ್ಮೆಯ ಕಲೆ ಯಕ್ಷಗಾನವೆಂಬುದು ಸರ್ವ ವಿದಿತ . ಯಕ್ಷಗಾನವು ಆರಾಧನಾ ಕಲೆಯಾಗಿ ಆರಂಭಗೊಂಡು ಪೌರಾಣಿಕ ಪುಣ್ಯ ಕಥಾ ಭಾಗಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮನೋರಂಜನಾ ಕಲಾ ಮಾಧ್ಯಮವಾಗಿ ಹಲವು ಶತಮಾನಗಳಿಂದ ಬೆಳೆದು ಬಂದಿದೆ. ಅನುಭವಿಗಳು ಹಿರಿಯರು ಹೇಳುವಂತೆ ಅದು ತನ್ನ ಉನ್ನತಿಕೆಯನ್ನು ಹೊಂದಿ ಇತ್ತೀಚಿಗೆ ಅವನತಿಯತ್ತ ನಿಧಾನಗತಿಯಿಂದ ಸಾಗುತ್ತಿದೆ ಎಂಬುದು ಇಂದಿನ ಹಲವು ಘಟನೆಗಳಿಂದ ಅನುಭವವೇದ್ಯವಾಗುತ್ತಿದೆ . ಯಕ್ಷಗಾನ ಕಲಾ ಪ್ರಕಾರ ಯಾವಾಗ ವಾಣಿಜ್ಯೀಕರಣ ಹೊಂದಿತೋ ಆಗಲೇ ಎಲ್ಲ ಕಲಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕಾಲಗತಿಯಿಂದ ಮತ್ತು ಕಲಾವಿದನ ಆರ್ಥಿಕ ನೆಲೆಗಟ್ಟಿನಲ್ಲಿ ಅದಕ್ಕೆ ವ್ಯಾಪಕ ಪ್ರೋತ್ಸಾಹವೂ ದೊರೆಯಿತು .ಇದು ಒಂದು ದೃಷ್ಟಿಯಿಂದ ಕಲೆಯ ಅವನತಿಗೂ ಕಾರಣವೆಂಬುದು ನಿರ್ವಿವಾದದ ಸಂಗತಿ.

ಇತ್ತೀಚಿಗಿನ ದಿನಗಳಲ್ಲಿ ಯಕ್ಷಗಾನವು ಪ್ರದರ್ಶನದ ವಸ್ತುವಾಗುತ್ತಿರುವುದು ವಿಷಾದನೀಯ ಸಂಗತಿ . ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ , ರಾಜಕೀಯ ಪಕ್ಷದ ನೇತಾರರ ಹುಟ್ಟಿದ ಹಬ್ಬಗಳಿಗೆ ಶುಭ ಹಾರೈಸಲು, ಯಾವುದೊ ಸ್ವಪ್ರತಿಷ್ಠೆಯ ಮೆರವಣಿಗೆಗಳಿಗೆ, ಸಿನೆಮಾದದ ದೃಶ್ಯಗಳಲ್ಲಿ ಅಸಂಬದ್ಧ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿ ಕುಣಿಯಲು ಬಳಕೆಯಾಗುತ್ತಿರುವುದು ಈ ಕಲೆಯ ಸಾಂಸ್ಕೃತಿಕ ದಿವಾಳಿತನದ ಪ್ರತೀಕವಾಗುತ್ತಿರುವುದು ಯಕ್ಷ ಪ್ರೇಮಿಗಳಿಗೆ ಸಹಿಸಲಸಾಧ್ಯವಾದ ಹಿಂಸೆಯಾಗಿ ಪರಿಣಮಿಸತೊಡಗಿದೆ .ನೀವು ಗಮನಿಸಿ ನೋಡಿದರೆ ಇಂಥ ರೋಡ್ ಷೋ ಯಾ ಇತರ ಯಕ್ಷಗಾನದ "ಅನೈತಿಕ" ಬಳಕೆಯಾಗುವಲ್ಲಿ ಯಕ್ಷಗಾನದ ವೇಷ ಭೂಷಣ ತೊಟ್ಟವರು ನಿಜವಾದ ನಟ ಸಾರ್ವಭೌಮರಾಗಿರದೆ ಬರೇ ಚಟ ಸಾರ್ವಭೌಮರಾಗಿರುವವರೆಂದು ಮೊದಲ ನೋಟದಲ್ಲೇ ತಿಳಿದುಬರುತ್ತದೆ ! ಇವರು ತಮಗೆ ಸಿಗುವ ವಿತ್ತದ ಅಸೆಯಿಂದಲೋ, ತಮ್ಮ ಚಟವನ್ನು ಪ್ರದರ್ಶನ ಮಾಡಿ ಹೆಸರುವಾಸಿಯಾಗಲೆಂದೋ? ಮನದಂದಂತೆ ಕುಣಿದು ತೀವ್ರ ಮುಜುಗರ ಉಂಟು ಮಾಡುತ್ತಾರೆ.
ಇವತ್ತಿನ ಕನ್ನಡ ದೈನಿಕವೊಂದರಲ್ಲಿ "ಕೆ. ಪಿ. ಯಲ್ . ಉದ್ಘಾಟನಾ ಸಮಾರ೦ಭದ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರಾವಳಿ ಕರ್ಣಾಟಕದ ಹೆಮ್ಮೆಯ ಯಕ್ಷಗಾನ ವೇಷಗಳು ಮಿಂಚಿತು . ಆದರೆ ಅಲ್ಲಿ ಯಕ್ಷಗಾನ ಪದವಿರದೆ ಇನ್ನಾವುದೋ ಹಾಡಿಗೆ ವೇಷಧಾರಿಗಳು ಹೆಜ್ಜೆ ಹಾಕಬೇಕಾಗಿ ಬಂದದ್ದು ದುರಂತ " ಎಂಬ ವರದಿ ಪ್ರಕಟವಾಗಿದೆ . ಇತ್ತೀಚಿಗೆ ಸರ್ವೇ ಸಾಮಾನ್ಯವೆಂಬಂತೆ ಗೋಚರಿಸುವ ಇಂಥ ವೇಷಗಳನ್ನು ಪ್ರಜ್ಞಾವನ್ತರೆನಿಸಿದ ಕರಾವಳಿಯ ಜನರೇ ಹಾಕುತ್ತಿರುವುದಂತೂ ತೀರಾ ಶೋಚನೀಯ ಸಂಗತಿ. ಇಂಥವರನ್ನು ಕೇಳ ಹೊರಟರೆ ಸಿಗುವ ಸಿದ್ಧ ಉತ್ತರ "ನಮ್ಮ ಕಲೆಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದೇವೆ ; ಅದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬೇಕೆ೦ಬುದೇ ನಮ್ಮ ಆಶಯ " ಇತ್ಯಾದಿ . ನೀವೇನಾದರೂ ಸ್ವರ ಏರಿಸಿ ಮಾತಾಡಿದರೆ ಸಿಗುವ ಉತ್ತರ " ಏನು ಮಾಡುವುದು ಸ್ವಾಮೀ ಎಲ್ಲ ಹೊಟ್ಟೆ ಪಾಡು " !!! ( ಆಗ ಪಾಪ ಬಡಪಾಯಿ ಹೋಗಲಿ ಬಿಡಿ ಎಂಬ ಕನಿಕರ ನಿಮಗೆ ಸಹಜವಾಗಿಯೇ ಮೂಡುವಂತೆ ಅವರು ಮಾಡುತ್ತಾರೆ ಬಿಡಿ !! )
ಏನಿದ್ದರೂ ಯಕ್ಷಗಾನವನ್ನು ಸಿನೆಮಾಗಳಲ್ಲಾಗಲೀ , ಅಂತರರಾಷ್ಟ್ರೀಯ ವೇದಿಕೆಗಳಲ್ಲಾಗಲೀ "ಯಕ್ಷಗಾನವನ್ನಾಗಿಯೇ " ಪ್ರದರ್ಶಿಸುವ ಬಗ್ಗೆ ನಮ್ಮ ವಿರೋಧವಾಗಲೀ ಆಕ್ಷೇಪವಾಗಲೀ ಇಲ್ಲ . ಅದನ್ನು ವಿಕಾರಗೊಳಿಸಿ , ಮನಬಂದಂತೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ , ಅದನ್ನು ದುರುಪಯೋಗ ಪಡಿಸಿ ಕೇವಲ ಹೊಟ್ಟೆಪಾಡು ಎಂಬಂತೆ ಬಿಂಬಿಸುವ ಬಗ್ಗೆ ನಮ್ಮ ತೀವ್ರ ವಿರೋಧವಿದೆ.

ಇಂಥ ವಿಚಾರಗಳನ್ನು ಯಕ್ಷಗಾನ ಆಸಕ್ತರು , ಸಮ್ಮೇಳನಗಳಲ್ಲಿ ಹಾಗೂ ತತ್ಸಂಬಂಧೀ ವಿಚಾರ ಸಂಕಿರಣಗಳಲ್ಲಿ ಗಮನ ಹರಿಸಿ ಸಾರ್ವಜನಿಕ ಅರಿವು ಮೂಡಿಸಬೇಕಾದ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ . ಇದನ್ನು ಹೇಗೆ ಸಾಧಿಸಬಹುದು ? ನಿಮ್ಮ ಅಭಿಪ್ರಾಯಗಳೇನು? ಪುನಃ ಹೇಳುತ್ತಿದ್ದೇನೆ ಈ ವಿಷಯವನ್ನು ಹೇಳಲು ಸಂಕಟವಾಗುತ್ತದೆ . ಹೇಳದೆ ಇರೋಣವೆಂದರೆ ಮನಸ್ಸು ಒಪ್ಪುವುದಿಲ್ಲ .!

Wednesday, September 2, 2009

ಯಕ್ಷಗಾನ ಛಂದೋ ಗ್ರಂಥಗಳು ...


ಯಕ್ಷಗಾನದ ವಿವಿಧ ಕಥೆಗಳನ್ನೊಳಗೊಂಡ ಕೃತಿಗೆ "ಪ್ರಸಂಗ" ವೆಂದು ಹೆಸರು . ಯಕ್ಷಗಾನದ ಪ್ರತಿಯೊಂದು ಕೃತಿಯೂ ಕನ್ನಡದ ನಾನಾ ಛಂದೋಬಂಧಗಳಿಂದ ಕೂಡಿದೆ . ಇಂಥ ಪ್ರಸಂಗಗಳನ್ನು ರಚಿಸಲು ಇರುವ ವ್ಯಾಕರಣ ಛನ್ಧಸ್ಸಿನ ನಿಯಮಗಳಿಗೆ ನಿರ್ಧಿಷ್ಟವಾದ ಆಧಾರ ಗ್ರಂಥವೊಂದನ್ನು ರಚಿಸಿದವರೆಂದರೆ ಪ್ರಸಿದ್ಧ ಜ್ಯೋತಿಷಿ ಶ್ರೀಯುತ ಕ.ಪು. ಸೀತಾರಾಮ ಕೆದಿಲಾಯರು . ಹಿಂದಿನ ಯಕ್ಷಗಾನ ಕವಿಗಳು ಯಕ್ಷಗಾನ ಪ್ರಸಂಗಗಳನ್ನು ಛಂದೋ ಬದ್ಧವಾಗಿಯೇ ರಚಿಸಿದ್ದರೂ ಯಕ್ಷಗಾನ ವ್ಯಾಕರಣವನ್ನು ಅಧಿಕೃತ ಗ್ರಂಥ ರೂಪದಲ್ಲಿ ಬರೆದವರಲ್ಲಿ ಶ್ರೀಯುತ ಕೆದಿಲಾಯರೇ ಮೊದಲಿಗರು .ಇತರ ಯಾವುದೇ ಕನ್ನಡ ಛಂದಸ್ಸು ಯಾ ವ್ಯಾಕರಣಗಳ ಅಧ್ಯಯನ ಮಾಡದೆ ಯಕ್ಷಗಾನ ಕೃತಿಗಳನ್ನು ರಚಿಸಲು ಅನುಕೂಲವಾಗುವಂತೆ ಶ್ರೀಯುತರು ರಚಿಸಿದ ಕೃತಿಯೇ "ಯಕ್ಷಗಾನ ಛಂದೋವಿವೇಕ " ಶ್ರೀ ವಿ.ಬಿ.ಹೊಸಮನೆಯವರ ಸಾರಥ್ಯದ ಭಾರಧ್ವಾಜ ಪ್ರಕಾಶನದವರು ಈ ಅಪೂರ್ವವಾದ ಕೃತಿಯನ್ನು ಮುದ್ರಿಸಿ ಯಕ್ಷಗಾನಾಸಕ್ತರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಅಂತರ್ಜಾಲದಲ್ಲಿ ಇದರ scanned copy ಲಭ್ಯವಿದ್ದು ಆಸಕ್ತರು ಅದರ ಪ್ರಯೋಜನ ಪಡೆಯಬಹುದಾಗಿದೆ .ಯಕ್ಷಗಾನದಲ್ಲಿ ಹಾಡಲ್ಪಡುವ ವಿವಿಧ ರಾಗ , ತಾಳಗಳ ಪದ್ಯಗಳ ಛಂದಸ್ಸಿನ ಸ್ವರೂಪ , ಪ್ರಾಸಬೇಧ ,ವೃತ್ತಗಳು ,ರಗಳೆಗಳೇ ಮೊದಲಾದ ಛಂದೋ ಸಂಬಂಧಿ ವಿವರಣೆಗಳು ಈ ಕೃತಿಯಲ್ಲಿ ನಿದರ್ಶನಗಳ ಸಮೇತ ಉಪಲಬ್ಧವಿದೆ .

ಯಕ್ಷಗಾನ ಛಂದಸ್ಸಿನ ಬಗ್ಗೆ ಇನ್ನೊದು ಆಕರ ಗ್ರಂಥವನ್ನು ಬರೆದವರು ಶ್ರೀ ಶಿಮಂತೂರು ನಾರಾಯಣ ಶೆಟ್ಟರು . ಇವರು ರಚಿಸಿದ "ಯಕ್ಷಗಾನದ ಅನರ್ಘ್ಯ ಛ೦ದೋರತ್ನಗಳು " ಕೃತಿಯಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಅಲಕ್ಷಿತ ಅಪೂರ್ವವಾದ ಛ೦ದೋಬಂಧಗಳ ಕುರಿತು ವಿವರವಾದ ಮಾಹಿತಿಗಳಿವೆ . ಯಕ್ಷಗಾನ ಸಾಹಿತ್ಯದ ಛಂದಸ್ಸಿನ ಕುರಿತು ಅಧ್ಯಯನನಡೆಸುವವರಿಗೆ , ಭಾಗವತರಿಗೆ ಹಾಗೂ ಯಕ್ಷಗಾನ ಪ್ರಸಂಗ ಕರ್ತರಿಗೆ ಇವೆರಡು ಗ್ರಂಥಗಳೂ ಅತ್ಯುಪಯುಕ್ತ ಗ್ರಂಥಗಳಾಗಿವೆ . ಸ್ನಾತಕೋತ್ತರ ಅಧ್ಯಯನದ ಪಠ್ಯಕ್ರಮಕ್ಕೆ ಸೇರಿಸಬಹುದಾದ ವ್ಯಾಕರಣ ಯಾ ಛಂದಸ್ಸಿನ ಆಕರ ಗ್ರಂಥಗಳಲ್ಲಿ ಮೇಲೆ ತಿಳಿಸಿದ ಎರಡೂ ಗ್ರಂಥಗಳು ಮಹತ್ವದ ಸ್ಥಾನವನ್ನು ಹೊಂದಿದೆ .

ಪಠ್ಯ ಕ್ರಮದಲ್ಲಿ ಯಕ್ಷಗಾನವನ್ನು ಅಳವಡಿಸುವ ಬಗೆಗೆ ಚಿಂತನೆ ನಡೆಸುತ್ತಿರುವ ಈ ಸಮಯದಲ್ಲಿ ಯಕ್ಷ ಛಂದಸ್ಸಿನ ಬಗೆಗೂ ಗಮನ ಹರಿಸಬೇಕಾದುದು ಎಲ್ಲರ ಕರ್ತವ್ಯ. ಇಲ್ಲದೆ ಹೋದರೆ ಸಿನಿಮೀಯ ,ಜಾನಪದ , ಕಂಸಾಳೆ ಹಾಡುಗಳು ಭೂತ ಬೇತಾಳಗಳ೦ತೆ ಕುಣಿದು , ಮೊತ್ತ ಮೊದಲ ಬಾರಿಗೆ ಯಕ್ಷಗಾನವನ್ನು ವೀಕ್ಷಿಸುವ ಕುತೂಹಲಿಗಳಿಗೆ "ಇದೇ ಸತ್ಯ " ಎಂಬ ಭಾವನೆ ತರುವುದರಲ್ಲಿ ಪರ್ಯಾಪ್ತವಾದೀತು ...
ನಿಮಗೇನನಿಸುತ್ತದೆ ?