Tuesday, April 28, 2009

ಒಂದು ಫೋಟೋ ..


ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ತಮ್ಮ ಜೀವನದ ಕೊನೆಯ ಯಕ್ಷಗಾನ ಶಾಂಭವಿ ವಿಲಾಸ ಪ್ರಸಂಗದ ಪ್ರದರ್ಶನದಲ್ಲಿ .....


ಅಪ್ರತಿಮ ಹಿಮ್ಮೇಳ ವಾದಕನಿಗೆ ನುಡಿ ನಮನ ....


ಎಡನೀರು ಮೇಳದವರು " ಜಾಂಬವತಿ ಕಲ್ಯಾಣ -ವೀರ ಅಭಿಮನ್ಯು " ಪ್ರಸಂಗವನ್ನು ಆಡಲಿರುವರು ಎಂಬ ವಿಚಾರ ತಿಳಿದ ನಾವು ಬಸವ ಜಯಂತಿ ಪ್ರಯುಕ್ತ ರಜೆ ಇದ್ದುದರಿಂದ ಈ ಸಲದ ಎಡನೀರು ಮೇಳದ ಒಂದು ಆಟವಾದರೂ ನೋಡಬೇಕೆಂಬ ಆಸೆಯಿಂದ ಬೆಂಗಳೂರಿನ ಕೋರಮಂಗಲದ ಎಡನೀರು ಮಠಕ್ಕೆ ಮಿತ್ರರಾದ ರಾಜಣ್ಣನವರೊಂದಿಗೆ ಸಂಜೆ ಎಳೂಕಾಲರ ಸುಮಾರಿಗೆ ತಲುಪಿದಾಗ ನಮಗೆ "ಚಿಪ್ಪಾರು ಬಲ್ಲಾಳರು " ಇನ್ನಿಲ್ಲ ಎಂಬ ಆಘಾತಕಾರಿ ವಿಷಯ ತಿಳಿಯಿತು .ಕಲಾವಿದರೆಲ್ಲ ದು:ಖಾರ್ತರಾಗಿದ್ದ ಸನ್ನಿವೇಶ ಬಹಳಷ್ಟು ಸಂಕಟವನ್ನು ಉಂಟುಮಾಡಿತು . ಮೃತರ ಗೌರವಾರ್ಥ ಆ ದಿನದ ಆಟವನ್ನು ರದ್ದುಗೊಳಿಸಲಾಯಿತು .


ಚಿಕ್ಕಂದಿನಿಂದಲೂ ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದ ನಮಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು . ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹಿರಿಯ- ಕಿರಿಯ ಕಲಾವಿದರಿಗೆಲ್ಲ ಚೆಂಡೆ ಮದ್ದಲೆ ಸಾಥ್ ನೀಡಿ ಅವರೆಲ್ಲರ ಪದ್ಯಗಳು ಮೆರೆಸುವಂತೆ ಮಾಡಿದ ಖ್ಯಾತಿ ಇವರದ್ದು. ೧೯೨೮ ರ ಎಪ್ರಿಲ್ ೨ ರಂದು ಜನಿಸಿದ ಇವರು ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ ಅನುಭವಿಸಿದವರು. ದಿವಂಗತ ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಕಡತೋಕ -ಬಲ್ಲಾಳರ ಜೋಡಿ ಯಕ್ಷರಂಗ ಕಂಡ ಅದ್ಭುತ .

ಮೂಲ್ಕಿ ಮೇಳದಿಂದ ಆರಂಭಗೊಂಡ ಇವರ ಕಲಾಸೇವೆ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ 50 ವರ್ಷಗಳ ಕಾಲ ಮುಂದುವರಿದು ಮೇಳದಿಂದ ನಿವೃತ್ತರಾದರೂ ಯಕ್ಷಗಾನಗಳಲ್ಲಿ ಸಕ್ರಿಯರಾಗಿದ್ದರು .
ಸದಾ ಸ್ಥಿತಪ್ರಜ್ಞರಂತೆ ಕಾಣುತ್ತಿದ್ದ ಬಲ್ಲಾಳರು ಸಂತೃಪ್ತ ಜೀವನವನ್ನು ನಡೆಸಿದವರು. ಎಡನೀರು ಮೇಳದ ಆಟಕ್ಕೋಸ್ಕರ ಬೆಂಗಳೂರು ನಗರಕ್ಕೆ ಬಂದಿದ್ದ ಇವರು ಚೌಕಿ ಪೂಜೆಯಾಗುತ್ತಿದ್ದಂತೆ ನಮ್ಮನ್ನು ಬಿಟ್ಟು ಅಗಲಿದರು . ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ ... ಎಂಬಂತೆ ಸುಖ ಮರಣವನ್ನು ಪಡೆದ ಇವರು ಧನ್ಯರು.

ಅವರಂತೆ ಚೆಂಡೆ ಮದ್ದಲೆ ನುಡಿಸಬಲ್ಲ ಕಲಾವಿದರು ವಿರಳ .ಹಳೆಯ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಬಲು ದೊಡ್ಡ ನಿರ್ವಾತವನ್ನು ನಿರ್ಮಾಣವಾಯಿತು. ಇದು ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟ . ಅವರ ದಿವ್ಯಾತ್ಮವು ಚಿರ ಶಾಂತಿಯನ್ನು ಹೊಂದಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತೇವೆ..

Thursday, April 2, 2009

ಯಕ್ಷಗಾನ ಪತ್ರಿಕೆಗಳು ......




ಚಿಕ್ಕವನಿದ್ದಾಗ ಉದಯವಾಣಿ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಅಥವಾ ಅಪರೂಪಕ್ಕೊಮ್ಮೆ ಯಕ್ಷಗಾನದ ಕುರಿತಾದ ಲೇಖನಗಳು ಬರುತ್ತಿದ್ದುವು .ಅವನ್ನು ಕುತೂಹಲದಿಂದ ಓದುತ್ತಿದ್ದ ನಮಗೆ ಯಕ್ಷಗಾನಕ್ಕೆ ಮೀಸಲಾಗಿರುವ ಪತ್ರಿಕೆ ಇರಬೇಕಿತ್ತು ಎಂದು ಅನಿಸಿತ್ತು .ಆಗ ನಮಗೆ ಬೇಕಾದ ರಮ್ಯಾದ್ಭುತ ವೇಷಗಳ ಕಪ್ಪು ಬಿಳುಪು ಫೋಟೋಗಳು ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದುದನ್ನು ಕತ್ತರಿಸಿ ಗೇರು ಬೀಜದ ಮರದಿಂದ ಒಸರುವ ಗೋಂದು ಬಳಸಿ ಪುಸ್ತಕವೊಂದರಲ್ಲಿ ಅಂಟಿಸಿ ಇಡುತ್ತಿದ್ದ ನಮಗೆ ಯಕ್ಷಗಾನ ಪತ್ರಿಕೆಗಳ ಬಗ್ಗೆ ಅರಿವಿರಲಿಲ್ಲ .

ಯಕ್ಷಗಾನಕ್ಕೆ ಸೀಮಿತವಾಗಿರಬೇಕೆಂದು ಈ ಹಿಂದೆ ಕಡತೋಕ ಮಂಜುನಾಥ ಭಾಗವತರು "ಯಕ್ಷಗಾನ" ಎಂಬ ಪತ್ರಿಕೆಯನ್ನು ಆರಂಭಿಸಿ ಕೈ ಸುಟ್ಟುಕೊಂಡಿದ್ದರು ಎಂಬ ವಿಚಾರ ಮೊನ್ನೆ ಮನೆಯಲ್ಲಿ ಶ್ರೀ ಕುಬಣೂರು ಶ್ರೀಧರ ರಾಯರ "ಯಕ್ಷಪ್ರಭ " ಮಾಸ ಪತ್ರಿಕೆಯ ಹಳೆಯ ಆವೃತ್ತಿ ನೋಡಿದಾಗ ತಿಳಿದು ಬಂತು. ಈಗ ಆ ಪತ್ರಿಕೆಗೆ ಪುನರ್ಜನ್ಮ ಕೊಟ್ಟು ಆರಂಭಿಸಲಾಗಿದೆ ಎಂಬ ವಿಚಾರ ತಿಳಿದು ಸಂತಸವಾಯಿತು .

ನನಗೆ ತಿಳಿದಂತೆ ಸುಮಾರು ೨೨ ವರ್ಷಗಳಿಂದ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿ ಛಲ ಬಿಡದ ತ್ರಿವಿಕ್ರಮನಂತೆ ಶ್ರೀ ಕುಬಣೂರು ಶ್ರೀಧರ ರಾಯರು ತಮ್ಮ ವೃತ್ತಿ ಜೀವನದ ನಡುವೆಯೂ ಯಕ್ಷ ಪ್ರಭ ಪತ್ರಿಕೆಯನ್ನು ಆನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ . ದಕ್ಷಿಣ ಕನ್ನಡ ,ಉತ್ತರಕನ್ನಡ , ಮುಂಬೈ ,ದುಬೈ ಹಾಗೂ ಬೆಂಗಳೂರಿನ ಮುಖ್ಯ ಕಾರ್ಯಕ್ರಮಗಳ ವಿವರ , ಲೇಖನಗಳು , ದೇಶದ ನಾನಾ ಕಡೆಗಳಲ್ಲಿನ ಯಕ್ಷಗಾನ ಪ್ರದರ್ಶನ, ಸನ್ಮಾನ ,ಸಂಸ್ಮರಣೆ ಇತ್ಯಾದಿ ವಿಷಯಗಳಲ್ಲದೇ ಸಂಗ್ರಹ ಯೋಗ್ಯ ಲೇಖನಗಳು ಮತ್ತು ತಾಳಮದ್ದಲೆ , ಕಟೀಲು, ಧರ್ಮಸ್ಥಳವೆ ಮೊದಲಾದ ಮೇಳಗಳ ಆಯಾ ಮಾಸದ ಆಟದ ವೇಳಾಪಟ್ಟಿ ಯನ್ನು ಒಳಗೊಂಡ ಈ ಪತ್ರಿಕೆಯನ್ನು ಓದುವುದೇ ಒಂದು ಯಕ್ಷ ಕಲಾಭಿಮಾನಿಗಳಿಗೆ ಆನಂದದ ವಿಚಾರ . ಯಕ್ಷಗಾನದ ಕುರಿತು ಹಲವು ಅಂತರ್ಜಲ ತಾಣಗಳಿದ್ದರೂ ಯಕ್ಷಪ್ರಭ ಪತ್ರಿಕೆಯನ್ನು ಬಿಟ್ಟು ಬೇರಾವ ಪತ್ರಿಕೆಯೂ ಯಕ್ಷಗಾನ ಪತ್ರಿಕೆಯಾಗಿ ಮಾರುಕಟ್ಟೆಯಲ್ಲಿ ಸಾರ್ವಭೌಮತ್ವ ಹೊಂದಿಲ್ಲ ಎಂದು ನನ್ನ ಅನಿಸಿಕೆ.

ನಿಮಗೇನನಿಸುತ್ತದೆ ?

Monday, March 16, 2009

ಗೆಳೆಯನಿಗೆ ವಿದಾಯ .....




ನಡೆವೆ ನೀನು ಎನ್ನ ಬಿಟ್ಟು
ನಿನ್ನ ಬಾಳ ಗುರಿಯನು
ಸೇರಲೆಂದು ಜಗದ ಬಳಿಗೆ
ಎನ್ನ ಜೀವದ ಗೆಳೆಯನೆ


ಕಳೆದೆವೆ೦ತೊ ಹಲವು ದಿವಸ
ಕೂಡಿ ನಾವು ಹಿತದಲಿ
ಸರಸ ವಿರಸ ಕೊನೆಗೆ ಹರುಷ
ಕೂಡಿ ನಾವು ಹಂಚುತ


ಬಲಿತ ಹಕ್ಕಿ ಕಾಳು ಹೆಕ್ಕಿ
ತಿನ್ನಲೆಂದು ಹಾರುತ
ಮೇಲೆ ನೆಗೆವ ತೆರದಿ ನಾವು
ಜತೆಯ ಬಿಟ್ಟು ಅಗಲುತ


ಇರಲಿ ಪ್ರೀತಿ ಸ್ನೇಹವೆಂದು
ನಿರತ ನಮ್ಮಲೆನ್ನುತ
ಮರಳಿ ನಡೆವ ನಮ್ಮ ನೆಲೆಗೆ
ಸವಿಯ ನೆನಪ ಉಳಿಸುತ

***

Tuesday, February 17, 2009

ಹೀಗೊಂದು ಲಕ್ಷ್ಮೀ ಸ್ವಯಂವರ......


ಶ್ರೀಯುತ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ,ನಿಡ್ಲೆ ಧರ್ಮಸ್ಥಳವು ಕಳೆದ ೨೫ ವರ್ಷಗಳಿಂದ ನಾನಾ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಯಕ್ಷ ರಸಿಕರ ಮನ ತಣಿಸುವಲ್ಲಿ ಯಶಸ್ವಿಯಾಗಿದೆ. ಹಲವು ಏಳುಬೀಳುಗಳನ್ನು ಕಂಡ ಶ್ರೀಯುತ ನಿಡ್ಲೆ ಗೋವಿಂದ ಭಟ್ಟರು ಈ ಸಂಚಾರಿ ಮೇಳವನ್ನು ಕರ್ನಾಟಕದ ವಿವಿಧ ಭಾಗಗಳಲ್ಲದೆ ಮುಂಬೈ ,ಹೈದರಾಬಾದ್, ತಮಿಳುನಾಡು , ವಿಶಾಖಪಟ್ಟಣ ,ಮುಂತಾದ ದೂರದ ಊರುಗಳಲ್ಲೂ ತೆಂಕು ತಿಟ್ಟು ಯಕ್ಷಗಾನದ ಕಂಪನ್ನು ಪಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .
ತಾವು ಮಾಡುವ ಎಲ್ಲ ಪಾತ್ರಕ್ಕೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನ್ಯಾಯವನ್ನು ಒದಗಿಸುವ ಅನುಭವಿ ಕಲಾವಿದರಾದ ನಿಡ್ಲೆ ಗೋವಿಂದ ಭಟ್ಟರು, ಇತ್ತೀಚೆಗೆ ಒಂದು ಹೊಸ ಪ್ರಯೋಗವನ್ನು ಮಾಡಿ ಯಕ್ಷ ರಸಿಕರ ಮುಂದೆ ಸಮರ್ಪಿಸಿದ್ದಾರೆ. ಯಕ್ಷಗಾನ "ಸಮುದ್ರ ಮಥನ " ಪ್ರಸಂಗದಲ್ಲಿ ಬರುವ "ಲಕ್ಷ್ಮೀ ಸ್ವಯಂವರ" ಪ್ರಸಂಗವನ್ನು ಹೊರಾಂಗಣ ಚಿತ್ರೀಕರಣ ಮಾಡುವ ಮುಖೇನ ಹೊಸದೊಂದು ಪ್ರಯೋಗವನ್ನು ನಡೆಸಿದ್ದಾರೆ .


ಎಂಭತ್ತರ ದಶಕದಲ್ಲೇ ಹಗಲು ಯಕ್ಷಗಾನ ಕಾರ್ಯಕ್ರಮಗಳು ಆರಂಭವಾದಾಗ ಯಕ್ಷಪ್ರಿಯರ ಟೀಕೆಗೆ ಗುರಿಯಾಗಿದ್ದ ಇಂಥ ಪ್ರದರ್ಶನಗಳು ಇತ್ತೀಚಿಗೆ ಪ್ರೇಕ್ಷಕರಿಗಾಗಿ ,ಸಮಯಾನುಕೂಲಕ್ಕಾಗಿ ಅಥವಾ ಇನ್ನಿತರೆ ಕಾರಣಗಳಿಂದ ಹಗಲು ಯಕ್ಷಗಾನ ಕ್ರಮೇಣ ಪ್ರೇಕ್ಷಕರಿಂದ ಸ್ವೀಕರಿಸಲ್ಪಟ್ಟು ಪ್ರದರ್ಶನವಾಗುತ್ತಿವೆ.

ಈಗಿನ ದಿನಗಳಲ್ಲಿ ಸಿ.ಡಿ.ಗಳ ಭರಾಟೆಯಲ್ಲಿ ಹಲವಾರು ಸಿ.ಡಿ.ಗಳು ಮಂಗಳೂರಿನ ಕ್ಯಾಡ್ ಮೀಡಿಯಾದ೦ಥ ಸ್ಟುಡಿಯೊಗಳಲ್ಲಿ ಚಿತ್ರೀಕರಣಗೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ . ಇವುಗಳನ್ನು ನೋಡುವಾಗ ready to eat ಆಹಾರ ವಸ್ತುಗಳಂತೆ ಅನಿಸಿದರೂ ದೂರದ ಊರುಗಳಲ್ಲಿ ನೆಲೆಸಿರುವವರಿಗೆ ಒಮ್ಮೆಗೆ ಯಕ್ಷಗಾನ ನೋಡಬೇಕೆಂಬ ಸೆಳೆತವನ್ನು ತಣಿಸುವಲ್ಲಿ ಉಪಕಾರಿಗಳಾಗುತ್ತವೆ.


ಇವೆಲ್ಲದಕ್ಕಿಂತ ಭಿನ್ನವಾಗಿ ನಿಡ್ಲೆ ಗೋವಿಂದ ಭಟ್ಟರು ಲಕ್ಷ್ಮೀ ಸ್ವಯಂವರ ಪ್ರಸಂಗವನ್ನು ಹೊರಾಂಗಣದಲ್ಲಿ ಸ್ವಾಭಾವಿಕ ಬೆಳಕಿನಲ್ಲಿ ಪ್ರದರ್ಶಿಸಿ ,ಅದನ್ನು ದಾಖಲಿಸಿ ಯಕ್ಷಪ್ರಿಯರಿಗಾಗಿ ಮಾರುಕಟ್ಟೆಗೆ ತಲುಪಿಸಿದ್ದಾರೆ. ಸಮುದ್ರ ಮಥನಕ್ಕೆ ರಾಕ್ಷಸರೂ ದೇವತೆಗಳೂ ಒಂದಾಗಿ ಮಂದರಾದ್ರಿಯನ್ನು ಕಡೆಗೋಲಾಗಿಸಿ ವಾಸುಕಿಯನ್ನು ಹಗ್ಗವಾಗಿ ತರುವ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆhttp://www.youtube.com/watch?v=Uwu6uEsIzRs&feature=channel ಒಮ್ಮೆ ಇದನ್ನು ನೋಡಿದಾಗ ಉಳಿದ ಚಿತ್ರೀಕರಿಸಲ್ಪಟ್ಟ ಯಕ್ಷಗಾನಗಳಿಗಿಂತ ಬೇರೆ ಅನುಭವವನ್ನು ಕೊಡುವಲ್ಲಿ ಯಶಸ್ವಿಯಾಗಿದೆ.
ಏನಿದ್ದರೂ ಇನ್ನು ಮುಂದೆ "ಯಕ್ಷರಾತ್ರಿಗಳನ್ನು " ನಡುಗಿಸಿದ ಕಲಾವಿದರು "ಯಕ್ಷಹಗಲಿನಲ್ಲಿ" ಮೆರೆಯುತ್ತಿದ್ದಾರೆ ! ಎಂಬ ಹೊಸ ವಿಶೇಷಣವನ್ನು ಸೃಷ್ಟಿಸಿದ್ದಂತೂ ನಿಜ.
ನಿಮಗೋಸ್ಕರ ಕೆಲವು ತುಣುಕುಗಳು ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ . ನೋಡಿ ನಿಮ್ಮ ಅನಿಸಿಕೆ ತಿಳಿಸಿ .




Friday, February 6, 2009

ಮತಾಂತರ ..... ಯಕ್ಷಗಾನ ಮತ್ತು ಸೇವೆ ಆಟ....


ಕೆಲವೇ ತಿಂಗಳ ಹಿಂದೆ ಪ್ರಸಿದ್ದ ದಿನ ಪತ್ರಿಕೆಯೊಂದು ಭೈರಪ್ಪನವರ ವಿಚಾರಧಾರೆಯೊಂದಿಗೆ " ಮತಾಂತರ " ಕುರಿತ ಚರ್ಚೆಯನ್ನು ನಡೆಸಿತ್ತು . ಸಾಕಷ್ಟು ಹಿಗ್ಗಾಮುಗ್ಗಾ ಎಳೆದಾಡಿ ತಮ್ಮ ಅದ್ಬುತ ವಿಷಯ ಮಂಡನೆಯಿಂದ ಚುರುಕು ಮುಟ್ಟಿಸಿದ ಎಲ್ಲ ಬರಹಗಾರರೂ ತಮಗೆ ತೋಚಿದಂತೆ ಅಪ್ಪಣೆ ಕೊಡಿಸಿದರು. ಕೆಲವರಂತೂ ಚರ್ಚೆ ಆರಂಭಿಸಿದವರನ್ನು ಟೀಕಿಸಿ ಸಂತ್ರುಪ್ತಿಪಟ್ಟರು!
ಕುತೂಹಲದಿಂದ ದಿನವೂ ಬಿಡದೆ ಓದುತ್ತಿದ್ದ ನನಗೆ ಇತ್ತೀಚೆಗೆ ಕೌತುಕವಾದ ವಿಚಾರವೊಂದು ನನ್ನ ಕಲಾವಿದ ಮಿತ್ರರೊಬ್ಬರಿಂದ ತಿಳಿದು ಬಂತು .
ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಮೊನ್ನೆ ಫೆಬ್ರವರಿ ಎರಡನೇ ತಾರೀಖಿನಂದು ಮಂಗಳೂರಿನ ಬಳಿ ಬಜಪೆಗೆ ಸಮೀಪ ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಆಡಿಸಿದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಒಂದನೇ ಮೇಳದವರು ಆಡಿ ತೋರಿಸಿದರು. ಈ ಸೇವೆ ಆಟ ಆಡಿಸಲು ಕಾರಣ ಪರಿಹಾರವಾಗದೆ ಇದ್ದ ವ್ಯಾಜ್ಯವೊಂದು ಕಟೀಲು ಮಹಾತಾಯಿ ಪರಿಹರಿಸಿ ಕೊಟ್ಟದ್ದೇ ಆಗಿತ್ತು.
ಮಂಗಳೂರಿನ ಪರಿಸರದಲ್ಲಿ ಆಗಾಗ ಇಂಥ ಸಾಮರಸ್ಯದ ಘಟನೆಗಳು ನಡೆಯುತ್ತಲೇ ಇದ್ದರೂ ಯಾವ ಒಬ್ಬ ಮಾಧ್ಯಮದವರೂ ಇದನ್ನು ತೋರಿಸದೇ ಬರೀ "ಹೊಡಿ ಮಗಾ.. ಹೊಡಿ " ದೃಶ್ಯಗಳನ್ನು ಮಾತ್ರ ವೈಭವೀಕರಿಸಿ ಯಾಕೆ ತೋರಿಸುತ್ತಾರೋ ? ಇನ್ನೂ ಅರ್ಥವಾಗದ ವಿಷಯ !
ನಾಡಿದ್ದು ೧೨ನೆ ತಾರೀಕು ಇದೇ ಆದ್ಯಪಾಡಿಯ ಪರಿಸರದಲ್ಲಿ ಕ್ಲೆಮೆಂಟ್ ಪಿರೆರಾ ಎಂಬ ಭಕ್ತರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಆಡಿಸಲಿದ್ದಾರೆ . ಕುರಿಯ ಗಣಪತಿ ಶಾಸ್ತ್ರಿಯವರ ಸಾರಥ್ಯದಲ್ಲಿ ಈ ಸೇವೆ ಆಟ ನಡೆಯಲಿದೆ.
ಅನೇಕ ಹಿಂದೂ ಭಕ್ತರೂ ಚರ್ಚಗಳಿಗೆ ಹರಕೆ ,ಬೆಳೆ ಕಾಣಿಕೆ ಮತ್ತು ಹಸಿರುವಾಣಿ ಸಲ್ಲಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ.
ಹಸಿರುವಾಣಿ ಮೆರವಣಿಗೆಯಲ್ಲಿ "ಜೈ" ಕಾರ ಹಾಕುತ್ತ ಭಾಗವಹಿಸಿದ್ದೇನೆ.
ನಮ್ಮಲ್ಲಿ ಸಾಮರಸ್ಯ ಮೂಡಿಸುವುದಕ್ಕಿಂತ "ಒಡಕನ್ನು " ತರುವ ಕೆಲಸಗಳು ಹೆಚ್ಚಾಗುತ್ತಿರುವುದು ವಿಷಾದನೀಯ .
ಏನೇ ಇದ್ದರೂ ಎಲ್ಲೇ ಇದ್ದರೂ ಎಲ್ಲರೂ ಒಟ್ಟಿಗೆ ಈ ಭೂಮಿಯಲ್ಲೇ ಬಾಳಿ ಬದುಕಬೇಕೆಂಬ ಸಣ್ಣ ಸತ್ಯ ಯಾರ ಮನದಲ್ಲೂ ಮೂಡದೆ "ಬಿಸಿ ಬಿಸಿ " ಸುದ್ದಿ ಕೊಡುವುದೇ ನಮ್ಮ ಧ್ಯೇಯ ಎಂದು ವರ್ತಿಸುವುದು ಖಂಡನೀಯ .
ನಿಮಗೇನನಿಸುತ್ತದೆ ?

Thursday, January 22, 2009

ಓ ನನ್ನ ನಲ್ಲೆ .......



ಗಾಬರಿಯಾಗಬೇಡಿ ಭಟ್ಟರು ಏನು ಸಡನ್ನಾಗಿ ರಸಿಕರಾಗಿಬಿಟ್ಟರು ಅಂತ ....!!!!
ನಾನು ಇಲ್ಲಿ ಹೇಳಹೊರಟಿರುವುದು ಹೊಸತಾದ ಒಂದು ಕಥಾನಕವನ್ನು .
ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿದ ಒಂದು ಸಿನೆಮಾವನ್ನು "ಯಕ್ಷಗಾನ" ವಾಗಿ ಪರಿವರ್ತಿಸಿದ್ದು ಖ್ಯಾತ ಪ್ರಸಂಗಕರ್ತ , ಸೂಪರ್ ಹಿಟ್ ಪ್ರಸಂಗಗಳ ಜನಕ ಈ ಕಥಾನಕವನ್ನೂ ಬರೆದು ಮುಂದಿನ ತಿರುಗಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಅದರ ಕಥಾ ಹಂದರ ಎಲ್ಲವೂ ಸಿನೆಮಾದಿಂದ ಪ್ರೇರಣೆ ಮಾತ್ರ ! ಅದೇ ಸಿನೆಮಾದ "ಶಿರೋಗೀತೆಯನ್ನು" ವಿಶೇಷ ಆಕರ್ಷಣೆಯಾಗಿ ಖ್ಯಾತ ಭಾಗವತರು ನೃತ್ಯ ಸಂಯೋಜಿಸಿ ಆಡಿಸಲಿದ್ದಾರೆ . ಇದರ ಕಥಾನಾಯಕ ಗಿಟಾರ್ ನುಡಿಸುವುದರಲ್ಲಿ ನಿಸ್ಸೀಮ . ಬೇಟೆಯ ದೃಶ್ಯ , ಬೆಳದಿಂಗಳ ಕುಣಿತ , ಮಳೆಯಲ್ಲಿ ನಾಟ್ಯ , ಕ್ಷಣ ಕ್ಷಣಕ್ಕೂ ನಕ್ಕು ನಗಿಸಲು ನಾಲ್ಕು ಜನ ಹಾಸ್ಯಗಾರರು , ಕುತೂಹಲ ಭರಿತ ಸನ್ನಿವೇಶಗಳು ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ರಂಗಕ್ಕೆ ಬರಲಿದೆ ನಿರೀಕ್ಷಿಸಿ.....



ಅದರಲ್ಲಿ ಬರುವ ಪ್ರಧಾನ ಪಾತ್ರಗಳ ವೇಷದ ಜಲಕ್ ಇಲ್ಲಿದೆ ....
ನಿಮ್ಮ ಅನಿಸಿಕೆಗಳೇನು ?