Tuesday, August 18, 2009

ವಿಜ್ರ೦ಭಿಸಿದ ವಿರಾಟ ಪರ್ವ -ಸಂಜಯ ರಾಯಭಾರ ...


ಮೈಸೂರಿನ ಗಾನ ಭಾರತೀ ವೀಣೆ ಶೇಷಣ್ಣ ಭವನದಲ್ಲಿ ನಡೆದ ಜಿ.ಟಿ.ಯನ್. ಸಂಸ್ಮರಣಾ ವಿಶೇಷ ಕಾರ್ಯಕ್ರಮದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ವಿರಾಟ ಪರ್ವ - ಸಂಜಯ ರಾಯಭಾರ ಪ್ರದರ್ಶನ ಅತ್ಯುತ್ತಮವಾಗಿ ಪ್ರದರ್ಶಿಲ್ಪಟ್ಟಿತು. ಸಾಮಾನ್ಯವಾಗಿ ಬಡಗು ತಿಟ್ಟಿನಲ್ಲಿ ಹೆಚ್ಚಾಗಿ ಕಾಣುವ ಕೀಚಕ ವಧೆ - ಉತ್ತರ ಗೋಗ್ರಹಣ ತೆಂಕು ತಿಟ್ಟಿನಲ್ಲಿ ಅಪರೂಪಕ್ಕೊಮ್ಮೆ ಪ್ರದರ್ಶಿಸಲ್ಪಡುವ ಕಾರಣ ಅಪೂರ್ವ ಪ್ರಸಂಗವೆಂದು ಹೇಳಬಹುದು
ವಿರಾಟ ಪರ್ವ-ಸಂಜಯ ರಾಯಭಾರ ಪ್ರಸಂಗ ಬಲಿಪರ ನಿರ್ದೇಶನದಲ್ಲಿ ತೆಂಕು ತಿಟ್ಟಿನ ಕ್ರಮದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು .ಆರಂಭದಲ್ಲಿ ಬಾಲ ಗೋಪಾಲ ಕುಣಿತ , ಸ್ತ್ರೀ ವೇಷ , ಹೊಗಳಿಕೆ ಹಾಸ್ಯ ದೊಂದಿಗೆ ಆರಂಭಗೊಂಡ ಪ್ರದರ್ಶನದಲ್ಲಿ ಮೊದಲಿಗೆ ಬಲಿಪ ಪ್ರಸಾದರ ಭಾಗವತಿಕೆಯಿಂದ ಕಳೆಯೇರಿತು . ನಂತರ ಬಂದ ಶ್ರೀ ರಾಮಕೃಷ್ಣ ಮಯ್ಯರು ಶೀತ ದಿಂದ ಬಳಲುತ್ತಿದ್ದರೂ
ಸುಶ್ರಾವ್ಯವಾಗಿ ಭಾಗವತಿಕೆ ಮುಂದುವರಿಸಿದರು.

ಈ ಪ್ರಸಂಗದಲ್ಲಿ ಮನಸೆಳೆದ ಪಾತ್ರ ನಿಡ್ಲೆ ಗೋವಿಂದ ಭಟ್ಟರ ವಲಲ ಭೀಮನದ್ದು. ಮೊದಲ ಪ್ರಸಂಗ ವಿರಾಟ ಪರ್ವದಲ್ಲಿ ನಿಡ್ಲೆ ಗೋವಿಂದ ಭಟ್ಟರ ವಲಲ, ಮೋಹನ ಕುಮಾರ್ ಅಮ್ಮುಂಜೆಯವರ ಕೀಚಕ , ಕೆದಿಲರ ಸೈರಂಧ್ರಿ , ಜಯಪ್ರಕಾಶ್ ಪೆರ್ಮುದೆ ಅರ್ಜುನ / ಬೃಹನ್ನಳೆ , ಗಂಗಾಧರದ ವಿರಾಟರಾಯ,ಕುಂಬ್ಳೆ ಶ್ರೀಧರ ರಾಯರ ಧರ್ಮರಾಯ , ವಸಂತ ಗೌಡ ಉತ್ತರ ಕುಮಾರ , ಸುಬ್ರಾಯ ಹೊಳ್ಳರ ಕೌರವ , ಶಿವಪ್ರಸಾದರ ಸುಶರ್ಮ , ಈಶ್ವರ ಪ್ರಸಾದರ ಸುದೇಷ್ಣೆ ,ಸದಾಶಿವ ಕುಲಾಲರ ಕರ್ಣ , ಮಹೇಶ ಮಣಿಯಾಣಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದರು . ಕಲಾವಿದರೆಲ್ಲ ಈ ಪ್ರಸಂಗದಲ್ಲಿ ಸಾಕಷ್ಟು ಶ್ರಮ ವಹಿಸಿ ಯಶಸ್ವಿಯಾಗಿಸುವಲ್ಲಿ ಸಫಲರಾದರು.

ಕೌರವನ ಪಾತ್ರಧಾರಿ " ಹಿಂದೆ ಒಬ್ಬ ಬ್ರಾಹ್ಮಣ ದಾರಿಯಲ್ಲಿ ನಡೆಯುತ್ತಿದ್ದಾಗ ಕಾಲಿಗೆ ಮುಳ್ಳು ಚುಚ್ಚಿದಾಗ ಮುಳ್ಳನ್ನು ತೆಗೆದುದಲ್ಲದೆ , ಮುಳ್ಳಿನ ಗಿಡವನ್ನರಸಿ ಅದನ್ನು ಬೇರು ಸಮೇತ ಕಿತ್ತು ಸುತ್ತು ಹಾಕಿ ತನ್ನ ಸಿಟ್ಟನ್ನು ಶಮನ ಮಾಡಿದ ಹಾಗೆಯೇ ಈ ಪಾಂಡವರನ್ನು ಸಮೂಲವಾಗಿ ನಾಶ ಮಾಡುವುದೇ ನನ್ನ ಉದ್ದೇಶ " ಎಂಬುದಾಗಿ ಹೇಳಿದ್ದು ಪಕ್ಕನೆ ಚಾಣಕ್ಯನ ನೆನಪನ್ನು ತರಿಸಿತು !!

ವರ್ಷದಿಂದ ವರ್ಷಕ್ಕೆ ಭಾಗವತಿಕೆಯಲ್ಲಿ ಪಕ್ವತೆಯನ್ನು ಪಡೆಯುತ್ತಿರುವ ಶ್ರೀ ರಾಮಕೃಷ್ಣ ಮಯ್ಯರು ಯಾವುದೇ ಹಳೆಯ ಪ್ರಸಂಗಗಳಿಗೆ ಬಲಿಪರಂಥ ಹಿರಿಯ ಕಲಾವಿದರಿಂದ ಮಾಹಿತಿ ಪಡೆದು ಪ್ರಯೋಗಿಸಿ ಪ್ರದರ್ಶನದಲ್ಲಿ ಯಶಸ್ಸನ್ನು ಕಾಣುತ್ತಿರುವುದು ಸಂತಸದ ಸಂಗತಿ. ಪ್ರಸಂಗದ ನಡೆಗಳನ್ನು , ಆಡುವ ಕ್ರಮವನ್ನು ಹಿರಿಯ ಕಲಾವಿದರಿಂದ ಕಲಿತು ಅದನ್ನು ಮುದುವರಿಸುವ ಅವಕಾಶ ನಿಡ್ಲೆ ಯಕ್ಷಗಾನ ಮಂಡಳಿಯಲ್ಲಿ ಇರುವುದರಿಂದ ಉದಯೋನ್ಮುಖ ಕಲಾವಿದರಿಗೆ ವೃತ್ತಿಯಲ್ಲಿ ಬೆಳವಣಿಗೆ ಹೊಂದಲು ಅವಕಾಶವಿದೆ .ಕಾಲಮಿತಿ ಪ್ರದರ್ಶನದಲ್ಲೂ ಇಂಥ ಒಳ್ಳೆಯ ಪ್ರಸಂಗಗಳನ್ನು ಯಾವುದೇ ಲೋಪ ಬರದಂತೆ ಆಡುವ ಸವಾಲನ್ನು ಸಮರ್ಥ ಹಿಮ್ಮೇಳ ಹೊಂದಿದ ನಿಡ್ಲೆ ತಂಡ ಸ್ವೀಕರಿಸಿ ಯಶಸ್ವಿಯಾಗಿದ್ದು ಸಂತಸದ ವಿಚಾರ .

ಇಂಥ ಪುರಾಣಿಕ ಪ್ರಸಂಗಗಳನ್ನು ಆಯೋಜಿಸಲು ಸಂಘಟಕರಿಗೆ ನಿಜವಾದ ಯಕ್ಷಗಾನದ ಅಭಿರುಚಿ ಇರಬೇಕಾದ್ದು ಮುಖ್ಯ .ಕೆಲವೊಮ್ಮೆ ಬಹಳಷ್ಟು ಹಣ ವ್ಯಯ ಮಾಡಿ ಗತ ವೈಭವ ಮೆರೆದು ದಂತ ಕಥೆಯಾಗಿರುವ ಕೆಲವೇ ಕಲಾವಿದರನ್ನೇ ಕರೆಸಿ ಅದೇ ಚರ್ವಿತ ಚರ್ವಣ ಪ್ರಸಂಗಗಳನ್ನು ಮಹಾನಗರಗಳಲ್ಲಿ ಪ್ರದರ್ಶಿಸುತ್ತಿರುವ ಇಂದಿನ ಈ ದಿನಗಳಲ್ಲಿ ಒಳ್ಳೆಯ ಹಿಮ್ಮೇಳವನ್ನು ಆರಿಸಿ , ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ , ಸಮಯೋಚಿತವಾಗಿ ನಡೆಸಿದ ಇಂಥ ಕಾರ್ಯಕ್ರಮಗಳು ಸ್ವಾಭಾವಿಕವಾಗಿಯೇ ಯಶಸ್ಸನ್ನು ಕಾಣುತ್ತವೆ ಎಂಬುದಕ್ಕೆ ಮೈಸೂರಿನ ಯಕ್ಷಗಾನ ಪ್ರದರ್ಶನಗಲೇ ಸಾಕ್ಷಿ. ಒಟ್ಟಿನಲ್ಲಿ ಒಂದು ಒಳ್ಳೆಯ ಪುರಾಣಿಕ ಪ್ರಸಂಗದ ಪ್ರದರ್ಶನದ ರಸಗವಳವನ್ನು ನೀಡಿದ ಸಂಘಟಕರು ಅಭಿನಂದನಾರ್ಹರು.
***

2 comments:

ಚೆ೦ಬಾರ್ಪು said...

i missed it :(

YAKSHA CHINTANA said...

ಬಲಿಪ್ಪರ ಯಕ್ಷಗಾನ ಯಾವತ್ತಿಗೂ ಒಂದು ಉತ್ತಮ ಸದವಕಾಶ.ಅದು ಹೇಗಾಯಿತು ಅಂತ ವಿಮರ್ಶೆ ಮಾಡುವುದಕ್ಕಿಂತಲೂ ನಾವು ಹಾಜರಿರುವುದೇ ಒಂದು ಕರ್ತವ್ಯ.ಅದನ್ನು ನೆರವೆರಿಸುವುದೇ ಸೌಭಾಗ್ಯ. ಆ ಭಾಗ್ಯ ಸಿದ್ದಿಸುವುದೇ ಅದೃಷ್ಟ..

August 23, 2009 1:33 PM