Wednesday, May 6, 2009

ಯಕ್ಷಗಾನ "ದಶಾವತಾರ"ದ ಕುರಿತು......

ಯಕ್ಷಗಾನದಲ್ಲಿ "ದಶಾವತಾರ" ವೆಂಬ ಕಥಾನಕ ಸುಪ್ರಸಿದ್ಧ . ವಿಷ್ಣುವಿನ ಹತ್ತು ಅವತಾರಗಳನ್ನು ಒಂದೇ ರಾತ್ರಿಯಲ್ಲಿ ಪ್ರದರ್ಶಿಸುವುದು ಈ ಪ್ರಸಂಗದಲ್ಲಿ . ಸಾಮಾನ್ಯವಾಗಿ ಪ್ರಸಂಗ ದಶಾವತಾರವಾದರೂ ವಿಷ್ಣುವಿನ ಎಂಟು ಅವತಾರಗಳಾದ ಮತ್ಸ್ಯ , ವರಾಹ ,ನರಸಿಂಹ , ಕೂರ್ಮ , ವಾಮನ ,ಪರಶುರಾಮ , ಶ್ರೀರಾಮ ಹಾಗೂ ಕೃಷ್ಣಾವತಾರಗಳನ್ನು ಮಾತ್ರ ರಂಗದಲ್ಲಿ ಪ್ರದರ್ಶಿಸುವುದು ಸಂಪ್ರದಾಯ . ಇಂದಿಗೂ ಕಟೀಲು ಮೇಳದವರು ಸಂಪ್ರದಾಯದಂತೆ ಎಂಟು ಅವತಾರಗಳನ್ನು ಮಾತ್ರ "ದಶಾವತಾರ" ಪ್ರಸಂಗದಲ್ಲಿ ಆಡಿ ತೋರಿಸುತ್ತಾರೆ . ನಾನಾ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಪೋಣಿಸಿ ಸಿದ್ಧ ಪಡಿಸಿದ ಈ ಪ್ರಸಂಗ ನಿಜಕ್ಕೂ ಆಕರ್ಷಣೀಯವಾಗಿದೆ .






ದಶಾವತಾರದ ಕಥೆಯನ್ನೇ ಆಧರಿಸಿದ ಆದರೆ ಎಂಟು ಅವತಾರಗಳನ್ನು ಮಾತ್ರ "ವಿಷ್ಣು ಲೀಲೆ " ಎಂಬ ಹೆಸರಿನಿಂದ ಶ್ರೀಧರ್ಮಸ್ಥಳ ಮೇಳದವರು ಪ್ರದರ್ಶಿಸುತ್ತಾರೆ . ವಿಷ್ಣು ಲೀಲೆ ಪ್ರಸಂಗವನ್ನು ವಿದ್ವಾನ್ ಶ್ರೀ ಡಿ.ವಿ.ಹೊಳ್ಳರು ಬರೆದುದಾಗಿದ್ದು ಒಳ್ಳೆಯ ಪದ್ಯ ರಚನೆಗಳಿಂದ ಕೂಡಿದೆ. ಅಂತೆಯೇ ಅಡೂರು ಬಳಕಿಲ ವಿಶ್ಣ್ವಯ್ಯನವರು ರಚಿಸಿದ "ದಶಾವತಾರ" ಕೃತಿ ಪ್ರಕಟವಾಗಿದ್ದು ರಂಗದಲ್ಲಿ ಪ್ರಯೋಗಕ್ಕೆ ಇದುವರೆಗೆ ಬಂದಿಲ್ಲ .ಕುತೂಹಲದ ವಿಷಯವೆಂದರೆ ಬೌದ್ಧಾವತಾರ ಹಾಗೂ ಕಲ್ಕ್ಯಾವತಾರವನ್ನೇಕೆ ಮೇಳಗಳು"ದಶಾವತಾರ"ಪ್ರಸಂಗದಲ್ಲಿ ಆಡುತ್ತಿಲ್ಲ ?






ಇದೇ ಬರುವ ಜೂನ್ ತಿಂಗಳಿನಲ್ಲಿ ಮಂಗಳೂರು ಪುರಭವನದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ( ಬೌದ್ಧಾವತಾರ ಹಾಗೂ ಕಲ್ಕ್ಯಾವತಾರ ಸಹಿತ ) ಒಳಗೊಂಡ "ದಶಾವತಾರ" ಪ್ರಸಂಗವನ್ನು ಆಯೋಜಿಸಲಾಗಿದೆ ಎಂದು ಯಕ್ಷಗಾನ ಮಾಸ ಪತ್ರಿಕೆ ಯಕ್ಷಪ್ರಭಾದಲ್ಲಿ ಪ್ರಕಟವಾಗಿದೆ . ಇದರಲ್ಲಿ ಬೌದ್ಧಾವತಾರ ಕ್ಕಾಗಿ "ತ್ರಿಪುರ ಮಥನ " ಪ್ರಸಂಗವನ್ನು ಅಳವಡಿಸಲಾಗಿದೆ . ತ್ರಿಪುರ ಮಥನದಲ್ಲಿ ಬರುವ "ಚಾರ್ವಾಕನೆ " ಬೌದ್ಧಾವತಾರದ "ಬೌದ್ಧ" ಎಂಬುದು ಕುತೂಹಲದ ವಿಚಾರ . ಎಲ್ಲರಿಗೂ ಚಿರಪರಿಚಿತನಾದ ಗೌತಮ ಬುದ್ಧ ದಶಾವತಾರದ ಬುದ್ಧನಲ್ಲ ಎಂಬುದು ಗಮನಿಸಬೇಕಾದ ಅಂಶ.




ಹಾಗೆಯೇ ಬಲಿಪ ನಾರಾಯಣ ಭಾಗವತರು ರಚಿಸಿದ "ಕಲ್ಕ್ಯಾವತಾರ"ಪ್ರಸಂಗದಲ್ಲಿ ಕಲಿಯು ಮ್ಲೇ೦ಛರನ್ನು ದಮನ ಮಾಡಿ ಧರ್ಮ ಸಂರಕ್ಷಣೆ ಮಾಡುವ ಕಥೆಯಿದೆ . ಈ ಪ್ರಸಂಗವು ಅಪ್ರಕಟಿತವಾಗಿದ್ದು ಆಸಕ್ತರು ಪ್ರಕಟಿಸುವ ಕಾರ್ಯ ಮಾಡಿದಲ್ಲಿ ಅನುಕೂಲವಾಗುತ್ತದೆ .

















ದಶಾವತಾರದ ವರ್ಣನೆಯನ್ನು ಪುರಂದರ ದಾಸರು ತಮ್ಮ ಕೀರ್ತನೆಯೊಂದರಲ್ಲಿ ತುಂಬ ಸೊಗಸಾಗಿ ,ಸರಳವಾಗಿ ಹೇಳಿದ್ದು ಹೀಗೆ

ಜಲದಲಿ ಮತ್ಸ್ಯವತಾರನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹವತಾರಗೆ
ತರಳನ ಕಾಯ್ದ ನರಸಿಂಹನಿಗೆ
ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದಿರನೆಂಬ ದಶರಥ ಸುತನಿಗೆ
ಭಾಮೆಯರರಸ ಗೋಪಾಲನಿಗೆ
ಬತ್ತಲೆ ನಿಂತಿಹ ಬೌದ್ಧನಿಗೆ
ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ
ಹತ್ತವತಾರದಿ ಭಕ್ತರ ಪೊರೆಯುವ
ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ

ಇದರಲ್ಲಿ ಬರುವ ಬೌದ್ಧ ಚಾರ್ವಾಕ ಸಿದ್ಧಾಂತ ಬೋಧಿಸಿದ ಚಾರ್ವಾಕನೆಂಬುದು ವಿದ್ವಾಂಸರ ಅಭಿಮತ .
ಮೇಲಿನ ದಾಸರ ಪದವನ್ನು ಯಕ್ಷಗಾನಕ್ಕೆ ಅಳವಡಿಸಿ ಹಾಡುವುದನ್ನು ಆಗಾಗ ನಾವು ನೋಡುತ್ತಿರುತ್ತೇವೆ . ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದವರು ಬಿಡುಗಡೆ ಮಾಡಿದ ಪೂರ್ವರಂಗ ಪುಸ್ತಕದಲ್ಲಿ ಈ ಹಾಡನ್ನು ಯಕ್ಷಗಾನದ ರಾಗಕ್ಕೆ ಅಳವಡಿಸಿ ಪಾಠಾ೦ತರ ಮಾಡಿದ್ದು ಓದಲು ಸೊಗಸಾಗಿದೆ.

ಒಟ್ಟಿನಲ್ಲಿ ವಿಷ್ಣುವಿನ ಎಲ್ಲ ಹತ್ತು ಅವತಾರದ "ಸಂಪೂರ್ಣ ದಶಾವತಾರ " ಯಕ್ಷಗಾನವನ್ನು ರಂಗದಲ್ಲಿ ನೋಡಬೇಕಾದಲ್ಲಿ ಜೂನ್ ೬ ರ ಕುರಿತು ಕಾಯಲೇಬೇಕು !



***

3 comments:

YAKSHA CHINTANA said...

olle mahiti subbana.good..

chirantana said...

very nice piece of information. I was searching for that song. thanks for giving full version of Dashavatara song. good photos.

shenoy mam said...

Dasara Padyada(Naavu maneyyali Bhajaneya Mangalakke eee haadu haaduvuduntu...)praarambha "Chalisuva jaladali Matysanige..... Buddha mattu charvaaka olle charchaarha vishaya...maahithigaagi dhanyavaadagalu subbanna.