Sunday, September 7, 2008

ನೆರೆ ಬಂದ ಬಳಿಕ .......

"ಇಪ್ಪತ್ತು ವರ್ಷಗಳಿಂದ ಇಂಥ ಮಳೆ ಬಂದಿರಲಿಲ್ಲ ; ನಾನು ಶಾಲೆಗೆ ಹೋಗುತ್ತಿದ್ದಾಗ ಒಮ್ಮೆ ಇಂಥ ಮಳೆ ಬಂದು ಕೆಳಗಿನ ಪೇಟೆ ಪೂರ್ತಿ ಮುಳುಗಿ ಹೋಗಿ ಮೇಲಿನ ಪೇಟೆ ಯಾ ಅರ್ಧಕ್ಕೇ ನೀರು ಬಂದಿತ್ತು " ಎಂದು ಅಣ್ಣಪ್ಪ ಮೂಲ್ಯರು ನೆನಪಿಸಿಕೊಂಡರು. ಆ ದಿನ ನಿಜವಾಗಿಯೂ ಭಾರೀ ಮಳೆ ಸುರಿದಿತ್ತು .ಮುಸಲಧಾರೆಯ ಮಳೆ ನಿರಂತರ ಹದಿನೆಂಟು ಗಂಟೆಗಳ ಕಾಲ ಸುರಿದದ್ದರಿಂದ ಊರಿಗೆ ಊರೇ ಅಲ್ಲೋಲಕಲ್ಲೋಲವಾಗಿತ್ತು. ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿತ್ತು. ಹಲವಾರು ಕುಟುಂಬಗಳು ನೀರುಪಾಲಾಗಿದ್ದವು .ಶಾಲೆಗಳಿಗೆ ಅಘೋಷಿತ ರಜೆ ಮುಂದುವರೆದಿತ್ತು . ಮಾಧ್ಯಮಗಳಲ್ಲಿ ಸಮೀಕ್ಷೆ , ಮಂತ್ರಿಗಳ ವೈಮಾನಿಕ ವೀಕ್ಷಣೆ ಎಲ್ಲವೂ ಆಗಿ ಪತ್ರಿಕೆಗಳ ಮುಖ ಪುಟಗಳಲ್ಲಿ " ಭಾರೀ ಮಳೆ ; ಇಪ್ಪತ್ತು ಸಾವು " ರಾರಾಜಿಸುತ್ತಿತ್ತು.
ನಿನ್ನೆಯಿಂದ ಮಳೆ ಇಳಿಮುಖವಾಗುತ್ತಿದ್ದಂತೆಯೇ ಆಳುವ ಪಕ್ಷದ ಶಾಸಕರು ತಮ್ಮ ಪಟಾಲಮ್ಮಿನೊಂದಿಗೆ ಊರಿಗೆ ಭೀತಿ ನೀಡಿ ನೊಂದ ಜನರಿಗೆ ಸಾಂತ್ವನ ನೀಡುವ ಕಾರ್ಯದಲ್ಲಿ ತೊಡಗುವವರಿದ್ದರು . ನದೀ ತೀರದ ಜನರಲ್ಲಿ ತೊಂಭತ್ತು ಪ್ರತಿಶತ ಜನರು ಬಡವರು. ತಮ್ಮ ಗುಡಿಸಲು ಮನೆಗಳನ್ನು ಕಳೆದುಕೊಂಡು ಶಾಲೆಯಲ್ಲಿ ಆಶ್ರಯ ಪಡೆದಿದ್ದರು . ಜನಾನುರಾಗಿಯೂ ಆಡ್ಯರೂ ಆದ ವೆಂಕಪ್ಪ ಶೆಟ್ಟರು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದರು . ಮಂತ್ರಿ ಮಂಡಲದಲ್ಲಿ ಚರ್ಚೆ ನಡೆದು ಎರಡು ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ ಎಂಬ ವಿಚಾರ ಜನರಲ್ಲಿ ಸ್ವಲ್ಪ ಸಮಾಧಾನ ತಂದಿತ್ತು .
ಆ ದಿನ ಭೇಟಿ ನೀಡಿದ ಶಾಸಕರಾದ ಸಂಕಪ್ಪ ಬ೦ಗೇರರು ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿದರು . ಕಾರ್ಯದಕ್ಶತೆಗೆ ಹೆಸರಾದ ಬ೦ಗೇರರು ಜನರ ಕಷ್ಟಗಳಿಗೆ ಕೂಡಲೇ ಸ್ಪಂದಿಸುತ್ತಿದ್ದುದರಿಂದ ಎರಡನೇ ಬಾರಿಯೂ ಚುನಾವಣೆಯಲ್ಲಿ ಭರ್ಜರಿ ಅಂತರದ ಗೆಲುವು ಸಾಧಿಸಿದ್ದರು .
ಇಡೀ ದಿನ ತಮ್ಮ ಪಟಾಲಮ್ಮಿನೊಂದಿಗೆ ನಷ್ಟದ ಅಂದಾಜು ಮಾಡಿದ ಶಾಸಕರು ಜನರಿಗೆ ಭರವಸೆ ನೀಡಿ ತಮ್ಮ ಕಾರನ್ನೇರಿದರು.
ಭಾರೀ ನಷ್ಟ ಸಂಭವಿಸಿದ್ದರಿಂದ ತಮ್ಮ ಕ್ಷೇತ್ರಕ್ಕೆ ಪೂರ್ತಿ ಎರಡು ಕೋಟಿ ರೂಗಳು ಬೇಕೆಂದು ವಿವರಣೆ ಬರೆದ ಶಾಸಕರು ಮರುದಿನವೇ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರ ಪ್ರಕಟಿಸಿದರು . ಮರುದಿವಸ ನಿರೀಕ್ಷೆಯಂತೆ ಹಣವೂ ಬಂತು .
ಸೋಮವಾರ ಪರಿಹಾರ ವಿತರಣಾ ಕಾರ್ಯಕ್ರಮ .
ರವಿವಾರ ರಾತ್ರಿ ಎರಡು ಘಂಟೆಯ ಸಮಯ ....
ಶಾಸಕರ ಆಪ್ತ ಸಹಾಯಕ ಕೇಶವ ಸುವರ್ಣರ ಮೊಬೈಲ್ ಒಂದೇ ಸಮನೆ ಮೊಳಗಿದಾಗ ನಿದ್ದೆಗಣ್ಣಲ್ಲೂ ಫೋನ್ ಎತ್ತಿದಾಗ
ಆ ಕಡೆಯಿಂದ ಶಾಸಕರು " ಕೇಶವ ನಾಳೆ ಕೊಡುವ ಪರಿಹಾರದಲ್ಲಿ "ನಮ್ಮ " ಖಾತೆಗೆ ಬರಬೇಕಾದ್ದು ಬಂದಿದೆ ತಾನೆ ??"
ಕೇಶವ : ಹೌದು ಸಾರ್
ಸಂಜೆಯೇ ಎಲ್ಲ ವ್ಯವಸ್ಥೆ ಮಾಡಿ ಬಂದಿದ್ದೇನೆ .
ನೂರುಲ್ ದರ್ಗಾದ ಹಾಜಿಯವರ ಮನೆಗೆ ಬರ್ತದೆ .!!
***

2 comments:

ಹರೀಶ ಮಾಂಬಾಡಿ said...

chennagide...

Shrikara K said...

Good.
make a small correction.
Make "kuTumbagalLu neerupaalaagitthu" as "kuTumbagaLu neerupaalaagiddavu."