Saturday, August 9, 2008

ಚಿಕನ್ ಗೂನ್ಯ ......

ಇಡೀ ದಿನ ಗೊಬ್ಬರ ಹೊತ್ತು ಕೆಳಗಿನ ತೋಟಕ್ಕೆ ಸಾಗಿಸಿ ಸಂಜೆ ಬಂದು ಕೈಕಾಲು ತೊಳೆಯುವಾಗ ಕಾಲಿನ ಗಂಟು ನೋಯಲು ಸುರು . ಗೊಬ್ಬರ ಹೊತ್ತು ಅದೂ ಕೆಳಗಿನ ತೋಟಕ್ಕೆ ಹಾಕಿದ್ದಲ್ಲವೇ ? ಹಾಗೆ ಸ್ವಲ್ಪ ನೋವು ಅಂತ ಉದಾಸೀನ ಮಾಡಿ ಬಂದು ಕುಳಿತು ಚಾ ಕುಡಿಯುತ್ತ " ವಿಜಯ ಕರ್ನಾಟಕದಲ್ಲಿ" ಬಾಂಬ್ ಸ್ಪೋಟ ಪ್ರಕರಣ ಇವತ್ತೇನಾಯಿತು? ಅಂತ ನೋಡುತ್ತಾ ಕುಳಿತೆ.
ರಾತ್ರಿ ಊಟ ಮಾಡಿ ಮಲಗುವಾಗ ಏಕೋ ಮೈ ಎಲ್ಲ ಬಿಸಿ ಏರಿ ಜ್ವರ ಬಂದು ಬಿಟ್ಟಿತು ಜೊತೆಗೆ ಅಸಾಧ್ಯ ಗಂಟು ನೋವು .ಮರುದಿನ ಬೆಳಗ್ಗೆ ಹಾಸಿಗೆ ಬಿಟ್ಟು ಮೇಲೆ ಏಳಲೂ ಆಗದಷ್ಟು ಜ್ವರ.
"ಅಯ್ಯೋ ಗ್ರಹಚಾರವೇ " ಅಂತ ನೋವನ್ನು ಅನುಭವಿಸುತ್ತಿದ್ದಾಗ ಕೆಳಗಿನ ಮನೆ ಪುಟ್ಟಣ್ಣ ಬಂದು ಬಿಟ್ಟರು .
" ಪುಟ್ಟಣ್ಣ ಎನಗೂ ಚಿಕನ್ ಗೂನ್ಯ ಹಿಡುದತ್ತು ಮಾರಾಯ " ಅನ್ನುವಾಗಲೇ ಪುಟ್ಟಣ್ಣ "ಅನು ಈಗ ಅಸ್ಪತ್ರೆಂದಲೇ ಬತ್ತಾ ಇಪ್ಪದು " ಹೇಳುತ್ತಾ ಕೆಲವು ಮಾತ್ರೆಗಳನ್ನು ನನಗೂ ಕೊಟ್ಟು ಉಪಕಾರ ಮಾಡಿದರು.
ಹೇಗೋ ಸಾವರಿಸಿಕೊಂಡು ಮಧ್ಯಾಹ್ನ ೩ ಗಂಟೆಗೆ ನಮ್ಮ ಸರಕಾರೀ ಆಸ್ಪತ್ರೆ ಬಳಿ ಬಂದರೆ ಮಾರುದ್ದದ ಕ್ಯೂ . ಎಲ್ಲರ ಮನೆಯಲ್ಲೂ ಇದೇ ಅವಸ್ಥೆ .ಮೊದಲೇ ಸರಕಾರಿ ಆಸ್ಪತ್ರೆ ಅಂದರೆ " ಸೇವೆ ಉಚಿತ ಸಾವು ಖಚಿತ " ಅಂತ ಗೊತ್ತಿದ್ದರೂ ಅಲ್ಲಿಗೆ ಹೋಗದೆ ಬೇರೆ ದಾರಿ ಇಲ್ಲ . ಆದಿತ್ಯವಾರ ಉಳಿದ ಮೂರು ಮಂದಿ ಖಾಸಗಿ ವೈದ್ಯರಿಗೂ ರಜೆ . ಹಾಗೆಂದು ರಜೆಯ ದಿವಸ ಜ್ವರ ಬರಬೇಡ ಅಂತ ಹೇಳಲಾಗುತ್ತದೆಯೇ ?ಅಂತೂ ನನ್ನ ಸರದಿ ಬಂದಾಗ ೫ ಗಂಟೆ .
ಮಾತ್ರೆಗಳನ್ನು ಪಡೆದು ರಿಕ್ಷಾ ಹತ್ತಿ ಮನೆಗೆ ಬಂದು ಕುಳಿತಾಗ "ಮದ್ದು ಬಿಡ್ಲೆ ಪಂಪು ಕೊಂಡು ಹೊಪೋ ಹೇಳಿ ಇತ್ತೆ ಬಂದೆ " ಎನ್ನುತ್ತಾ ಪುಟ್ಟಣ್ಣ ಒಳಗೆ ಬಂದರು.
"ಮದ್ದು ನೀರಿಂಗೆ ಹಾಕಿದ್ದಾ? " ಅಣ್ಣ ಕೇಳಿದ .
"ಅಪ್ಪು"
"ಹಾಂಗಾರೆ ಇನ್ನು ಒಂದು ವಾರಕ್ಕೆ ಅದರ ಬಿಟ್ಟಕ್ಕು ಹೇಳಿ ಆಶೆ ಬಿಡು " ಹೇಳಿದ ಅಣ್ಣ .
ನೋಡಿದರೆ ಮದ್ದು ಬಿಡುವ ಸಂಜೀವನಿಗೂ "ಚಿಕನ್ ಗೂನ್ಯ "!
ಒಟ್ಟಿನಲ್ಲಿ ಈ ಮಹಾಮಾರಿಯಿಂದಾಗಿ ಬೆಳೆ ಬೆಳೆಯಲಿಲ್ಲ , ತೋಟಕ್ಕೆ ಮದ್ದು ಬಿಡದೆ ಇದ್ದ ಫಸಲೂ ರೋಗಕ್ಕೆ ತುತ್ತಾಗಿ ಮರದ ಬುಡದಲ್ಲಿ ಬಿದ್ದದ್ದನ್ನು ನೋಡುವಾಗ ಮುಂದೆ ಏನು ? ತೋಚುವುದಿಲ್ಲ .
ಈಗಾಗಲೇ ಅಕ್ಕಿಗೆ ಕೆ.ಜಿ.ಗೆ ೧೪ ರೂಪಾಯಿ ಇದ್ದದ್ದು ೧೯ಕ್ಕೆ ಏರಿದೆ . ಉಳಿದೆಲ್ಲ ದಿನಸಿಗಳಿಗೆ ಕನಿಷ್ಠ ೨೦ ರಿಂದ ೨೫% ಬೆಲೆ ಏರಿಕೆಯಾಗಿದೆ .ದುಡಿಯಲು ಚೈತನ್ಯವಿಲ್ಲ ತಿನ್ನಲು ಅನ್ನವಿಲ್ಲ ಬಹುಶ ಪ್ರಳಯ ಅಂದರೆ ಇದೇ ಇರಬೇಕೇನೋ?
ಎಲ್ಲ ಕಡೆಯೂ ಒಂದಲ್ಲ ಒಂದು ಕಾರಣಕ್ಕೆ ಜನರು ಪ್ರಾಣ ಬಿಡುತ್ತಲೇ ಇದ್ದಾರೆ.
ಇದೇ ರೀತಿ ಮುಂದುವರಿದರೆ ಮುಂದೊಂದು ದಿನ "ಅನ್ನಕ್ಕಾಗಿ" ಹೋರಾಟ ನಡೆಯುವುದು ಖಂಡಿತ .
ಆ ದಿನ ಬಹಳ ದೂರವಿಲ್ಲ ಅಂತ ಮನಸ್ಸು ಸಾರಿ ಹೇಳುತ್ತಿದೆ .
ನಿಮಗೇನನಿಸುತ್ತದೆ ?

No comments: