Saturday, May 29, 2010

ಯಕ್ಷಲೋಕದ ಮಹಾಪ್ರಸಂಗ "ಐದು ದಿನದ ಶ್ರೀದೇವಿ ಮಹಾತ್ಮೆ "




ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನವು ಹಲವಾರು ಕವಿಗಳ ವಿಶಿಷ್ಟ ಪ್ರಸಂಗ ರಚನೆಗಳಿಂದ ಸಮೃದ್ಧವಾಗಿದೆ .ಯಕ್ಷಗಾನ ಸಾಹಿತ್ಯವು ಕನ್ನಡ ಸಾರಸ್ವತ ಲೋಕದ ಒಂದು ವಿಶಿಷ್ಟ ಕಾವ್ಯ ಪ್ರಕಾರ. ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಸರಿಯಾದ ಯಕ್ಷಗಾನ ಪ್ರಸಂಗ ರಚನೆ ಮಾಡಬೇಕಾದರೆ ವ್ಯಾಕರಣ ಛ೦ದಸ್ಸುಗಳ ಆಳವಾದ ಜ್ಞಾನ ಹಾಗೂ ರಂಗ ಪ್ರಯೋಗದ ಅಪಾರವಾದ ಅನುಭವಗಳು ಇದ್ದರೆಮಾತ್ರ ಸಾಧ್ಯ. ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನಿಂದ ಹಿಡಿದು ಇಂದಿನವರೆಗೆ ಹಲವಾರು ಪ್ರಸಂಗಕರ್ತರು ಪುರಾಣ , ಚಾರಿತ್ರಿಕ, ಸಾಮಾಜಿಕ ಹಾಗೂ ಕಾಲ್ಪನಿಕ ಕಥೆಗಳನ್ನು ಆಧರಿಸಿ ಪ್ರಸಂಗ ರಚನೆಯನ್ನು ಮಾಡುತ್ತಾ ಬಂದಿದ್ದಾರೆ .

ತೆಂಕುತಿಟ್ಟು ಯಕ್ಷಗಾನವನ್ನು ಪರಿಷ್ಕರಿಸಿ ಪುನರುಜ್ಜೀವನ ನೀಡಿದ ಶಕಪುರುಷ ಹಿರಿಯ ಬಲಿಪ ನಾರಾಯಣ ಭಾಗವತರುಎಂಬುದು ಯಕ್ಷಪ್ರಿಯರೆಲ್ಲರೂ ತಿಳಿದಿರುವ ವಿಚಾರ . ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದವರು ಈಗಿನ ಕಿರಿಯ ಶ್ರೀಬಲಿಪ ನಾರಾಯಣ ಭಾಗವತರು. ಯಕ್ಷಗಾನ ಕಲಾಲೋಕವನ್ನು ತಮ್ಮ ಕಲಾಸೇವೆಯಿಂದ ಸಮೃದ್ದಗೊಳಿಸಿದ ಬಲಿಪರು ಮೂವತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ರಚಿಸಿ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ವಿದ್ವಜ್ಜನರ ಮನ್ನಣೆಗೆ ಪಾತ್ರರಾದವರು. ಶ್ರೀಬಲಿಪರು ಹಿಂದಿನ ಯಾವ ಯಕ್ಷಕವಿಗಳೂ ಮಾಡದೆ ಇರುವ ಸಾಹಸವನ್ನು ಐದು ದಿನದ ಶ್ರೀದೇವಿ ಮಹಾತ್ಮೆ ಪ್ರಸಂಗವನ್ನು ರಚಿಸುವ ಮೂಲಕ ಮಾಡಿ ಯಕ್ಷಲೋಕದಲ್ಲೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ . ಐದು ರಾತ್ರಿಗಳಿಗಾಗುವ ಕಥೆಯನ್ನು ಶ್ರೀದೇವಿ ಭಾಗವತದಿಂದ ಆಯ್ದು ಮಹಾಪ್ರಸಂಗವನ್ನು ರಚಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ .


ಪ್ರಸ್ತುತ ಯಕ್ಷಗಾನ ರಂಗದಲ್ಲಿ ಶ್ರೀದೇವಿ ಮಹಾತ್ಮೆಯ ಎರಡು ಪ್ರಸಂಗ ಕೃತಿಗಳು ಚಾಲ್ತಿಯಲ್ಲಿವೆ . ಅವುಗಳಲ್ಲಿ ಹಿರಿಯ ಬಲಿಪನಾರಾಯಣ ಭಾಗವತರು ರಚಿಸಿದ ಕೃತಿಯನ್ನು "ಬಲಿಪ ಪ್ರತಿ" ಎಂದೂ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಕೃತಿಯನ್ನು"ಅಗರಿ ಪ್ರತಿ"ಯೆಂದೂ ಪ್ರಸಿದ್ದಿ ಪಡೆದಿವೆ . ಅಗರಿಯವರು ಬರೆದ ಪ್ರಸಂಗವು ಗೇಯಗುಣ ಸಂಪನ್ನವೂ ಅತ್ಯಂತ ಸರಳವೂ ಆಗಿರುವ ಕಾರಣ ಬಹುತೇಕ ಎಲ್ಲ ಕಲಾವಿದರೂ ಪ್ರತಿಯನ್ನು ಅನುಸರಿಸುತ್ತಿದ್ದು ಅದರಲ್ಲಿನ ಪದ್ಯಗಳು ಪ್ರೇಕ್ಷಕರಿಗೂ ಬಾಯಿಪಾಠಬರುವಷ್ಟು ಪ್ರಖ್ಯಾತವಾಗಿದೆ. ( ಜಯತು ಜಯತು ಆದಿ ಮಾಯೆ ...., ಏಳಿರೇಳಿರಿ ಹರಿ ಹರಾದ್ಯರು , ವೀಣೆಯ ಪಿಡಿದಿರ್ಪ ವಾಣಿಯೀ ಪರಿಯಿಂದ , ದನುಜೇಶ ಕೇಳೆನ್ನ ಮಾತಾ , ಚಂಡ ಮುಂಡರ ಶಿರವ ಚೆಂಡನಾಡಿದ ವಾರ್ತೆ ... ಮುಂತಾದ ಪದ್ಯಗಳು ಅಗರಿಪ್ರತಿಯವು )
ಹಿರಿಯ ಬಲಿಪರ ಪ್ರತಿಯು ಕ್ಲಿಷ್ಟಕರ ಪದ್ಯಗಳನ್ನು ಒಳಗೊಂಡರೂ ಗೇಯಗುಣ ಸಂಪನ್ನವಾಗಿದ್ದು ಕಟೀಲು ಮೇಳದ ಎರಡನೇತಂಡದಲ್ಲಿ ( ಬಲಿಪರ ಮೇಳ ) ಇತ್ತೀಚಿನ ಕೆಲವು ವರ್ಷಗಳ ಹಿಂದೆಯವರೆಗೂ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನವಾಗುತ್ತಿತ್ತು . (ಸಿಕ್ಕಿದಿರೆನ್ನಯ ಕೈಗೆ .... , ಓರ್ವನೇ ಮಲಗಿರಲು , ತೂಗಿದಳುಯ್ಯಲೆಯ , ಕಂಡನಾಗ ಚೆಲುವೆಯ .., ನಿದ್ದೆಯಲಿ ಮೈಮರೆತ ದಾನವ ..., ಏನೆಂಬೆ ದೈವಗತಿ ಮಾನಿನಿಯ ದೆಸೆಯಿಂದ ... ಮುಂತಾದ ಪದ್ಯಗಳು ಬಲಿಪ ಪ್ರತಿಯವು.) ಯುವ ಭಾಗವತರೊಬ್ಬರು ಬಲಿಪರ ಹಿರಿತನವನ್ನು ಧಿಕ್ಕರಿಸಿ ಕಟೀಲಿನ ಎರಡನೇ ಮೇಳದ ಪ್ರಧಾನ ಭಾಗವತರಾದ ಮೇಲೆ ಬಲಿಪ ಪ್ರತಿಯನ್ನು ರಂಗದಿಂದ ನಿವೃತ್ತಿಗೊಳಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಷಾದನೀಯ ಹಾಗೂ ಹೇಯಕರ. ಮೇಲೆ ಹೇಳಿದಎರಡೂ ಪ್ರತಿಗಳು ಒಂದು ರಾತ್ರೆಯಲ್ಲಿ ಆಡಿ ಮುಗಿಸಬಹುದಾದ ರಚನೆಗಳು.



ಹಿಂದೆ ನಮ್ಮ ಪೂರ್ವಿಕರು ದೇವಿ ಮಹಾತ್ಮೆಯನ್ನು ಮೂರು ದಿನ , ಐದು ದಿನ , ಏಳುದಿನ , ಒಂಭತ್ತು ದಿನ ಹೀಗೆಲ್ಲ ವಿಭಾಗಿಸಿ ಆಡುತ್ತಿದ್ದರಂತೆ . ಆದರೆ ಇದಕ್ಕೆ ಬೇಕಾಗುವ ಪ್ರಸಂಗ ಪದ್ಯಗಳನ್ನು ಆಶು ಕವಿಗಳಾದ ಅವರು ರಂಗದಲ್ಲೇ ರಚಿಸಿ ಆಡಿಸುತ್ತಿದ್ದು ಈಗ ಪದ್ಯಗಳು ಲಭ್ಯವಿಲ್ಲ . ನಮಗೆ ಹಿರಿಯರಿಂದ ತಿಳಿಯುವಂತೆ ಅಗರಿ ಭಾಗವತರು ,ಅಜ್ಜ ಬಲಿಪರು ಇಂಥ ಸಾಹಸ ಮಾಡಿದ್ದುತಿಳಿದು ಬರುತ್ತದೆ.



ಪ್ರಸ್ತುತ ಬಲಿಪರು ಬರೆದ ಮಹಾಪ್ರಸಂಗದಲ್ಲಿ ಶ್ರೀದೇವಿ ಭಾಗವತದ ಕಥೆಯನ್ನು ಆಧರಿಸಿ ಶ್ರೀ ಬಲಿಪರು ಐದು ಕಥಾನಕಗಳಾಗಿ ವಿಂಗಡಿಸಿ ಮೊದಲನೇ ದಿನ ಸುರಥ ವೈಶ್ಯರ ಕಥೆ , ಎರಡನೇ ದಿನ ಮಧುಕೈಟಭರ ವಧೆ - ಶಂಖ ದುರ್ಗರಪರಾಭವ , ಮೂರನೇ ದಿನ ರಂಭ-ಕರಂಭರ ವಧೆ , ನಾಲ್ಕನೆ ದಿನ ಮಹಿಷ ವಧೆ ಹಾಗೂ ಐದನೇ ದಿನ ಶುಂಭ -ನಿಶುಂಭರವಧೆಗಳೆಂಬ ಪ್ರಸಂಗ ಪದ್ಯಗಳನ್ನು ರಚಿಸಿದ್ದಾರೆ . ಓದುಗರಿಗೆ ಹಾಗೂ ಕಲಾವಿದರಿಗೆ ಅನುಕೂಲವಾಗಲೆಂದು ಪ್ರತಿ ಪ್ರಸಂಗದ ಆರಂಭದಲ್ಲಿ ಕಥಾ ಸಾರಾಂಶವನ್ನು ನೀಡಿದ್ದು ಪೂರ್ಣ ಕಥೆಯ ಅರಿವು ಕಲಾವಿದರಿಗೆ ಉಂಟಾಗಲು ಸಹಕಾರಿಯಾಗಿದೆ . ತಮ್ಮ ದೀರ್ಘ ಕಾಲದ ರಂಗಾನುಭಾವದಿಂದ ಪ್ರಸಂಗ ರಚಿಸಿದ ಕಾರಣ ಬಹುತೇಕ ಎಲ್ಲ ರಾಗಗಳ , ಎಲ್ಲ ತಾಳಗಳ ಪದ್ಯಗಳನ್ನು ಸಮಯೋಚಿತವಾಗಿ ಹದವರಿತು ಬಳಸಿರುವುದರಿಂದ ರಂಗ ಪ್ರಯೋಗದಲ್ಲಿ ಆಟವು ಕಳೆಗಟ್ಟಲು ಅನುಕೂಲವಾಗಿದೆ.
ಇಡೀ ಪ್ರಸಂಗವನ್ನು ಬರೆಯಲು ಶ್ರೀಬಲಿಪರು ಆರು ತಿಂಗಳಿಗೂ ಮಿಕ್ಕಿ ಸಮಯವನ್ನು ವಿನಿಯೋಗಿಸಿದ್ದು , ಹಸ್ತ ಪ್ರತಿಯ ಕರಡು ತಿದ್ದುವಿಕೆಯನ್ನು ಹಾಗೂ ಶುದ್ಧ ಪ್ರತಿಯನ್ನು ಬರೆದು ಕೊಟ್ಟವರು ಮಂಗಳೂರಿನ ಶ್ರೀ ಎಸ್.ನಾರಾಯಣರು . ಶ್ರೀಯುತರುಹಿರಿಯ ಬಲಿಪರ ಪ್ರಸಂಗ ಸಂಪುಟ ಮುದ್ರಿತವಾಗುವ ಸಮಯದಲ್ಲೂ ಅಂದವಾದ ಹಸ್ತ ಪ್ರತಿಯನ್ನು ಮಾಡಿ ಕೊಟ್ಟಿರುವುದು ಅವರಬಲಿಪರ ಮೇಲಿನ ಅಭಿಮಾನಕ್ಕೆ ಸಾಕ್ಷಿ .


ಊರಿಗೆ ತೆರಳಿದ್ದಾಗಲೆಲ್ಲ ಹಿರಿಯರಾದ
ಬಲಿಪರನ್ನು ಮಾತಾಡಿಸಿಕೊಂಡು ಬರುವುದು ನನ್ನ ಕ್ರಮ . ನಮ್ಮ ಮನೆಯಿಂದ ಬಲಿಪರಲ್ಲಿಗೆ ಮೈಲಿ ದೂರ . ನಮ್ಮ ತಂದೆಯವರಾದ ಎನ್ .ಎಚ್. ರಾಮಕೃಷ್ಣ ಭಟ್ಟರು ಬಲಿಪರ ಕಟ್ಟಾ ಅಭಿಮಾನಿಗಳಲ್ಲಿ ಒಬ್ಬರು. ಒಂದು ದಿನ ಅವರಲ್ಲಿ ಹೋಗಿದ್ದಾಗ ಐದು ದಿನದ ಪ್ರಸಂಗ ಬರೆಯುತ್ತಿರುವ ಬಗ್ಗೆ ಪ್ರಸ್ತಾವಿಸಿದರು . "ಈ ಪ್ರಸಂಗವನ್ನು ನೀವು ಪ್ರಿಂಟ್ ಮಾಡಿಸಿ , ನಿಮ್ಮ ಮನೆಯಲ್ಲೇ ನಿಮ್ಮ ತಂದೆಯವರ ಸಂಸ್ಮರಣೆ ದಿವಸ ಬಿಡುಗಡೆ ಮಾಡುವ " ಎಂದು ಬಲಿಪರು ಹೇಳಿದಾಗ ನಗೆ ಪರಮಾನಂದವಾಯಿತು. ಚಿಕ್ಕಂದಿನಿಂದ ಬಲಿಪರ ಹಾಡುಗಾರಿಕೆಯ ಸೆಳೆತಕ್ಕೆ ಒಳಗಾದವರಲ್ಲಿ ನಾನೊಬ್ಬನಾದುದರಿಂದ ಬಲಿಪರ ಜೀವಮಾನದ ಸಾಧನೆಯನ್ನು ಶಾಶ್ವತವಾಗಿ ದಾಖಲೀಕರಿಸಿ ಇಡುವ ಗುರುತರ ಜವಾಬ್ದಾರಿಯನ್ನು ಹಿರಿಯರಾದ ಬಲಿಪರು ಸದುದ್ದೆಶಪೂರ್ವಕವಾಗಿ ನೀಡಿದಾಗ ಹಿಂದೆ ಮುಂದೆ ಯೋಚಿಸದೆ ಮುದ್ರಣಕಾರ್ಯಪ್ರವೃತ್ತನಾದೆ. ಸರಿ ಸುಮಾರು ಒಂದು ವರುಷಗಳ ಕಾಲ ಸಮಯ ಸಿಕ್ಕಾಗಲೆಲ್ಲ ಮಹಾಪ್ರಸಂಗವನ್ನು ಗಣಕೀಕರಿಸಿಒಂದೊಂದು ಕಥಾನಕ ಮುಗಿದಂತೆ ಪ್ರಿಂಟ್ ತೆಗೆದು ಕರಡು ತಿದ್ದಲು ಬಲಿಪರಲ್ಲಿಗೆ ಕಳುಹಿಸುತ್ತಾ ಬಂದೆ. ಬಲಿಪರು ಅತ್ಯಂತ ಶ್ರದ್ಧೆಯಿಂದ ಅದನ್ನು ತಿದ್ದುಪಡಿ ಮಾಡಿ ತಮ್ಮಲ್ಲಿ ಇರಿಸಿಕೊಂಡಿದ್ದು ನಾನು ಮನೆಗೆ ತೆರಳಿದ್ದಾಗ ಮರಳಿ ಅದನ್ನು ಸಂಗ್ರಹಿಸಿ ತಂದು ಪುನರ್ ತಿದ್ದುಪಡಿ ಮಾಡಿ ಇಟ್ಟುಕೊಂಡೆ . ಇಡೀ ಪ್ರಸಂಗ ಗಣಕೀಕರಿಸಿದಾಗ ಸುಮಾರು ೨೪೫ ಪುಟಗಳು ತುಂಬಿದವು . ಈ ಮಧ್ಯೆ ಶ್ರೀಬಲಿಪರ ಬಳಿ ಪ್ರಸಂಗಕ್ಕೊಂದು "ಮುನ್ನುಡಿ" ಆಗಬೇಕು ಎಂದಾಗ ಯಕ್ಷಗಾನ ಕಲಾವಿದ , ಸಂಶೋಧಕ ವಿಮರ್ಶಕರಾದ ಡಾ.ಪ್ರಭಾಕರ ಜೋಷಿ ಯವರು ಬರೆದು ಕೊಡುತ್ತಾರೆ ಎಂದು ತಿಳಿಸಿದರು. ಅಂತೆಯೇ ಮುನ್ನುಡಿ ತಯಾರಾಗಿ ನನ್ನ ಕೈಸೇರಿ ಅದೂ ಗಣಕ ಯಂತ್ರದೊಳಗೆ ಸೇರಿತು.
ಎಲ್ಲ ತಿದ್ದುಪಡಿ ಆದ ಮೇಲೆ ಮುದ್ರಣಕ್ಕಾಗಿ ಮುದ್ರಣಾಲಯವನ್ನು ಸಂಪರ್ಕಿಸಿದಾಗ ಮುದ್ರಣ ಖರ್ಚು ಬೃಹತ್ ಮೊತ್ತವಾಗುವ ಬಗ್ಗೆ ಪೂರ್ವಸೂಚನೆ ದೊರೆಯಿತು . ಅಲ್ಲಿಗೆ ಕಡಿಮೆ ಆದಾಯದ ವೃತ್ತಿ ಪಂಗಡಕ್ಕೆ ಸೇರಿದ ನಾನು ಶ್ರೀಬಲಿಪರ ಈ ಜೀವಮಾನದ ಸಾಧನೆಯ ಕೃತಿ ಬಿಡುಗಡೆಯ ಕನಸನ್ನು ಕೈಗೂಡಿಸಬಲ್ಲೆನೆ ? ಎಂಬ ಸಂಶಯ ಮನದಲ್ಲಿ ಮನೆ ಮಾಡಿತು. ಆತ್ಮಾಭಿಮಾನ ಹಿಂದೇಟು ಹಾಕಿದರೂ ನೇರವಾಗಿ ಆತ್ಮೀಯ ಮಿತ್ರರಾದ ಚೆಮ್ಬಾರ್ಪು ಭಾವನಲ್ಲೂ , ನಮಗೆಲ್ಲ ಅನುಭವದಲ್ಲಿ ಹಿರಿಯಣ್ಣನಂತಿರುವ ಪೈವಳಿಕೆ ರಾಜಣ್ಣನವರಲ್ಲಿ ಹಾಗೂ ಅಶೋಕಣ್ಣನವರಲ್ಲಿ ಬಲಿಪರ ಮಹಾಪ್ರಸಂಗದ ಮುದ್ರಣ ಕುರಿತು ವಿಚಾರ ವಿನಿಮಯ ಮಾಡಿದಾಗ ಮಿತ್ರರೆಲ್ಲರೂ ಸೇರಿ ಮುದ್ರಣಕ್ಕೆ ಸಹಕಾರ ನೀಡುವುದೆಂಬ ನಿರ್ಣಯಕ್ಕೆ ಬರಲಾಯಿತು . ಅಂತೆಯೇ ನನ್ನ ಇತರ ಮಿತ್ರರಿಗೂ ವಿಚಾರ ತಿಳಿಸಿದಾಗ ಒಬ್ಬರು " ನಿನಗೆ ಮರುಳಲ್ಲದ ? ಆಟ ನೋಡಲೇ ಜನ ಈಗ ಹೊವ್ತವಿಲ್ಲೇ . ಇನ್ನು ನಿನ್ನ ಪ್ರಸಂಗ ಪುಸ್ತಕ ಆರು ತೆಕ್ಕೊಳ್ತವು ? " ಎಂದು ನೇರವಾಗಿ ಮುಖಕ್ಕೆ ಮಂಗಳಾರತಿ ಮಾಡಿ ಬಿಟ್ಟರು. ಅವರವರ ಅಭಿಪ್ರಾಯ ಅವರವರಿಗೆ ಎಂದು ಮರುಮಾತನಾಡದೆ ಉಳಿದ ಮಿತ್ರರೆಲ್ಲರಲ್ಲಿ ವಿಚಾರ ತಿಳಿಸಿದಾಗ ಸ್ವಯಂಸ್ಪೂರ್ತಿಯಿಂದ ಎಲ್ಲರೂ ಯಥಾಸಾಧ್ಯ ಸಹಕರಿಸಿ ವಾರದೊಳಗಾಗಿ ಮುದ್ರಣ ವೆಚ್ಚ ನನ್ನ ಉಳಿತಾಯ ಖಾತೆಗೆ ಜಮೆಯಾಯಿತು.

ಏನಿದ್ದರೂ ಒಳ್ಳೆಯ ಕೆಲಸಕ್ಕೆ ಹೊರಟಾಗ ಎಲ್ಲರ ಸಹಕಾರ ಸಹಾಯವಿದ್ದೇ ಇರುತ್ತದೆ ಎಂಬುದು ದೃಢವಾಯಿತು .
ಈ ಮಧ್ಯೆ ಸೆಮೆಸ್ಟರ್ ಕೆಲಸದ ಒತ್ತಡ ಹೆಚ್ಚಾಗಿ ಸುಮಾರು ಒಂದು ತಿಂಗಳು ಪ್ರಸಂಗವು ಗಣಕಯಂತ್ರದೊಳಗೆ ಬೆಚ್ಚಗೆ ಮಲಗಿತು .
ಮತ್ತೆ ಎಚ್ಚೆತ್ತು ಮುದ್ರಣಾಲಯಕ್ಕೆ ಹೋಗಿ ದರ ಪರಿಶೀಲನೆ ಹಾಗೂ ವ್ಯವಹಾರ ಕುದುರಿಸುವ ಕೆಲಸಕ್ಕೆ ವಾರಗಳ ಕಾಲ ಸಂದಿತು .
ಈ ಮಧ್ಯೆ ಬಲಿಪರು "ಇದು ದಾಸ್ತಾನಿಗೆ ಇರುವ ಪುಸ್ತಕ . ಆದ ಕಾರಣ ಪುಸ್ತಕ ಸ್ವಲ್ಪ ಚಂದ ಮಾಡಿ ಆಯ್ತಾ ? " ಎಂದು ಹೇಳಿದರು. ಮರಳಿ ತುಮಕೂರಿಗೆ ಬಂದ ನಾನು ಮುಖಪುಟ ವಿನ್ಯಾಸದ ಬಗ್ಗೆ ಚಿಂತಿಸತೊಡಗಿದೆ.

ಮುಖ ಪುಟ ವರ್ಣರಂಜಿತವಾಗಿ ಮಾಡಬೇಕೆಂಬ ಕಲ್ಪನೆಯಿಂದ ದೇವಿ ಮಹಾತ್ಮೆಯ ಫೋಟೋಗಳಿಗಾಗಿ ಹುಡುಕಾಟ ನಡೆಸಿದೆ . ಸಾಮಾನ್ಯವಾಗಿ ಎಲ್ಲ ಆಟಗಳಿಗೆ ಹಾಜರಾತಿ ಹಾಕುವ ನನ್ನ ಮಿತ್ರರಾದ ಉಲ್ಲಾಸ , ಲಕ್ಷ್ಮಿನಾರಾಯಣ ( ಲ. ನ .) ಹಾಗೂ ಪಡೀಲು ಶಿವಣ್ಣ ನಲ್ಲಿ ಫೋಟೋಗಳಿಗೆ ಬೇಡಿಕೆ ಇಟ್ಟಾಗ ಅವರು ತಮ್ಮ ತಮ್ಮ ಬತ್ತಳಿಕೆಯಲ್ಲಿದ್ದ ಫೋಟೋಗಳನ್ನು ಮಿಂಚಂಚೆ ಮೂಲಕ ಕಳುಹಿಸಿ ಕೊಟ್ಟರು . ಶಿವಣ್ಣ ಮಂಗಳೂರಿನಲ್ಲಿ ತೆಗೆದ ಶ್ರೀದೇವಿ ಫೋಟೋ ಒಮ್ಮತದಿಂದ ಮುಖ ಪುಟಕ್ಕೆ ಆಯ್ಕೆಯಾಯಿತು . ಇನ್ನು ನಮಗೆ ಹಿಂದಿನ ರಕ್ಷಾಪುಟಕ್ಕೆ ಮಹಿಷಾಸುರನ ಅಗತ್ಯವಿತ್ತು . ಯಾರಲ್ಲೂ ಸರಿಯಾದ ಮಹಿಷಾಸುರ ಸಿಗದಿದ್ದಾಗ ಮಿತ್ರ ಉಲ್ಲಾಸ ಮದ್ಯರಾತ್ರಿ ಮಂಗಳೂರಿನ ಡಾ . ಮನೋಹರ ಉಪಾಧ್ಯಾಯರಿಂದ ಮಹಿಷಾಸುರನನ್ನು ಸಂಗ್ರಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ. ಆ ರಾತ್ರಿಯೇ " ದೇವಿಯ ಕೃಪೆ ಏನೆಂದು ಜೀ ಮೇಲ್ ನೋಡಿದವರಿಗೆ ತಿಳಿಯುತ್ತದೆ " ಎಂಬ ಸಂದೇಶ ನನ್ನ ಚರವಾಣಿಗೆ ೨.೧೯ ನಿಮಿಷಕ್ಕೆ ಬಂದಾಗ ಮಹಿಷಾಸುರ ಬಂದೇ ಬಿಟ್ಟ ಎಂಬಷ್ಟು ನೆಮ್ಮದಿಯಾಯಿತು. ಡಾ. ಜೋಷಿಯವರು ಬರೆದ ಮುನ್ನುಡಿಯ ತುಣುಕನ್ನು ಬಲಿಪರ ಭಾವಚಿತ್ರ ಸಮೇತ ಹಿಂದಿನ ರಕ್ಷಾಪುಟಕ್ಕೆ ಹಾಗೂ ಮಹಿಷಾಸುರ ಕೆಳಭಾಗಕ್ಕೆ ಹಾಗೂ ಮುಖಪುಟಕ್ಕೆ ಶ್ರೀದೇವಿ ಫೋಟೋ ಎಂದು ಅಂತಿಮಗೊಳಿಸಿ ಪುಟ ವಿನ್ಯಾಸಕಾರ ಶ್ರೀಯುತ ದಿನಕರ್ ರವರ ಬಳಿಗೆ ನಡೆದೆ. ನಿರ್ದೇಶಕರ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತಾವು ತೊಡಗಿದ್ದರೂ ಸಂಜೆಯ ಸಮಯ ಬಿಸಿ ಬಿಸಿ ಚಹಾ ಕುಡಿದು " ನೋಡುವ ಬನ್ನಿ ಭಟ್ರೇ " ಎಂದು ತಮ್ಮ ಬಳಿ ಕೂರಿಸಿ ನಾಲ್ಕು ವೈವಿಧ್ಯಮಯ ರಕ್ಷಾಕವಚ ವಿನ್ಯಾಸಗೊಳಿಸಿ ನನ್ನ ಕೈಗಿತ್ತರು .

ನಾಲ್ಕರಲ್ಲಿ ಯಾವುದು ಉತ್ತಮ? ಎಂಬುದು ಮುಂದಿನ ಪ್ರಶ್ನೆಯಾದಾಗ ಕೇಶವಣ್ಣ ಹಾಗೂ ಆಪ್ತ ಮಿತ್ರ ರಮೇಶ ಮೊದಲನೇ ವಿನ್ಯಾಸಕ್ಕೆ ನಾಲ್ಕನೇ ವಿನ್ಯಾಸದ ಬರೆಗಳನ್ನು ಸೇರಿಸಿದರೆ ಒಳ್ಳೆಯದು ಎಂದು ತೀರ್ಮಾನವಿತ್ತರು. ಚೆಮ್ಬಾರ್ಪು ಭಾವ ಹಾಗೂ ರಾಜಣ್ಣ ನೇರಳೆ- ನೀಲಿ ಬಣ್ಣವೇ ಸೂಕ್ತ ಎಂದು ಅಭಿಮತವಿತ್ತರು . ಅಲ್ಲಿಗೆ ಅದೇ ವಿನ್ಯಾಸ ಅಂತಿಮಗೊಳಿಸಲ್ಪಪಟ್ಟಿತು .

ಕೊನೆಗೆ ಮುಖ ಪುಟ ಮುದ್ರಣಕ್ಕೆ ಬೆಂಗಳೂರಿಗೆ ಹೊರಡುವ ಮುನ್ನ ಕೇಶವಣ್ಣನವರಲ್ಲಿ ನ್ಯಾಯ ಬೆಲೆಯ ಮುದ್ರಣಾಲಯ ಹುಡುಕಿಡುವ ಬಗ್ಗೆ ತಿಳಿಸಿದೆ . ಅದಾಗಲೇ ಹನುಮಂತನಗರದಲ್ಲಿ ಇರುವ ಮುದ್ರಣಾಲಯಕ್ಕೆ ಹಾಗೂ ಡಿಜಿಗೋ ಮುದ್ರಣದವರಲ್ಲಿ ಬೆಲೆ ವಿಚಾರಿಸಿ ನಮ್ಮ ಅವಶ್ಯಕತೆಗೆ ಹನುಮಂತನಗರದಲ್ಲಿ ಇರುವ ಮುದ್ರಣಾಲಯ ಸೂಕ್ತವೆಂದು ಕೇಶವಣ್ಣ ನಿರ್ಧರಿಸಿ, ಸೂಚನೆ ಇತ್ತಂತೆ ಅವರನ್ನೊಡಗೂಡಿ ಮುದ್ರಿಸಿ ಊರಿಗೆ ಸಾಗಿಸಿ ಒಳಪುಟಗಳನ್ನು ಮುದ್ರಿಸುವ ತೀರ್ಥಂಕರ ಪ್ರಿಂಟರ್ಸ್ ಮಾಲಿಕ ರಾಜೇಂದ್ರರಿಗೆ ತಲುಪಿಸಿದೆ .ಅವರು ಬೇರೆ ಬೇರೆ ತರಹದ ಪುಸ್ತಕ ಕೆಲಸವನ್ನು ತಮ್ಮ ಮುದ್ರಣಾಲಯದಲ್ಲಿ ಮಾಡುತ್ತಿದ್ದು , ನಮ್ಮದು ದೊಡ್ಡ ಪುಸ್ತಕವೆಂದು ನಿಧಾನಿಸಿದರು . ಪದೇ ಪದೇ ಫೋನಾಯಿಸಿ ಅವರ ಬೆನ್ನು ಹಿಡಿದು ಕೆಲಸ ಮಾಡಿಸುವ ಕೆಲಸ ನನ್ನ ಅಣ್ಣ ಶ್ರೀ ಉದನೇಶ್ವರ ಭಟ್ಟರು ಮಾಡಿದ್ದು , ಕೊನೆಗೂ ಅಚ್ಚಾಗಿ ಪುಸ್ತಕ ಹೊರಬಂದಾಗ "ಗಜ ಪ್ರಸವ" ದ ಅನುಭವ ನಮಗಾಯ್ತು !

ಈ ಮಧ್ಯೆ ಬಲಿಪರು ನಾಲ್ಕಾರು ಬಾರಿ ಫೋನಾಯಿಸಿ ಪುಸ್ತಕ ತಯಾರಾಯಿತಾ ? ಅಂತ ಉತ್ಸುಕರಾಗಿ ವಿಚಾರಿಸುತ್ತಾ ಇದ್ದು ಪುಸ್ತಕ ಪ್ರಕಟಣೆಯ ಪ್ರತಿ ಹಂತವನ್ನು ಅವರಿಗೆ ವಿವರಿಸುತ್ತ ಕೊನೆಗೊಂದು ದಿನ ಪುಸ್ತಕ ತಯಾರಾದಾಗ ೪ ಪ್ರತಿಗಳನ್ನು ತೆಗೆದುಕೊಂಡು ಅವರ ಮನೆಗೆ ತೆರಳಿ ಬಲಿಪರ ಕೈಗಿತ್ತಾಗ ಬಹಳ ಸಂತಸಪಟ್ಟು " ಕೊನೆಗೂ ಆಯ್ತಲ್ಲ . ಇನ್ನು ಹೆದರಿಕೆಯಿಲ್ಲ " ಎಂದರು .

ಇವೆಲ್ಲದರ ನಡುವೆ ಅವರಿಗೆ ಉಡುಪಿ ಬಳಿ ಕಟಪಾಡಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಸನ್ಮಾನ ಕಾರ್ಯಕ್ರಮವಿತ್ತು .ಅಲ್ಲಿ ಶ್ರೀಬಲಿಪರ ಅಭಿನಂದನಾ ಭಾಷಣ ಮಾಡುತ್ತಾ ಡಾ.ಪ್ರಭಾಕರ ಜೋಷಿಯವರು "ಬಲಿಪರು ೫ ದಿನದ ದೇವಿ ಮಹಾತ್ಮೆ ಪ್ರಸಂಗ ರಚಿಸಿದ್ದು ಅದು ಮುದ್ರಣ ಹಂತದಲ್ಲಿದೆ " ಎಂದು ಹೇಳಿದ್ದನ್ನು ಕೇಳಿಸಿಕೊಂಡ ಶೀರೂರು ಮಠದ ಶ್ರೀಪಾದಂಗಳವರು"ಅದನ್ನು ತನ್ನಿ ಉಡುಪಿ ರಾಜಾಂಗಣದಲ್ಲಿ ಬಿಡುಗಡೆ ಮಾಡೋಣ ಮಾತ್ರವಲ್ಲ ನಾನು ೫ ದಿನದ ಆಟ ಅಡಿಸ್ತೇನೆ" ಎಂದು ತುಂಬಿದ ಸಭೆಯಲ್ಲಿ ಘೋಷಿಸಿ ಬಿಟ್ಟರು . ಬಲಿಪರಿಗೆ ೫ ದಿನದ ಆಟ ಆಡಿಸುತ್ತಾರಲ್ಲಾ ಎಂದು ಸಂತಸ ಒಂದೆಡೆಯಾದರೆ ಬಿಡುಗಡೆ ಮಾಡುದು ನಮ್ಮ ಮನೆಯಲ್ಲಿ ಎಂದು ಮೊದಲೇ ನಿಶ್ಚಯಿಸಿ ಆಗಿದೆಯಲ್ಲ ? ಎಂಬ ಮಾನಸಿಕ ತುಮುಲ ಇನ್ನೊಂದೆಡೆ !

ಆ ದಿನ ಮನೆಗೆ ಬಂದವರೇ ಬಲಿಪರು ನೇರವಾಗಿ ನನಗೆ ಫೋನಾಯಿಸಿ ಸ್ವಾಮೀಜಿ ಹೀಗೆ ಹೇಳಿದ್ದಾರಲ್ಲ? ಏನು ಮಾಡುದು ಈಗ ? ಅಂತ ಕೇಳಿದರು. ನಾವು ಹೊರಟ ಉದ್ದೇಶ ಮತ್ತು ಬಲಿಪರು ಸಂಕಲ್ಪಿಸಿದ್ದು ನಮ್ಮ ಮನೆಯಲ್ಲಿ ಬಿಡುಗಡೆ ಮಾಡಲು. ಒಂದು ಕ್ಷಣ ನನಗೂ ಏನು ಮಾಡುದು ? ಎಂಬ ಗೊಂದಲ ಉಂಟಾಯಿತು. ಪ್ರಸಂಗ ಪುಸ್ತಕ ಬಿಡುಗಡೆ ನಮ್ಮ ಮನೆಯಲ್ಲಿ ಮಾಡಿದರೆ ಹೆಚ್ಚೆಂದರೂ ೧೦೦ ಮಂದಿ ಪ್ರೇಕ್ಷಕರಿದಾರಷ್ಟೇ.. ಉಡುಪಿ ರಾಜಾಂಗಣದಲ್ಲಾದರೆ ಕನಿಷ್ಠ ೫೦೦ ಜನವಾದರೂ ಇದ್ದಾರು .ಇದರಿಂದ ಪ್ರಸಂಗಕ್ಕೆ ಪ್ರಚಾರ ಹೆಚ್ಚು ಸಿಕ್ಕೇ ಸಿಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ . ಬಲಿಪರ ಕಟ್ಟಾ ಅಭಿಮಾನಿಯಾಗಿದ್ದ ನಮ್ಮ ತೀರ್ಥರೂಪರ ಸ್ಮರಣಾರ್ಥ ನಡೆಸುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಬೇಕೆಂಬುದು ನಮ್ಮ ಸದಾಶಯ. ಹೇಗಿದ್ದರೂ ಪ್ರಸಂಗವನ್ನು ಪ್ರಕಟಿಸುವ ಅಂತಿಮ ಉದ್ದೇಶವೇ ಜನರಿಗೆ ಅದನ್ನು ತಲುಪಿಸಿ ಪ್ರಚುರಪಡಿಸಬೇಕೆಂಬುದು ಆಗಿರುವುದರಿಂದ, ನನ್ನ ಅಣ್ಣ ಉದನೇಶ್ವರ ಭಟ್ಟರು ನಮ್ಮ ಮನೆಯಲ್ಲಿ ಕೃತಿ ಬಿಡುಗಡೆಯೆಂದೂ ಉಡುಪಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯೆಂದೂ ಎರಡು ಕಾರ್ಯಕ್ರಮ ಮಾಡೋಣ ಎಂದು ಹೇಳಿ ನಮ್ಮ ಸಂಕಟವನ್ನು ತಿಳಿಗೊಳಿಸಿದರು! ಕೂಡಲೇ ಬಲಿಪರಿಗೆ ಫೋನಾಯಿಸಿ ಹೀಗೆ ಮಾಡೋಣ ಆಗ ಅವರಿಗೂ ಬೇಸರವಾಗಲಾರದು ಎಂದೆ . ಬಲಿಪರಿಗೂ ಸಮಾಧಾನವಾಯಿತು .






ಪುಸ್ತಕವೇನೋ ತಯಾರಾಗಿ ಕೈಸೇರಿತು. ಈಗ ಬಿಡುಗಡೆಯ ದಿನ ನಿರ್ಣಯ ಮಾಡಬೇಕಿತ್ತು. ಮೊದಲೇ ನಿರ್ಧರಿಸಿದಂತೆ ಹೆಚ್ಚು ಜನ ಉದ್ದ ಉದ್ದ ಭಾಷಣ ಮಾಡುವುದು ಬೇಡವೆಂದು ಸರಳ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಗಮನ ನೀಡಲಾಯಿತು. ಎಲ್ಲರ ಬರುವಿಕೆಯ ಅನುಕೂಲ ನೋಡಿಕೊಂಡು ಇದೇ ಏಪ್ರಿಲ್ ೧೮ನೆ ಭಾನುವಾರ ನಮ್ಮ ವೇಣೂರಿನ ಕಜೆ ಮನೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವುದೆಂದು ನಿಶ್ಚಯಿಸಲಾಯಿತು .ಅಧ್ಯಕ್ಷ ಸ್ಥಾನಕ್ಕೆ ವಿಮರ್ಶಕ ಹಾಗೂ ಮುನ್ನುಡಿ ಬರೆದ ಡಾ. ಜೋಶಿಯವರೂ , ಪ್ರಸಂಗಕರ್ತ ಬಲಿಪರೂ , ವೇಣೂರಿನ ನಮ್ಮ ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ.ಪಿ.ಮೋಹನ ರಾವ್ ಅವರು ನಮ್ಮಲ್ಲಿ ನಡೆಯುವ ಎಲ್ಲ ಯಕ್ಷಗಾನ ಕಾರ್ಯಕ್ರಮಕ್ಕೂ ಸೂತ್ರಧಾರರೂ ಅತ್ಯಂತ ಸ್ನೇಹಜೀವಿಯಾದ ಅವರನ್ನು ವೇದಿಕೆಯಲ್ಲಿ ಅಲಂಕರಿಸುವುದು ಎಂದು ನಿರ್ಧರಿಸಲಾಯಿತು. ಎಡೆಬಿಡದ ಕಾರ್ಯಕ್ರಮದ ನಡುವೆಯೂ ಈ ಪುಟ್ಟ ಸರಳ ಕಾರ್ಯಕ್ರಮಕ್ಕೆ ಬರಲೊಪ್ಪಿದ ಡಾ.ಜೋಷಿಯವರು ಮಧ್ಯೆ ಫೋನಾಯಿಸಿ ಈ ಕಾರ್ಯಕ್ರಮ ಬೇಕೋ ? ಉಡುಪಿಯಲ್ಲೇ ಮಾಡಿದರೆ ಸಾಕಿತ್ತಲ್ಲ ? ಎಂದರೂ "ಇಲ್ಲ " ನಮ್ಮಲ್ಲೇ ಮಾಡುದು ಮಾಡುದೇ ಎಂದು ಖಂಡಿತವಾಗಿ ಹೇಳಿದೆ .ಅದೇ ದಿನ ಬೇರೆ ಅನಿವಾರ್ಯ ಕಾರ್ಯಕ್ರಮ ಇದೆ ನನ್ನನ್ನು ೪ ಗಂಟೆಗೆ ಬಿ.ಸಿ.ರೋಡ್ ಗೆ ಹೋಗಲು ಅವಕಾಶ ಮಾಡಿಕೊಡಬೇಕೆಂಬ ಶರತ್ತಿನ ಮೇಲೆ ಸಂತಸದಿಂದ ಒಪ್ಪಿದ ಅವರು ೨.೩೦ಕ್ಕೆ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ೨ ಗಂಟೆಗೆ ನಡೆಸಲು ಸೂಚಿಸಿದರು.

ಇದಕ್ಕೂ ಮೊದಲು ಕೃತಿ ಬಿಡುಗಡೆ ಬಳಿಕ ತಾಳಮದ್ದಲೆ ನಡೆಸುವುದೆಂದು ಯೋಚಿಸಿದ್ದೆವಾದರೂ ಅದೇ ಪ್ರಸಂಗದ ಆಯ್ದ ಪದ್ಯಗಳನ್ನು ಹಾಡಿಸುವುದು ಸೂಕ್ತವೆಂದು ಹಲವರು ಅಭಿಪ್ರಾಯಪಟ್ಟದ್ದರಿಂದ , ಮತ್ತು ಪ್ರಸಂಗದ ಪದ್ಯಗಳನ್ನು ಹೇಳಬೇಕಾದ ಕ್ರಮವನ್ನು ಪ್ರಸಂಗ ಕರ್ತರಿಂದಲೇ ಹಾಡಿಸಿದರೆ ಉತ್ತಮವೆಂಬ ನೆಲೆಯಿಂದ ಬಲಿಪ ತ್ರಯರಿಂದ ಆಯ್ದ ಹಾಡುಗಳ ಕಾರ್ಯಕ್ರಮವೆಂದು ನಿಶ್ಚಯಿಸಿದೆವು . ಅದಕ್ಕಾಗಿ ಬಲಿಪರಿಗೂ, ಅವರ ಚಿರಂಜೀವಿಗಳಾದ ಶ್ರೀ ಪ್ರಸಾದ ಬಲಿಪ ಮತ್ತು ಶ್ರೀ ಶಿವಶಂಕರ ಬಲಿಪರಿಗೆ ಯಕ್ಷ ಸಂಗೀತದ ಬಗ್ಗೆ ತಿಳಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು . ಹಿಮ್ಮೇಳ ಸಹಕಾರಕ್ಕೆ ಕುದ್ರೆಕ್ಕೊಡ್ಲು ರಾಮಮೂರ್ತಿ ಹಾಗೂ ಕೊಂಕಣಾಜೆ ಚಂದ್ರ ಶೇಖರಣ್ಣರನ್ನು ವಿನಂತಿಸಿಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದೆವು.
ಎಪ್ರಿಲ್ ೧೮ ರಂದು ಕಾರ್ಯಕ್ರಮದ ದಿನದಂದು ಸಮಯಕ್ಕೆ ಮೊದಲೇ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಲು ಸಹಕರಿಸಿದರು. ಬೆಂಗಳೂರು ಮಿತ್ರರು , ಉಡುಪಿ ಮಿತ್ರರು ನೆರೆಕರೆಯ ಹಿತೈಷಿಗಳು ಎಲ್ಲರೂ ಸೇರಿ ಭೋಜನದ ಬಳಿಕ ಸರಿಯಾಗಿ ೨.೧೩ ನಿಮಿಷಕ್ಕೆ ನಿತಿನ್ ಗಣೇಶ ನ ವೈದಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ , ಸ್ವಾಗತ, ಪುಸ್ತಕ ಬಿಡುಗಡೆ, ಡಾ. ಜೋಷಿಯವರ ಶುಭಾ೦ಸನೆ , ಪ್ರಸಂಗಕರ್ತರ ಮಾತು ಹಾಗೂ ವಂದನಾರ್ಪಣೆಯೊಂದಿಗೆ ಚುಟುಕಾಗಿ ಕಾರ್ಯಕ್ರಮ ಮುಗಿಸಿ ಬಳಿಕ ಯಕ್ಷ ಸಂಗೀತ ಬಲಿಪತ್ರಯರಿಂದ ಸಂಪನ್ನಗೊಂಡಿತು .











ಡಾ. ಜೋಷಿಯವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಉಡುಪಿಯ ರಾಜಾಂಗಣದಲ್ಲಿ ಈ ಕೃತಿಯ ಮೊದಲ ಪ್ರಯೋಗ ಶ್ರೀ ಹೊಸನಗರ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಆದರೆ ಉಡುಪಿಯಲ್ಲಿ ದೊಡ್ಡ ಮಟ್ಟಿನ ಸಭೆಯಲ್ಲಿ ಈ ಕೃತಿ ಬಿಡುಗಡೆಗೊಂಡು ಜನ ಪ್ರಚಾರ ಪಡೆದೀತೆಂಬ ನಮ್ಮ ಕಲ್ಪನೆ ಮಾತ್ರ ಕನಸಾಗಿಯೇ ಉಳಿಯಿತು !

ಬಲಿಪ ಭಾಗವತರು ತಮ್ಮ ಸುದೀರ್ಘ ಜೀವನಾನುಭವ ಹಾಗೂ ರಂಗಾನುಭಾವಗಳಿಂದ ಬರೆದ ಈ ಕೃತಿಯನ್ನು ಶಾಶ್ವತವಾಗಿ ಉಳಿಸಬೇಕಾದ ಗುರುತರ ಹೊಣೆಗಾರಿಕೆ ಯಕ್ಷಪ್ರಿಯರಾದ ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ. ಒಂದು ಮಹಾ ಕಾವ್ಯದಂತೆ ಒಂದು ಮಹಾಪ್ರಸಂಗವನ್ನು ಬಲಿಪರು ಬರೆದಿದ್ದು ಯಕ್ಷರಂಗದ ಅಪೂರ್ವ ದಾಖಲೆ ಇದು ಎಂದರೆ ಅತಿಶಯೋಕ್ತಿಯಲ್ಲ. ಕುವೆಂಪುರವರು ರಾಮಾಯಣ ದರ್ಶನಂ ಬರೆದಂತೆ, ಹಲವು ರಾಗ ತಾಳ ವೈವಿಧ್ಯತೆಯಿಂದ ಕೂಡಿದ ಒಂದು ಮಹಾ ಪ್ರಸಂಗವನ್ನು ಬಲಿಪರು ಬರೆದು ಸಮಕಾಲೀನ ಪ್ರಪಂಚದಲ್ಲಿ ತಮ್ಮ ವಿದ್ವತ್ತನ್ನು ಮೆರೆದಿದ್ದಾರೆ. ಸರಳ ಸಜ್ಜನಿಕೆಗಳ ಸಾರ್ವತ್ರಿಕ ಅಂಗೀಕಾರ ಹೊಂದಿದ ಬಹು ಅಪೂರ್ವ ಕಲಾವಿದ ಬಲಿಪರು ಮುಂದಿನ ಕಲಾವಿದರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕೃತಿ ರಚಿಸಿದ್ದಾರೆ. ಇದನ್ನು ೫ ದಿನ , ೭ ದಿನ , ೧ ದಿನ ಅಥವಾ ಕಾಲಮಿತಿ ಪ್ರಯೋಗಕ್ಕೂ ಅಳವಡಿಸಿಕೊಳ್ಳಬಹುದಾದ ರೀತಿಯಲ್ಲಿ ರಚಿಸಿರುವುದರಿಂದ ಎಲ್ಲ ರೀತಿಯ ಯಕ್ಷ ಕಲಾಸಕ್ತರಿಗೆ ,ಹವ್ಯಾಸಿ ತಂಡದವರಿಗೆ , ಮಕ್ಕಳ ಯಕ್ಷಗಾನಕ್ಕೂ ಹಿತವಾಗಿ ಬಳಸಬಹುದಾಗಿದೆ.

ಐದು ದಿನದ ಈ ಕೃತಿಯು ಶಾಶ್ವತವಾಗಿ ಉಳಿಯಲಿ , ಅದನ್ನು ರಂಗದಲ್ಲಿ ಪ್ರಯೋಗಿಸಿ ಜನಪ್ರಿಯಗೊಳಿಸಿ ಯಕ್ಷರಸಿಕರೆಲ್ಲರೂ ಸವಿಯುವಂತೆ ಮಾಡಬೇಕಾದ ಹೊಣೆಗಾರಿಕೆ ಈಗಾಗಲೇ ಇರುವ ವೃತ್ತಿಪರ ಮೇಳಗಳು, ಹವ್ಯಾಸಿ ಕಲಾವಿದರು , ಮಕ್ಕಳ ಯಕ್ಷಗಾನ ತಂಡದವರು , ಹಾಗೂ ಸಂಘ ಸಂಸ್ಥೆ ಗಳ ಮೇಲಿದೆ. ಆ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಸೇರೋಣ ಎನ್ನುವುದೇ ಈ ಲೇಖನದ ಉದ್ದೇಶ.

ನಿಮಗೇನನಿಸುತ್ತದೆ ?


Friday, March 26, 2010

ಸುಂದರ ನೆನಪು ...



ಆತ್ಮೀಯ ಕಲಾಭಿಮಾನಿಗಳೇ , ಇದೇ ಬರುವ ಶನಿವಾರ ರಾತ್ರಿ ೯.೩೦ಕ್ಕೆ ಸರಿಯಾಗಿ ಶ್ರೀ ಮಹಾಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಲಿ ,ಸುರತ್ಕಲ್ ಇವರಿಂದ ವಿದ್ಯುತ್ ದೀಪಾಲಂಕೃತ ರಂಗು ರಂಗಿನ ರಂಗ ಮಂಟಪದಲ್ಲಿ ಒಂದೇ ಒಂದು ಆಟ "ಸಂಪೂರ್ಣ ನಳ ದಮಯಂತಿ " ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ....ಎಂದು ಆಟೋ ರಿಕ್ಷದ ಮೇಲೆ ಕಟ್ಟಿದ ಮೈಕಿನಲ್ಲಿ ಜೋರಾಗಿ ವೇಣೂರಿನ ಮೇಲಿನ ಪೇಟೆಯ ಬದಿಯಲ್ಲಿ ಪ್ರಚಾರ ಮಾಡುತ್ತ ಹೋಗುತ್ತಿದ್ದರೆ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುವಾಗ ರಿಕ್ಷದಿಂದ ಎಸೆದ ಕರಪತ್ರವನ್ನು ಹೆಕ್ಕಿ ಪಡೆಯಲು ನಮ್ಮ ಸ್ಪರ್ಧೆ !

ಆ ದಿನ ಮನೆಯಲ್ಲಿ ಬಂದು ಆಟಕ್ಕೆ ಹೋಗುವ ಬಗ್ಗೆ ಅಪ್ಪನಲ್ಲಿ ಪೀಠಿಕೆ ಹಾಕಿದಾಗ "ತುಳು ಆಟಕ್ಕೆ ಹೊಪಲಿಲ್ಲೇ " ಎಂಬ ಕಟ್ಟಪ್ಪಣೆ ಬಂದರೂ ಸಂಜೆಯಾದಾಗ ಅದು ಬದಲಾದೀತೆಂಬ ಅಚಲ ವಿಶ್ವಾಸ ! ಯಾಕೆಂದರೆ ಸುರತ್ಕಲ್ ಮೇಳದಲ್ಲಿ ಪ್ರಧಾನ ಹಾಸ್ಯಗಾರ ನಮ್ಮ ನೆರೆಕರೆಯ ಸುಂದರ ಆಚಾರ್ಯ .

ಸುಂದರ ಆಚಾರ್ಯರ ಅಮ್ಮ ಸರಸಮ್ಮ ಆಚಾರ್ತಿಯವರು ನಮ್ಮ ಮನೆಗೆ ಗದ್ದೆ ಕೆಲಸಕ್ಕೆ ಸದಾ ಬರುತ್ತಾ ಇದ್ದವರು. ಹಲವಾರು ಸಂಧಿ ಪಾಡ್ದನ ಗಳ ಕಂಠಪಾಠವಿದ್ದ ಅವರು ಗದ್ದೆಯಲ್ಲಿ ಹಾಡುತ್ತಾ ನೇಜಿ ನೆಡುತ್ತಿದ್ದರೆ ಸಮಯ ಕಳೆದುದೇ ಗೊತ್ತಾಗುತ್ತಿರಲಿಲ್ಲ ಎಂಬುದು ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಕಲರ ಸಮ್ಮತ ....

ಮೇಳ ಬಿಟ್ಟು ಮಳೆಗಾಲದಲ್ಲಿ ಸಮಯವಿದ್ದಾಗಲೆಲ್ಲ ಮನೆಗೆ ಬರುತ್ತಿದ್ದ ಸುಂದರಣ್ಣ ಅಪ್ಪನೊಂದಿಗೆ ಪುರಾಣ ಕಥೆಗಳ ಸೂಕ್ಷ್ಮತೆಗಳು , ವೈದಿಕ ಪದ್ದತಿಯ ಬಗೆಗೆ ತಿಳಿದುಕೊಂಡು ,ಚರ್ಚಿಸಿ , ಎಲೆ ಅಡಿಕೆ ತಿನ್ನುತ್ತ ಹೋಗುತ್ತಿದ್ದುದು ಇನ್ನೂ ಮಾಸದ ನೆನಪು ...

ಅಪ್ಪನಿಗೂ ಸುಂದರಣ್ಣನ ಹಾಸ್ಯದ ಬಗ್ಗೆ ಒಲವಿತ್ತು .ಮೊದ ಮೊದಲು ಅಶ್ಲೀಲತೆಗಳನ್ನು ಬಳಸುತ್ತಿದ್ದ ಸುಂದರಣ್ಣನಿಗೆ ಗದರಿ ,ತಿಳಿಹೇಳಿ ತಿದ್ದುವಲ್ಲಿ ಸಫಲರಾದ ವೇಣೂರಿನ ಹಲವು ಮಂದಿ ಯಕ್ಷಾಭಿಮಾನಿಗಳ ಪೈಕಿ ಅಪ್ಪನೂ ಒಬ್ಬರಾದ್ದರಿಂದ ಸಂಜೆಯೊಳಗೆ ಸುಂದರಣ್ಣ ಒಮ್ಮೆ ಮನೆಗೆ ಬಂದು ಎಲೆ ಅಡಿಕೆ ತಿಂದು ಅಪ್ಪನಿಗೆ "ಆಟ ಉಂಡು ಬರೋಡಣ್ಣೆರೆ " ಎಂಬ ಕರೆ ಬಂದೇ ಬರುತ್ತದೆಂಬ ದೃಡ ವಿಶ್ವಾಸ . ಸುಂದರಣ್ಣನಿಗೂ ನಮ್ಮ ಅಪ್ಪನಿಗೂ ಒಳ್ಳೆಯ ಗೆಳೆತನ ಇದ್ದುದರಿಂದ ಇವತ್ತಿನ ಆಟಕ್ಕೆ ಖಂಡಿತ ಪರ್ಮಿಶನ್ ಸಿಕ್ಕೇ ಸಿಗುತ್ತದೆಂಬ ಕಾತರ!

ಸುಂದರಾಚಾರ್ಯರ ವೃತ್ತಿ ಜೀವನದ ಬಹುತೇಕ ಪೂರ್ಣ ವರ್ಷ ಸುರತ್ಕಲ್ ಮೇಳದಲ್ಲಿ ನಡೆಯಿತು . ವಿಟ್ಲ ಗೋಪಾಲಕೃಷ್ಣ ಜೋಷಿಯವರ ನೇರ ಶಿಷ್ಯತ್ವದಿಂದ ಪ್ರಭಾವಿತರಾದರೂ ಸ್ವಂತಿಕೆಯನ್ನು ರಂಗದಲ್ಲಿ ಮೆರೆದ ಅಪೂರ್ವ ಕಲಾವಿದ . ಬಾಹುಕ , ಪಾಪಣ್ಣ , ಪೈಯ್ಯ ಬಿದ್ಯ , ಮಲೆಯಾಳಿ ಬಿಲ್ಲವ ,ಮಕರಂದ ,ವಿಜಯ ಇತ್ಯಾದಿ ಪಾತ್ರಗಳನ್ನು ಅತ್ಯುತ್ತಮವಾಗಿ ಮೆರೆಯಿಸಿದವರಲ್ಲಿ ಸುಂದರಣ್ಣ ಒಬ್ಬರು. ಪದ್ಯಾಣ ಗಣಪ್ಪಣ್ಣ- ಕಡಬ ನಾರಾಯಣ ಆಚಾರ್ಯರು ಹಿಮ್ಮೆಳದಲ್ಲಿದ್ದರೆ ಶಿವರಾಮ ಜೋಗಿ- ಸುಂದರಣ್ಣ ಮುಮ್ಮೇಳದಲ್ಲಿ ವಿಜ್ರಂಭಿಸುತ್ತಿದ್ದ ಕಾಲವದು .

ಸಂಜೆ ಅಪ್ಪ ತೋಟದಿಂದ ಬಂದ ಬಳಿಕ ಆಟಕ್ಕೆ ಹೊಪೋ ಹೇಳಿ ಕರೆದಾಗ "ಸಚಿನ್ ಡಬಲ್ ಸೆಂಚುರಿ ಬಾರಿಸಿದಾಗ" ಕ್ರಿಕೆಟ್ ಅಭಿಮಾನಿಗಳಲ್ಲಿ ಉಂಟಾಗುವ ವಿದ್ಯುತ್ ಸಂಚಾರದಂತ ಸಂತೋಷ !!

ಆ ದಿನ ರಾತ್ರಿ ಜೋಗಿಯವರ ಋತುಪರ್ಣನಿಗೆ ಸುಂದರಣ್ಣನ ಬಾಹುಕ. ಗಣಪ್ಪಣ್ಣನ " ವರ ಕಾರ್ಕೋಟಕ ಕಚ್ಚಿದ ದೆಸೆಯಿಂದರಸನ ದೇಹಗಳು ... ನೆರೆ ಕಪ್ಪಾಗುತ ಕರಗಿತು ದಿವ್ಯಾಕಾರದ ತೇಜಗಳು .... " ಪುನ್ನಾಗ ರಾಗದ ಪದ್ಯಕ್ಕೆ ಸರಿಯಾಗಿ ಬಾಹುಕನ ಪ್ರವೇಶ ಎಂಥವರನ್ನು ಮನಸೂರೆಗೊಳ್ಳುವಂತೆ ಮಾಡಿತ್ತು . ಇಂದಿನ ಕಲಾವಿದರು ಪಾತ್ರಗಳ ಪರಕಾಯ ಪ್ರವೇಶ ಮಾಡಲಾಗದೆ ಪೇಲವ ಪ್ರದರ್ಶನವನ್ನು ನೀಡುವುದನ್ನು , ಕ್ಯಾಮರಾಕ್ಕೆ ಪೋಸ್ ಕೊಡುವುದನ್ನೂ ಅದಕ್ಕೆ ಪ್ರೇಕ್ಷಕರು ಚಾಪ್ಪಳೆ -ಸಿಳ್ಳೆ ಮೂಲಕ ಪ್ರೋತ್ಸಾಹ ನೀಡುವುದನ್ನು ನೋಡುವಾಗ ನಿಜಕ್ಕೂ ವೇದನೆಯಾಗುತ್ತದೆ.

ಮಿತಭಾಷಿ ಸುಂದರಣ್ಣ ಬಡತನದ ಬೇಗೆಯಲ್ಲಿ ದಿನ ಕಳೆದವರು .ಅವರು ಸಂಜೆಯಾಗುತ್ತಿದ್ದಂತೆ ನಿತ್ಯವೂ ಭೇಟಿ ನೀಡುತ್ತಿದ್ದ ಸ್ಥಳ "ಪಂಚು ವೈನ್ಸ್". ತೀರ್ಥ ಸೇವನಾ ಚಟ ಅವರನ್ನು ಬಲಿತೆಗೆದುಕೊಂಡಿತ್ತು .

ಹಲವಾರು ಸಂಘ ಸಂಸ್ಥೆಗಳಿಂದ ಸಂಮಾನಗಳನ್ನು ಪಡೆದ ಅವರು ವೇಣೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ದಶಮಾನೋತ್ಸವದಲ್ಲಿ ಸಂಮಾನಿಸಿದಾಗ ಅವರಾಡಿದ ಮಾತು " ನನಗೆ ಇಂದಿನ ಈ ಸಮ್ಮಾನ ಪಡೆದಾಗ ಮಗುವೊಂದು ತನ್ನ ತಾಯಿಯ ಮಡಿಲಲ್ಲಿ ಕುಳಿತು ಮೊಲೆವಾಲನ್ನು ಕುಡಿದಾಗ ಪಡೆವ ಸಂತೋಷದಷ್ಟು ಸಂತೋಷವಾಯಿತು "
ಅದೇ ಕೊನೆ ಸನ್ಮಾನ .ಬಳಿಕ ಭಗವಂತನಲ್ಲಿ ಸೇರಿದ ಸುಂದರಣ್ಣ ನಿಜವಾಗಿಯೂ ಒಬ್ಬ ಅಭಿಜಾತ ಕಲಾವಿದ ...
ಸುಂದರ ನೆನಪನ್ನು ನಮ್ಮಲ್ಲಿ ಬಿಟ್ಟು ಹೋದ ಮಹಾನ್ ಹಾಸ್ಯಗಾರ...!

***

Wednesday, February 10, 2010

ವಿಪಂಚಿ ಬಳಗದ ಪಂಚವೀಣೆ ....


ಸಂಗೀತ ಪರಿಕರಗಳಲ್ಲಿ ಅಪೂರ್ವವೆನಿಸಿದ ತಂತಿ ವಾದ್ಯವಾದ ವೀಣಾವಾದನ ಕಾರ್ಯಕ್ರಮ ಆಸ್ವಾದಿಸಲು ಸಿಗುವುದು ಸಂಗೀತ ರಸಿಕರಿಗೆ ಅಪರೂಪ . ಅದರಲ್ಲೂ ಐದು ಮಂದಿ ಏಕ ಕಾಲದಲ್ಲಿ ವೀಣಾವಾದನ ನಡೆಸಿಕೊಡುವುದಂತೂ ತೀರಾ ವಿರಳ . ಇಂಥ ಅಪೂರ್ವವಾದ ವೀಣಾವಾದನ ಕಾರ್ಯಕ್ರಮವನ್ನು ಸವಿಯುವ ಅವಕಾಶವೊಂದು ಸಿಕ್ಕಿದ್ದು ನನಗೆ ಬಲು ಸಂತಸವುಂಟು ಮಾಡಿತ್ತು.


. "ವಿಪಂಚಿ" ಎಂದರೆ ವಿಧ್ಯಾಧಿದೇವತೆಯಾದ ಸರಸ್ವತಿ ದೇವಿಯ ವೀಣೆಯ ಹೆಸರು. ಇದರಿಂದಲೇ "ವೀಣಾಪಾಣಿ ಮಾತೆ ..." ಎಂಬುದಾಗಿ ಶಾರದಾದೇವಿ ಪ್ರಸಿದ್ಧಳು. ಬಹಳ ಮಂದಿಗೆ ಚಿರಪರಿಚಿತವಾಗಿರುವ "ವರವೀಣಾ ಮೃದು ಪಾಣಿ ವನರುಹಲೋಚನ ರಾಣಿ ...." ಪದ್ಯದಲ್ಲಿ ಬರುವುದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿ ತನ್ನ ಕರಗಳಲ್ಲಿ ಹಿಡಿದಿರುವ "ವರವೀಣಾ " ನಾಮಕ ವೀಣೆಯ ಬಗ್ಗೆ ಎಂಬ ವಿಚಾರ ಕುತೂಹಲಕರ ವಿಷಯವೇ.


ಇತ್ತೀಚಿಗೆ ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕದ ಮುದ್ದುಮಂದಿರದಲ್ಲಿ ಅಂತರಾಷ್ಟ್ರೀಯ ಸಸ್ಯ ವಿಜ್ಞಾನಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರ "ಭೀಮರಥ ಶಾಂತಿ " ಸಂಭ್ರಮಾವಸರದಲ್ಲಿ ಕಿರು ಪಂಚವೀಣಾವಾದನ ಕಛೇರಿಯನ್ನು ಮಣಿಪಾಲದ ಶ್ರೀಮತಿ ಪವನಾ ಬಿ. ಆಚಾರ್ಯರ ನೇತೃತ್ವದ "ವಿಪಂಚಿ" ಬಳಗ ಅಂದವಾಗಿ ನಡೆಸಿ ಕೊಟ್ಟು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು. ಇದುವರೆಗೆ ದೇಶದ ನಾನಾ ಭಾಗಗಳಲ್ಲಿ ಹಲವು ಯಶಸ್ವೀ ಕಾರ್ಯಕ್ರಮ ನಡೆಸಿ ಕೊಟ್ಟ ಈ ತಂಡವು ಸಿಕ್ಕ ಸಮಯಾವಕಾಶದ ಮಿತಿಯಲ್ಲಿ ಚೊಕ್ಕದಾಗಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೆ ..." ಕೃತಿಯಿಂದ ಆರಂಭಗೊಂಡು ಸಾದಿಂಚಿನೆ , ಲಿಂಗಾಷ್ಟಕವೆ ಮೊದಲಾದ ಕೃತಿಗಳಿಂದ ಮುಂದುವರಿದು ಶ್ರೀರಾಗದ ಭಾಗ್ಯದ ಲಕ್ಷ್ಮಿ.. ಕೃತಿಯೊಂದಿಗೆ ಸಮಾಪ್ತಿಗೊಂಡಿತು . ಸುಮಾರು ೫೨ ನಿಮಿಷಗಳ ಈ ಕಾರ್ಯಕ್ರಮ ಬಹಳ ಶಿಸ್ತುಬದ್ಧವಾಗಿ ಮೂಡಿ ಬಂದಿದ್ದು ಕಲಾವಿದರ ಸಾಧನಾ ಪರಿಶ್ರಮವು ಅಭಿನಂದನೀಯ.

***

Friday, January 1, 2010

ಹಿರಿಯಣ್ಣನಿಗೊಂದು ನುಡಿ ನಮನ .....


ಸುಗಮ ಸಂಗೀತದ ಭೀಷ್ಮ ಅಶ್ವಥ್ ರವರು ಅಸ್ವಸ್ಥರಾಗಿದ್ದರೆಂದು ತಿಳಿದಾಗಲೇ ಮನಸ್ಸೇಕೋ ಮ್ಲಾನವಾಗಿತ್ತು . ಒಂದು ದೊಡ್ಡ ಅಶ್ವತ್ಥ ಮರದಂತೆ ಬೆಳೆದು ವಿಶಾಲವಾದ ವ್ಯಕ್ತಿತ್ವ ರೂಪಿಸಿದ್ದ ಮುಗ್ಧ ಮನಸಿನ ಹಿರಿಯ ಅಣ್ಣನಂತಿದ್ದ ಅವರ ನಿಧನ ನಿಜಕ್ಕೂ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತವನ್ನೇ ಸೃಷ್ಟಿಸಿದೆ .



ಅತ್ಯಂತ ಭಾವಪೂರ್ಣವಾಗಿ ಹಾಡುವ ಇವರ ರೆ ರೇ ರಾ.... ಆಲಾಪನೆ ಕೇಳುವುದೇ ಸೊಗಸು. ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹಾಗೆ ನೆಲೆ ನಿಂತಿರುವ ಸ್ವರ ಮಾಂತ್ರಿಕ ಜೀವನ ಯಾತ್ರೆ ಮುಗಿಸಿ ಪರಮಾತ್ಮನಲ್ಲಿ ಲೀನವಾದರೂ ಸಂಗೀತ ರಸಿಕರ ಮನದಲ್ಲಿ ಸದಾ ಚಿರಂಜೀವಿಯಾಗಿರುವ ಇವರು ಮತ್ತೆ ಉದಿಸಿ ಬರಲಿ ಎಂಬುದು ನಮ್ಮ ಹಾರೈಕೆ.

ಶಿಶುನಾಳ ಷರೀಪರ ಹಾಡುಗಳನ್ನು ಕೇಳಬೇಕು ಎಂದಿದ್ದರೆ ಅದು ಶ್ರೀಯುತ ಅಶ್ವಥ್ ರವರ ದನಿಯಲ್ಲೇ ಕೇಳಬೇಕು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರ ಆತ್ಮ ವಿಶ್ವಾತ್ಮಕನಲ್ಲಿ ಲೀನವಾಗಿದ್ದರೂ ಅವರ ಹಾಡುಗಳ ಮೂಲಕ ಎಲ್ಲರಿಗೂ ಸದಾ ಸ್ಪೂರ್ತಿಯಾಗಿ ನಮ್ಮ ನಡುವೆ ಚಿರಕಾಲ ಜೀವಂತವಾಗಿರುವ ಮಹಾ ಚೇತನ ಶ್ರೀಯುತ ಅಶ್ವಥ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

Wednesday, December 23, 2009

ಕ್ಯಾಸೆಟ್ ಚೌರ್ಯ !

ಒಬ್ಬ ರಚಿಸಿದ ಯಾವುದೇ ಕೃತಿಯನ್ನು ಯಥಾವತ್ ಯಾ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಭಟ್ಟಿ ಇಳಿಸಿದರೆ ಅದನ್ನು ಕೃತಿ ಚೌರ್ಯ ಎನ್ನುತ್ತಾರೆ. ಕೆಲವರಂತೂ ಇತ್ತೀಚಿಗೆ ರಾಜಾರೋಷವಾಗಿ "ಇಂಥ ಕಡೆಯಿಂದ ಕದ್ದದ್ದು " ಎಂದು ತಮ್ಮ ಚೋರತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೆಸರುವಾಸಿಯಾಗ ಬಯಸಿದರೆ ಇನ್ನು ಕೆಲವರು ಕೇವಲ ಹಣ ಸಂಪಾದನೆಯೇ ಗುರಿಯಾಗಿಸಿ ಕೃತಿ ಚೌರ್ಯ ಮಾಡುವುದು ಕಂಡುಬರುತ್ತದೆ.ಕೃತಿ ಚೌರ್ಯ ಮಾಡುವುದು ಕಾನೂನು ರೀತ್ಯಾ ಅಪರಾಧ. ಇಂಥ ಕೆಟ್ಟ ಚಾಳಿಯೂ ನಿಜವಾದ ಕೃತಿಕಾರನಿಗೆ ಹಲವು ರೀತಿಯ ನಷ್ಟವನ್ನು ಉಂಟುಮಾಡುತ್ತದೆ .ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೃತಿ ಚೌರ್ಯ ಇಂದು ವ್ಯಾಪಕವಾಗಿರುವುದು ವಿಷಾದನೀಯ. ನಿಜವಾದ ಪ್ರತಿಭೆ ಇದ್ದಲ್ಲಿ ಇಂಥ ದುರ್ಧೆಸೆಗೆ ಯಾವೊಬ್ಬನೂ ಇಳಿಯುವುದು ಹಿತಕರವಲ್ಲ .

ಇಲ್ಲಿ ನಾನು ಹೇಳಹೊರಟಿರುವುದು ಕೃತಿ ಚೌರ್ಯದ ಒಂದು ರೂಪವಾದ ಧ್ವನಿಮುದ್ರಿಕೆಗಳ ಚೋರತನದ ಬಗ್ಗೆ !

ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಣೆಗೆ ಹೋಗಿದ್ದಾಗ ಧ್ವನಿಮುದ್ರಿಕೆಗಳ ತಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಅಪೂರ್ವವೆನಿಸಿದ ಕೆಲವು ಪ್ರಸಂಗಗಳ ತಟ್ಟೆಯೊಂದನ್ನು ಗಮನಿಸಿದಾಗ ಅದರಲ್ಲಿ ಮುದ್ರಿತವಾಗಿರುವಂತೆ "ಪಾಂಡವಸ್ವರ್ಗಾರೋಹಣ ", "ರಣಚಂಡಿ ", "ವಿಷಮ ದಾಂಪತ್ಯ " ಇತ್ಯಾದಿ ಎಂಟು ಪ್ರಸಂಗಗಳಿರುವ ಒಂದು ಅಪೂರ್ವ ಸಂಗ್ರಹವೆಂದೂ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತ ವಿದ್ವಾನ್ ಒಬ್ಬರು ಈ ಎಲ್ಲ ಪ್ರಸಂಗಗಳಲ್ಲೂ ಭಾಗವತರೆಂದೂ , ಮುಮ್ಮೆಳದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳಾದ ಶೇಣಿ, ಕುಂಬಳೆ, ನಯನ ಕುಮಾರ್,ಕೆ.ಗೋವಿಂದ ಭಟ್ ಎಂದೂ ಪಟ್ಟಿಯಲ್ಲಿ ಪ್ರಕಟಿಸಿದ್ದು ಸಹಜವಾಗಿ ಕುತೂಹಲ ಹುಟ್ಟಿಸುವ ವಿಚಾರವಾದುದರಿಂದ ಕೂಡಲೇ ಹಣ ತೆತ್ತು ಖರೀದಿಸಿದೆ .

ಮನೆಗೆ ಮರಳಿ ಹೊಸತಾಗಿ ಖರೀದಿಸಿದ ತಟ್ಟೆಯನ್ನು ಆಲಿಸಬೇಕೆಂದು ಆರಂಭಿಸಿದಾಗ ಮೊದಲಿಗೆ "ಇದನ್ನೆಲ್ಲಿಯೋ ಕೇಳಿದ್ದೆನಲ್ಲಾ? " ಎಂಬ ಗುಮಾನಿ ಹುಟ್ಟಿಕೊಂಡಿತು . ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಶೇಣಿಯವರ ಧರ್ಮರಾಯ ಹಾಗೂ ನಯನ ಕುಮಾರರ ಕೃಷಿಕ ಸಿದ್ಧನ ಪಾತ್ರದ ಸಂಭಾಷಣೆ ಕೇಳುತ್ತಿದ್ದಂತೆ ನನ್ನ ಸಂದೇಹವೆಲ್ಲ ಮಾಯವಾಗಿ ಇದು ಅದುವೇ! ಎಂದು ಸ್ಪಷ್ಟವಾಯಿತು . ನಾನು ೨೦೦೧ ರಲ್ಲಿ ಸುಳ್ಯದ ಸಂಗೀತ ಕ್ಯಾಸೆಟ್ ಅಂಗಡಿಯಿಂದ ಖರೀದಿಸಿದ್ದ ಆಡಿಯೋ ಕ್ಯಾಸೆಟ್ "ಪಾಂಡವ ಸ್ವರ್ಗಾರೋಹಣ " ದಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರೊಬ್ಬರು ಭಾಗವತಿಕೆಯನ್ನು ಮಾಡಿದ್ದು ಅದರ ಸವಿಯನ್ನು ತುಂಬಾ ಸಲ ಸವಿದ ಮೇಲೆ ಈ ತಟ್ಟೆಯಿಂದ ಹೊರ ಹೊಮ್ಮುವ ಅರ್ಥಕ್ಕೂ ಆ ಕ್ಯಾಸೆಟ್ ಅರ್ಥಕ್ಕೂ ಎಳ್ಳಷ್ಟು ವೆತ್ಯಾಸವಿಲ್ಲ ಕೇವಲ ಪದಗಳು ಮಾತ್ರ ಬಡಗಿನವು ಅಷ್ಟೇ ಎಂದು ತಿಳಿಯಿತು !

ಬಹಳ ಜಾಣತನದಿಂದ ತೆಂಕಿನ ಪದಗಳನ್ನು ಮಾತ್ರ ಕಿತ್ತು ಹಾಕಿ ಬಡಗಿನ ಪದ್ಯಗಳನ್ನು ಜೋಡಿಸಿ ಮಾರುಕಟ್ಟೆಯಲ್ಲಿ ಬಿಟ್ಟು ಲಾಭ ಪಡೆದ ಕೃತಿ ಚೋರರು ಮಾಡಿದ ಕಿತಾಪತಿ ಇದು ಎಂದು ತಿಳಿದಾಗ ಬಹಳ ವಿಷಾದವೆನಿಸಿತು.

ಇದೇಕೆ ಹೀಗೆ ?
ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರ ಹಾಡು ಅಷ್ಟೊಂದು ಕಳಪೆಯೇ ? ಈಗಿನಂತೆ ಕೇಳಲು ಕರ್ಣ ಕರ್ಕಶವೇ ?
ಖಂಡಿತಾ ಇಲ್ಲ .

ಯಾಕೆಂದರೆ ತೆಂಕಿನ ಗಾನ ಗಂಧರ್ವರೆನಿಸಿದ್ದ ಭಾಗವತರು ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಹಾಡಿದ ಹಾಡು ಅದು. ಹಿರಿಯ ಕಲಾವಿದರೆಲ್ಲ ಒಂದೇ ಉಸಿರಿಗೆ ಸೂಚಿಸುತ್ತಿದ್ದ ಯುವ ಭಾಗವತರಾಗಿದ್ದ ಅವರ ಹಾಡು ಅತ್ಯಂತ ಮನೋಹರವಾಗಿ ಮೂಡಿ ಬಂದ ಕ್ಯಾಸೆಟ್ ಅದು. ಯಾವನೇ ಕಲಾ ರಸಿಕ ಈ ಭಾಗವತರ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಹಾಡಿದ ಕರ್ಣ ಪರ್ವ ಪ್ರಸಂಗದ " ಎಲೆ ಪಾರ್ಥ ನೀ ಕೇಳು ಒಲಿದೆನ್ನ ಮಾತಾ " ಅಥವಾ ಪಟ್ಟಾಭಿಷೇಕ ಪ್ರಸಂಗದ " ವೀರ ದಶರಥ ನೃಪತಿ ಇನ ಕುಲವಾರಿಧಿಗೆ ಚಂದ್ರಮನು ...." ಕೇಳಿದರೆ ಈಗಲೂ ಹುಚ್ಚೆದ್ದು ಕುಣಿಯಬಲ್ಲ ಅದ್ಭುತ ಪ್ರತಿಭೆ ಅದು !

ಹಾಗಿದ್ದರೆ ಬಡಗಿನ ಭಾಗವತರ ಹಾಡು ಅಷ್ಟೊಂದು ಸೊಗಸಾಗಿದೆಯೇ ?
ಖಂಡಿತಾ ಇಲ್ಲ !
ಅವರಂತೂ ಗಡಿಬಿಡಿಗೆ ಮಾಡಿದ ಅಡುಗೆಯಂತೆ ಪದ್ಯಗಳನ್ನು ಹೇಳಿ ಮುಗಿಸಿದ್ದಾರೆ !

ಇರಲಿ ಇದೊಂದಲ್ಲವೇ ಎಂದು ಮುಂದಿನ "ರಣಚಂಡಿ " ತಾಳಮದ್ದಲೆ ಕೇಳ ಹೊರಟರೆ ಮತ್ತದೇ ಕಲಬೆರಕೆ!

ಕ್ಯಾಸೆಟ್ ಕಲಬೆರಕೆ ಮಾಡುವ ಭರದಲ್ಲಿ ಮೂಲ ಭಾಗವತರು ಪಾತ್ರಧಾರಿಯ ಮಾತಿನ ನಡುವೆ ಹೂಂ ಗುಟ್ಟಿದ್ದನ್ನು ತೆಗೆಯಲು ಮರೆತಿದ್ದು ಕೇಳುಗರಿಗೆ ಇದು ಕಲಬೆರಕೆ ಎಂದು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗಿದೆ . ಒಟ್ಟಿನಲ್ಲಿ ಈ ಕಲಬೆರಕೆ ಕ್ಯಾಸೆಟ್ ಕೇಳುವಾಗ ಹೋಳುಗಳಿಲ್ಲದ ಸಾಂಬಾರನ್ನು ಸವಿದ ಅನುಭವ ಆಗುವುದಂತೂ ಖಚಿತ !

ಇಂಥ ಕ್ಯಾಸೆಟ್ ಚೌರ್ಯ ನಿಜಕ್ಕೂ ಖಂಡನೀಯ . ಇದರಿಂದ ನಿಜವಾದ ರಸಾಸ್ವಾದನೆ ಸಿಗದೇ ನಿರಾಶೆಯಾಗುವುದಂತೂ ಖಂಡಿತ .

ಕಲಾ ರಸಿಕರು ಇಂಥ ತಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಉತ್ತಮ .

ನಿಮಗಿಂಥಾ ಅನುಭವ ಆಗಿದೆಯೇ ?

Wednesday, December 9, 2009

ಮೊದಲ ಹವ್ಯಕ ಯಕ್ಷಗಾನ "ದಕ್ಷಾಧ್ವರ "...




ಕರಾವಳಿ ಕರ್ನಾಟಕ ಹಾಗೂ ಕಾಸರಗೋಡು , ಗಡಿನಾಡು ಪ್ರದೇಶಗಲ್ಲಿ ಹೆಚ್ಚಾಗಿಕಂಡುಬರುವ ಬ್ರಾಹ್ಮಣ ಪಂಗಡಗಳಲ್ಲಿ ಹವ್ಯಕರು ಪ್ರಮುಖರು ಪಂಚಾಯತನ ಪೂಜೆಯ ಮೂಲಕ ಪ್ರಕೃತಿಯ ಆರಾಧನೆ, ಹೋಮ ಹವನಾದಿಗಳಲ್ಲಿ ಹವಿಸ್ಸನ್ನು ಅರ್ಪಿಸುವಮೂಲಕ ದೇವತಾ ಸಂತೃಪ್ತಿಯನ್ನು ನಡೆಸುವುದರಿಂದ "ಹವ್ಯಕ"ರೆಂಬ ಹೆಸರು ಪಡೆದವರು ಎಂಬುದು ಹಿರಿಯರಿಂದ ತಿಳಿದುಬರುತ್ತದೆ.ಹವ್ಯಕರ ಆಡುಭಾಷೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ,ಕಾಸರಗೋಡು ಪ್ರದೇಶಗಳಲ್ಲಿ ತುಸು ಭಿನ್ನವಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಹವ್ಯಕ ಸಮುದಾಯದವರ ಕೊಡುಗೆ ಅಪಾರ. ಹಲವಾರು ಶ್ರೇಷ್ಠಕಲಾವಿದರು ಯಕ್ಷಗಾನ ಕಲೆಯನ್ನು ತಮ್ಮ ಪ್ರತಿಭೆಯಿಂದ ಬೆಳಗಿದ್ದಾರೆ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಅವಲೋಕಿಸಿದರೆ ಎಲ್ಲ ಕಲಾವಿದರೂ ಕನ್ನಡ ಭಾಷೆ ಯಾ ತುಳು ಭಾಷೆಯ ಪ್ರಸಂಗಗಳಲ್ಲಿ ಮಿಂಚಿ ಭಾಷಾ ಮಾಧ್ಯಮದ ಮೂಲಕ ತಮ್ಮ ಪ್ರತಿಭಾ ಜ್ಯೋತಿಯನ್ನು ಬೆಳಗಿದ್ದಾರೆ.

ಹವ್ಯಕರಿಗೆ ತಮ್ಮದೇ ಭಾಷೆಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಲಭ್ಯವಿಲ್ಲದ ವಿಚಾರವನ್ನು ಮನಗಂಡ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರ ಮಗ ಶ್ರೀ ವಿಶ್ವ ವಿನೋದ ಬನಾರಿಯವರು ಪ್ರಪ್ರಥಮವಾಗಿ ಹವ್ಯಕ ಆಡು ಭಾಷೆಯಲ್ಲಿ ರಚಿಸಿದ ಪ್ರಸಂಗವೇ ದಕ್ಷಾಧ್ವರ. ಈ ಪ್ರಸಂಗದ ಬಳಿಕ ಅಂಬೇಮೂಲೆ ಗೋವಿಂದ ಭಟ್ಟರು ಕೆಲವಾರು ಹವ್ಯಕ ಪ್ರಸಂಗಗಳನ್ನು ರಚಿಸಿದ್ದಾರೆ.

ಶ್ರೀ ವಿಶ್ವವಿನೋದ ಬನಾರಿಯವರು ಕನ್ನಡ ಭಾಷೆಯಲ್ಲಿರುವ ಬಲು ಪ್ರಸಿದ್ಧ"ಗಿರಿಜಾ ಕಲ್ಯಾಣ" ಪ್ರಸಂಗದ ಮೊದಲ ಸಂಧಿಯನ್ನು " ದಕ್ಷಾಧ್ವರ" ಹವ್ಯಕ ಆಡು ಭಾಷೆಯಲ್ಲಿ ಬರೆದಿದ್ದು ಬಹುತೇಕ ಕನ್ನಡದಲ್ಲಿರುವ ಪದ್ಯಗಳ ತೆರನಂತೆ ಹವ್ಯಕ ಭಾಷೆಯಲ್ಲೂ ಉಳಿಸಿಕೊಂಡು ಪ್ರಸಂಗದ ಒಟ್ಟಂದವನ್ನು ಕಾಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ವ ಸಿದ್ದಾಂತ ಗ್ರಂಥಾಲಯ ಉಡುಪಿಯವರು ಪ್ರಕಟಿಸಿದ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಬರುವ ದಕ್ಷನು ಸತ್ರ ಯಾಗಕ್ಕಾಗಿ ಬರುವಾಗ ದೇವತೆಗಳೆಲ್ಲ ಎದ್ದು ವಂದಿಸಿದರೂ ಈಶ್ವರನು ಸುಮ್ಮನಿರುವುದನ್ನು ಕಂಡು ಕೆರಳಿ ಈಶ್ವರನನ್ನು ಜರೆಯುವಾಗ ಇರುವ ಬಲು ಪ್ರಸಿದ್ದ ಪದ್ಯ " ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ| ಕನ್ನೆಯನಿತ್ತೆ ನಿರರ್ಥ | ಪರಕಿಸಲು ಕೋಡಗನ ಕೈಯ್ಯ ಮಾಲೆಯ ಕೊಟ್ಟ ತೆರನಾದುದಕಟೆನ್ನ ಬದುಕು || .... " ಎಂಬ ಪದವು ಕುಂಬಳೆ ಸೀಮೆ ಹವ್ಯಕ ಭಾಷೆಯಲ್ಲಿ " ಸರಸಿಜಾಸನ ಹೇದ ಮಾತಿಂಗೆ ಮರುಳಾಗಿ | ಅರಡ್ಯದ್ದೆ ಮಗಳಾನು ಕೊಟ್ಟು | ಪರಿಮಳದ ಮಲ್ಲಿಗೆಯ ಮಾಲೆಯಾ ಮಂಗನ ಕೊರಳಿಂಗೆ ಹಾಕಿದಾಂಗಾತು ...." (ಸಾಮಾನ್ಯವಾಗಿ ಈ ಪದವನ್ನು ಹೆಣ್ಣು ಮಗಳನ್ನು ಕೊಟ್ಟ ಮಾವ, ತಮ್ಮ ಅಳಿಯನ ಕುರಿತಾಗಿ ದನಗಳಿಗೆ ಅಕ್ಕಚ್ಚು ಕೊಡುವಾಗ ತಲೆ ಬಿಸಿಯಾಗಿ ಹಾಡುವುದನ್ನು ಕೆಲವೆಡೆ ನಾನು ಕಂಡಿದ್ದೇನೆ!)

ಹಾಗೆಯೇ ಈಶ್ವರನು ದಾಕ್ಷಾಯಿಣಿಗೆ ದಕ್ಷನೇಕೆ ತನ್ನನು ಆಹ್ವಾನಿಸಿಲ್ಲ ಎಂಬುದನ್ನು ವಿವರಿಸುವ " ಒಂದು ದಿವಸ ನಾನು ಕುಳಿತಿರ್ಪ ಸಭೆಗೆ | ಬಂದನು ದಕ್ಷ ನಾನೇಳದ ಬಗೆಗೆ |......." ಪದ್ಯವೂ ಹವ್ಯಕದಲ್ಲಿ " ಒಂದು ದಿನ ಆನು ಕೂದೊಂಡಿದ್ದ ಸಭೆಗೆ | ಬಂದ ದಕ್ಷ ಆನೇಳದ್ದ ಬಗೆಗೆ ...." ಮಧ್ಯಮಾವತಿ ಏಕತಾಳದಲ್ಲಿ ಮೂಲ ಕನ್ನಡದಂತೆಯೇ ಸೊಗಸಾಗಿ ಬರೆದಿದ್ದು ಪಕ್ಕನೆ ಪಾತ್ರಧಾರಿಗೆ ಪ್ರಸಂಗ ನಡೆ ತಪ್ಪದಂತೆ ಅನುಕೂಲವೇ ಆಗಿದೆ.

ಈ ಪ್ರಸಂಗದ ಬಿಡುಗಡೆ ಹಾಗೂ ಮೊದಲ ಪ್ರದರ್ಶನ ನೀರ್ಚಾಲಿನಲ್ಲಿ ನಡೆದ ಅಖಿಲ ಭಾರತ ಹವ್ಯಕ ಸಮ್ಮೇಳನದಲ್ಲಿ ನಡೆದಿತ್ತು. ಶೇಣಿ ಅಜ್ಜನ ಮುನ್ನುಡಿ ಹೊಂದಿರುವ ಈ ಕೃತಿ ಹವ್ಯಕರ ಹೆಮ್ಮೆ ಎಂದರೂ ತಪ್ಪಾಗಲಾರದು .ಹವ್ಯಕ ಕನ್ನಡದ ಭಾಷೆಯ ಸೊಗಡನ್ನು ಸವಿಯಲು ಈ ಪ್ರಸಂಗದ ಧ್ವನಿ ಮುದ್ರಿಕೆಯು ಪದ್ಯಾಣ ಗಣಪತಿ ಭಟ್ಟರ ಕಂಠ ಸಿರಿಯಲ್ಲಿ ಶೇಣಿ ಅಜ್ಜನ ನಿರ್ದೇಶನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆಸಕ್ತರು ಈ ಪ್ರಸಂಗದ ಎಲ್ಲ ಪುಟಗಳಿಗಾಗಿ ಲೇಖಕರನ್ನು ಸಂಪರ್ಕಿಸಬಹುದು. .

***

Tuesday, December 8, 2009

" ದೃಷ್ಟ - ಅದೃಷ್ಟ" ದೊಳಗೊಮ್ಮೆ ಇಣುಕಿದಾಗ .....


ಕೆಲವು ವರ್ಷಗಳ ಹಿಂದೆ ಆರ್ಕುಟ್ ಸಂಪರ್ಕ ಜಾಲದಲ್ಲಿ ಯಕ್ಷಗಾನಾಸಕ್ತರ ಗುಂಪಿನಲ್ಲಿ "ಸಮಾನ ಶೀಲೇಶು ವ್ಯಸನೇಶು ಸಖ್ಯಂ " ಎಂಬಂತೆ ದೃಷ್ಟನಾದ ಮಹೇಶ ಮೊನ್ನೆಯಷ್ಟೇ ನೀಡಿದ ಪುಸ್ತಕ "ದೃಷ್ಟ-ಅದೃಷ್ಟ"ವೆಂಬ ಆತ್ಮ ವೃತ್ತಾಂತವನ್ನು ಸಾದ್ಯಂತವಾಗಿ ಓದಿದಾಗ ಸಹಜವಾಗಿ ಕೆಲವು ಅನಿಸಿಕೆಗಳು ಮನದಲ್ಲಿ ಮೂಡಿದವು. ಅವುಗಳನ್ನು ಲಿಪಿರೂಪಕ್ಕಿಳಿಸಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ.


"ದೃಷ್ಟ-ಅದೃಷ್ಟ " ಎಂಬುದು ಎಲ್ಯಡ್ಕ ಶ್ರೀಯುತ ಈಶ್ವರ ಭಟ್ಟರ ಆತ್ಮವೃತ್ತಾಂತ . ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಶುಭಾವಸರದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಅನಾವರಣಗೊಂಡ ಕೃತಿ ಕುಸುಮ.
ಸುಮಾರು ೧೯೪೦ ರಿಂದ ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮೂಲದ ಕೆಳ ಮಧ್ಯಮ ವರ್ಗದ ಹವ್ಯಕರ ಕುಟುಂಬಗಳ ಆರ್ಥಿಕ , ಸಾಮಾಜಿಕ ಹಾಗೂ ನೈತಿಕ ಜನ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಪುಸ್ತಕದ ಪೂರ್ವಾರ್ಧವಿದ್ದರೆ , ಪ್ರಾಮಾಣಿಕತೆ ,ಕಠಿಣ ದುಡಿಮೆಗೆ ಸಂದ ಪ್ರತಿಫಲವೇನೆಂಬ ಅಂಶವು ಕೊನೆಯ ಭಾಗದಲ್ಲಿ ಜೀವನ ಸಾರ್ಥಕ್ಯದೊಂದಿಗೆ ಉಲ್ಲೇಖಿಸಲಾಗಿದೆ .

ಪುಸ್ತಕದ ಆರಂಭದಲ್ಲಿ ಬಾಲಕ ಈಶ್ವರ ಭಟ್ಟರು ಬಾಲ್ಯದಲ್ಲಿಯೇ ಮಾತೃ ವಿಯೋಗವನ್ನು ಅನುಭವಿಸಿದ ಚಿತ್ರಣ ಮನಕಲಕುವಂತಿದೆ . ಪುಸ್ತಕ ಓದುತ್ತ ಮುಂದೆ ಸಾಗುತ್ತಿದ್ದಂತೆ ಹಳೆಯ ದಶಕಗಳ ಜೀವನ ಶೈಲಿಯ ಚಿತ್ರಣಗಳು ( ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಬದಲಾಗಿ ಮಡಲಿನ ಗೊರಬೆ....ಇತ್ಯಾದಿ ) ಮನೋಮಂಡಲದಲ್ಲಿ ಭಿತ್ತಿ ಚಿತ್ರಗಳಂತೆ ಹಾದುಹೋಗುತ್ತವೆ . ಇದರಿಂದ ನಮ್ಮ ಹಿರಿಯರು ಎಷ್ಟು ಕಷ್ಟ ಸಹಿಷ್ಣುಗಳು , ಅಶಾವಾದಿಗಳೂ , ನಿರಂತರ ಪ್ರಯತ್ನಶೀಲರು ಆಗಿದ್ದುದರಿಂದ ಇಂದಿನ ಯುವ ಪೀಳಿಗೆ ಭದ್ರ ಬುನಾದಿಯ ಮೇಲೆ ಸಮರ್ಥವಾಗಿ ನಿಂತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆಯುಳ್ಳವರನ್ನಾಗಿ ಮಾಡಿದೆ ಎಂದು ತಿಳಿಯುತ್ತದೆ .

ಉದ್ಯಮ ಸಾಹಸಂ ಧೈರ್ಯಂ
ಬುದ್ಧಿ ಶಕ್ತಿ ಪರಾಕ್ರಮ:
ಷಡೇತೇ ಯತ್ರ ವರ್ತಂತೆ
ತತ್ರ ದೈವಂ ಪ್ರಸೀದತಿ

ಎಂಬ ಸೂಕ್ತಿಯಂತೆ ತಮ್ಮ ಜೀವನವೆಂಬ ಉದ್ಯೋಗದಲ್ಲಿ ಸಾಹಸ ಧೈರ್ಯ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಪ್ರವೃತ್ತಿ ಇದ್ದುದರಿಂದ ಕಾಲ ಕಾಲಕ್ಕೆ ದೈವ ಸಹಾಯವೂ ನಾನಾ ಸ್ವರೂಪದಿಂದ ದೊರೆತುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಪಡೆಯಲು ಅವಕಾಶವಾದುದು ಸಂತಸದ ವಿಚಾರ.

ಜೀವನದ ಸಂಕಷ್ಟದ ದಿನಗಳಲ್ಲಿ ಸ್ಥಿತಪ್ರಜ್ಞರಾಗಿ ಸರ್ವ ರೀತಿಯ ಸಮಸ್ಯೆಗಳಿಗೆ ಎದೆಗೊಟ್ಟು ಪ್ರತಿಯೊಂದು ಸನ್ನಿವೇಶಗಳನ್ನು ಅನಿವಾರ್ಯವಾಗಿ ಸವಾಲಾಗಿ ಸ್ವೀಕರಿಸಿ ಅಧ್ಯಾಪಕರಾದ ಶ್ರೀಯುತರು ಬದುಕಿನ ಸಾರ್ಥಕತೆಯನ್ನು ಪ್ರಯತ್ನಶೀಲತೆಯಿಂದ ಸಾಧಿಸಿದ್ದು "ದೃಷ್ಟ -ಅದೃಷ್ಟ "ದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

ಆತ್ಮ ವೃತ್ತಾಂತವನ್ನು ಬರೆಯುವುದು ನಿಜಕ್ಕೂ ಸವಾಲಿನ ಕೆಲಸವೇ . ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು , ತಾನು ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ವಿವಿಧ ಅವಕಾಶರೂಪೀ ಸವಾಲುಗಳನ್ನು ಯಥಾವತ್ತಾಗಿ ನೆನಪಿಸಿಕೊಂಡು ಬರೆಯುವಾಗ ನೇರ ಪ್ರಸ್ತುತಿಯೇ ಸಮಂಜಸವಾದರೂ ಕೆಲವೊಂದು ಕಡೆ ಆಗಿನ ಕಾಲದ ವೈಶಿಷ್ಟ್ಯಗಳು , ಆಚರಣೆಗಳು , ಸಾಂಸ್ಕೃತಿಕ ವಿಚಾರಗಳು ವಿಶೇಷ ಘಟನೆಗಳು ಮತ್ತು ಶಿಕ್ಷಣ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದಲ್ಲಿ ಹೊತ್ತಗೆಯು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ ? ಈ ವಿಚಾರವನ್ನು ಗಮನಿಸಿದಾಗ "ದೃಷ್ಟ -ಅದೃಷ್ಟ " ದಲ್ಲಿ ಏನೋ ಕಳಕೊಂಡ ಅನುಭವ ಯಾ "ಅತೃಪ್ತ " ಭಾವನೆ ಓದುಗನಿಗೆ ಬರದೆ ಇರಲಾರದು .

ಅರುವತ್ತು ವರುಷಗಳ ಸುದೀರ್ಘ ಜೀವನಾನುಭವಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ೬೪ ಪುಟಗಳಲ್ಲಿ ವಿವರಿಸಲು ಕಷ್ಟವೇ ಆದರೂ ಅತ್ಯಂತ ಚೊಕ್ಕವಾಗಿ ಚುಟುಕಾಗಿ ಪ್ರಸ್ತುತ ಪಡಿಸಿದ್ದು ಒಂದು ಈ ಪುಸ್ತಕದ ಉತ್ತಮಾಂಶ . ಸಮೃದ್ಧ ಜೀವನಾನುಭಾವಿಗಳಾದ ಶ್ರೀಯುತ ಈಶ್ವರ ಭಟ್ಟರ "ಜೀವನದ ರಸನಿಮಿಷಗಳ " ಬಗೆಗೆ ಸವಿಸ್ತಾರವಾದ ಪುಸ್ತಕವೊಂದನ್ನು ಹೊರತಂದಲ್ಲಿ ವಾಚಕರಿಗೆ ಮಹದುಪಕಾರವಾಗುತ್ತದೆ.

ಶ್ರೀಯುತರು ಬರೆದ ಟಿಪ್ಪಣಿಗಳನ್ನು ಪುಸ್ತಕ ರೂಪಾಂತರಿಸುವಲ್ಲಿ ಸಹಕರಿಸಿದ ಕು . ಮನೋರಮಾ ಬಿ. ಏನ್. ರವರ ಪರಿಶ್ರಮ , ಲಿಪಿ ಗಣಕೀಕರಿಸಿದ ಕು.ಅಕ್ಷತಾ , ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿಯವರ ಅನುಭವ , ಸುಂದರವಾಗಿ ಮುದ್ರಿಸಿದ ದಿಗಂತ ಮುದ್ರಣಾಲಯದವರ ಕಾರ್ಯ ದಕ್ಷತೆಗಳೆಲ್ಲ ಅಭಿನಂದನೀಯ .
ಒಟ್ಟಿನಲ್ಲಿ ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ ಸಂಗ್ರಹ ಯೋಗ್ಯವಾದ ಮಾಹಿತಿಪೂರ್ಣ ಅನುಭವದ ರಸ ಪಾಕ ಈ "ದೃಷ್ಟ -ಅದೃಷ್ಟ".