Friday, January 1, 2010

ಹಿರಿಯಣ್ಣನಿಗೊಂದು ನುಡಿ ನಮನ .....


ಸುಗಮ ಸಂಗೀತದ ಭೀಷ್ಮ ಅಶ್ವಥ್ ರವರು ಅಸ್ವಸ್ಥರಾಗಿದ್ದರೆಂದು ತಿಳಿದಾಗಲೇ ಮನಸ್ಸೇಕೋ ಮ್ಲಾನವಾಗಿತ್ತು . ಒಂದು ದೊಡ್ಡ ಅಶ್ವತ್ಥ ಮರದಂತೆ ಬೆಳೆದು ವಿಶಾಲವಾದ ವ್ಯಕ್ತಿತ್ವ ರೂಪಿಸಿದ್ದ ಮುಗ್ಧ ಮನಸಿನ ಹಿರಿಯ ಅಣ್ಣನಂತಿದ್ದ ಅವರ ನಿಧನ ನಿಜಕ್ಕೂ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತವನ್ನೇ ಸೃಷ್ಟಿಸಿದೆ .



ಅತ್ಯಂತ ಭಾವಪೂರ್ಣವಾಗಿ ಹಾಡುವ ಇವರ ರೆ ರೇ ರಾ.... ಆಲಾಪನೆ ಕೇಳುವುದೇ ಸೊಗಸು. ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹಾಗೆ ನೆಲೆ ನಿಂತಿರುವ ಸ್ವರ ಮಾಂತ್ರಿಕ ಜೀವನ ಯಾತ್ರೆ ಮುಗಿಸಿ ಪರಮಾತ್ಮನಲ್ಲಿ ಲೀನವಾದರೂ ಸಂಗೀತ ರಸಿಕರ ಮನದಲ್ಲಿ ಸದಾ ಚಿರಂಜೀವಿಯಾಗಿರುವ ಇವರು ಮತ್ತೆ ಉದಿಸಿ ಬರಲಿ ಎಂಬುದು ನಮ್ಮ ಹಾರೈಕೆ.

ಶಿಶುನಾಳ ಷರೀಪರ ಹಾಡುಗಳನ್ನು ಕೇಳಬೇಕು ಎಂದಿದ್ದರೆ ಅದು ಶ್ರೀಯುತ ಅಶ್ವಥ್ ರವರ ದನಿಯಲ್ಲೇ ಕೇಳಬೇಕು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರ ಆತ್ಮ ವಿಶ್ವಾತ್ಮಕನಲ್ಲಿ ಲೀನವಾಗಿದ್ದರೂ ಅವರ ಹಾಡುಗಳ ಮೂಲಕ ಎಲ್ಲರಿಗೂ ಸದಾ ಸ್ಪೂರ್ತಿಯಾಗಿ ನಮ್ಮ ನಡುವೆ ಚಿರಕಾಲ ಜೀವಂತವಾಗಿರುವ ಮಹಾ ಚೇತನ ಶ್ರೀಯುತ ಅಶ್ವಥ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

3 comments:

Keshava said...

ಸಿ ಅಶ್ವಥ್ ಎಂದಾಕ್ಷಣ ಮನಸಲ್ಲಿ ಹೊಳೆಯುವುದು "ಕನ್ನಡವೇ ಸತ್ಯ". ಕನ್ನಡವೇ ಸತ್ಯ ದ ಪ್ರಥಮ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ (ಅರಮನೆ ಮೈದಾನದಲ್ಲಿ)ಅಲ್ಲಿ ಸೇರಿದ್ದ ಜನಸಾಗರವೇ ಸಾಕ್ಷಿ ಅಶ್ವಥ್ ಅವರ ಜನಪ್ರಿಯತೆಗೆ. ಕರ್ನಾಟಕದಲ್ಲಿ ಸುಗಮ ಸಂಗೀತವನ್ನು ಪೋಷಿಸಿ ಬೆಳೆಸಿದ ಅದ್ಭುತ ಶಕ್ತಿ. ಸರಳ ಜೀವಿ, ಮುಂಗೋಪಿ ಆದರೂ ಕೆಟ್ಟ ಮನುಷ್ಯ ಎನ್ನುವ ಯೋಚನೆಯೂ ಮನದಲ್ಲಿ ಮೂಡದಂತಹ ವ್ಯಕ್ತಿತ್ವ. ಮೈಸೂರು ಅನಂತ ಸ್ವಾಮಿ, ಕುವೆಂಪು, ಶಿಶುನಾಳ ಶರೀಫ ಹೀಗೆ ಹಲವಾರು ಪ್ರಸಿಧ್ಧ ಕವಿಗಳ ಸಾಹಿತ್ಯಕ್ಕೆ ಜೀವ ಕೊಟ್ಟ ಅಶ್ವಥ್ ಇಂದು ನಮ್ಮೊಂದಿಗಿಲ್ಲ ಎನ್ನುವ ವಾಸ್ತವ ನಂಬಲು ಅಸಾಧ್ಯ. ಕರ್ನಾಟಕದ ಸುಗಮ ಸಂಗೀತ ಕ್ಷೇತ್ರ ನಿಜವಾಗಿಯೂ ಅವರ ಆಗಲುವಿಕೆಯಿಂದ ಬಡವಾಗಿದೆ. ಪರಮಾತ್ಮ ಅವರಿಗಿ ಸದ್ಗತಿ, ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಶ್ರೇಯಸ್ಸು ನೀಡಲಿ ಎಂದು ಆಶಿಸುತ್ತೇನೆ.

YAKSHA CHINTANA said...

ಇವರ ಸ್ವರದಲ್ಲಿ ಸೆಳೆತವಿದೆ, ಭಾವನೆಯ ತುಡಿತವಿದೆ, ಭಾವನೆಯ ಬೇರು ಮನಸ್ಸಿನಾಳದವರೆಗೂ ಕೋರೆ ಕೊರೆದು ಭಾವನೆಯ ಮೂರ್ಧನ್ಯವನ್ನು ಮುಟ್ಟುತ್ತದೆ, ಇಂದಿನ ಅಬ್ಬರದ ಪಾಶ್ಚಾತ್ಯ ಹೊಡಿ ಬಡಿ ಸಂಗೀತದ ಮಾಧ್ಯೆ ಸ್ವರಲೋಕವನ್ನು ಆಳಿದ ಈ ಚಕ್ರವರ್ತಿ ಶ್ರುತಿ ಮೀಟಿದ ತಂಬೂರಿಯನ್ನು ಕೆಳಗಿಟ್ಟು ತಂಬೂರಿಯ ಝೇಂಕಾರವನ್ನು ಅಜರಾಮರಗೊಳಿಸಿ ಕಣ್ಮರೆಯಾದ.

Anonymous said...

we lost one of the Great artist...
may his soul rest in peace