Wednesday, February 10, 2010

ವಿಪಂಚಿ ಬಳಗದ ಪಂಚವೀಣೆ ....


ಸಂಗೀತ ಪರಿಕರಗಳಲ್ಲಿ ಅಪೂರ್ವವೆನಿಸಿದ ತಂತಿ ವಾದ್ಯವಾದ ವೀಣಾವಾದನ ಕಾರ್ಯಕ್ರಮ ಆಸ್ವಾದಿಸಲು ಸಿಗುವುದು ಸಂಗೀತ ರಸಿಕರಿಗೆ ಅಪರೂಪ . ಅದರಲ್ಲೂ ಐದು ಮಂದಿ ಏಕ ಕಾಲದಲ್ಲಿ ವೀಣಾವಾದನ ನಡೆಸಿಕೊಡುವುದಂತೂ ತೀರಾ ವಿರಳ . ಇಂಥ ಅಪೂರ್ವವಾದ ವೀಣಾವಾದನ ಕಾರ್ಯಕ್ರಮವನ್ನು ಸವಿಯುವ ಅವಕಾಶವೊಂದು ಸಿಕ್ಕಿದ್ದು ನನಗೆ ಬಲು ಸಂತಸವುಂಟು ಮಾಡಿತ್ತು.


. "ವಿಪಂಚಿ" ಎಂದರೆ ವಿಧ್ಯಾಧಿದೇವತೆಯಾದ ಸರಸ್ವತಿ ದೇವಿಯ ವೀಣೆಯ ಹೆಸರು. ಇದರಿಂದಲೇ "ವೀಣಾಪಾಣಿ ಮಾತೆ ..." ಎಂಬುದಾಗಿ ಶಾರದಾದೇವಿ ಪ್ರಸಿದ್ಧಳು. ಬಹಳ ಮಂದಿಗೆ ಚಿರಪರಿಚಿತವಾಗಿರುವ "ವರವೀಣಾ ಮೃದು ಪಾಣಿ ವನರುಹಲೋಚನ ರಾಣಿ ...." ಪದ್ಯದಲ್ಲಿ ಬರುವುದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿ ತನ್ನ ಕರಗಳಲ್ಲಿ ಹಿಡಿದಿರುವ "ವರವೀಣಾ " ನಾಮಕ ವೀಣೆಯ ಬಗ್ಗೆ ಎಂಬ ವಿಚಾರ ಕುತೂಹಲಕರ ವಿಷಯವೇ.


ಇತ್ತೀಚಿಗೆ ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕದ ಮುದ್ದುಮಂದಿರದಲ್ಲಿ ಅಂತರಾಷ್ಟ್ರೀಯ ಸಸ್ಯ ವಿಜ್ಞಾನಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರ "ಭೀಮರಥ ಶಾಂತಿ " ಸಂಭ್ರಮಾವಸರದಲ್ಲಿ ಕಿರು ಪಂಚವೀಣಾವಾದನ ಕಛೇರಿಯನ್ನು ಮಣಿಪಾಲದ ಶ್ರೀಮತಿ ಪವನಾ ಬಿ. ಆಚಾರ್ಯರ ನೇತೃತ್ವದ "ವಿಪಂಚಿ" ಬಳಗ ಅಂದವಾಗಿ ನಡೆಸಿ ಕೊಟ್ಟು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು. ಇದುವರೆಗೆ ದೇಶದ ನಾನಾ ಭಾಗಗಳಲ್ಲಿ ಹಲವು ಯಶಸ್ವೀ ಕಾರ್ಯಕ್ರಮ ನಡೆಸಿ ಕೊಟ್ಟ ಈ ತಂಡವು ಸಿಕ್ಕ ಸಮಯಾವಕಾಶದ ಮಿತಿಯಲ್ಲಿ ಚೊಕ್ಕದಾಗಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೆ ..." ಕೃತಿಯಿಂದ ಆರಂಭಗೊಂಡು ಸಾದಿಂಚಿನೆ , ಲಿಂಗಾಷ್ಟಕವೆ ಮೊದಲಾದ ಕೃತಿಗಳಿಂದ ಮುಂದುವರಿದು ಶ್ರೀರಾಗದ ಭಾಗ್ಯದ ಲಕ್ಷ್ಮಿ.. ಕೃತಿಯೊಂದಿಗೆ ಸಮಾಪ್ತಿಗೊಂಡಿತು . ಸುಮಾರು ೫೨ ನಿಮಿಷಗಳ ಈ ಕಾರ್ಯಕ್ರಮ ಬಹಳ ಶಿಸ್ತುಬದ್ಧವಾಗಿ ಮೂಡಿ ಬಂದಿದ್ದು ಕಲಾವಿದರ ಸಾಧನಾ ಪರಿಶ್ರಮವು ಅಭಿನಂದನೀಯ.

***

Friday, January 1, 2010

ಹಿರಿಯಣ್ಣನಿಗೊಂದು ನುಡಿ ನಮನ .....


ಸುಗಮ ಸಂಗೀತದ ಭೀಷ್ಮ ಅಶ್ವಥ್ ರವರು ಅಸ್ವಸ್ಥರಾಗಿದ್ದರೆಂದು ತಿಳಿದಾಗಲೇ ಮನಸ್ಸೇಕೋ ಮ್ಲಾನವಾಗಿತ್ತು . ಒಂದು ದೊಡ್ಡ ಅಶ್ವತ್ಥ ಮರದಂತೆ ಬೆಳೆದು ವಿಶಾಲವಾದ ವ್ಯಕ್ತಿತ್ವ ರೂಪಿಸಿದ್ದ ಮುಗ್ಧ ಮನಸಿನ ಹಿರಿಯ ಅಣ್ಣನಂತಿದ್ದ ಅವರ ನಿಧನ ನಿಜಕ್ಕೂ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತವನ್ನೇ ಸೃಷ್ಟಿಸಿದೆ .



ಅತ್ಯಂತ ಭಾವಪೂರ್ಣವಾಗಿ ಹಾಡುವ ಇವರ ರೆ ರೇ ರಾ.... ಆಲಾಪನೆ ಕೇಳುವುದೇ ಸೊಗಸು. ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹಾಗೆ ನೆಲೆ ನಿಂತಿರುವ ಸ್ವರ ಮಾಂತ್ರಿಕ ಜೀವನ ಯಾತ್ರೆ ಮುಗಿಸಿ ಪರಮಾತ್ಮನಲ್ಲಿ ಲೀನವಾದರೂ ಸಂಗೀತ ರಸಿಕರ ಮನದಲ್ಲಿ ಸದಾ ಚಿರಂಜೀವಿಯಾಗಿರುವ ಇವರು ಮತ್ತೆ ಉದಿಸಿ ಬರಲಿ ಎಂಬುದು ನಮ್ಮ ಹಾರೈಕೆ.

ಶಿಶುನಾಳ ಷರೀಪರ ಹಾಡುಗಳನ್ನು ಕೇಳಬೇಕು ಎಂದಿದ್ದರೆ ಅದು ಶ್ರೀಯುತ ಅಶ್ವಥ್ ರವರ ದನಿಯಲ್ಲೇ ಕೇಳಬೇಕು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರ ಆತ್ಮ ವಿಶ್ವಾತ್ಮಕನಲ್ಲಿ ಲೀನವಾಗಿದ್ದರೂ ಅವರ ಹಾಡುಗಳ ಮೂಲಕ ಎಲ್ಲರಿಗೂ ಸದಾ ಸ್ಪೂರ್ತಿಯಾಗಿ ನಮ್ಮ ನಡುವೆ ಚಿರಕಾಲ ಜೀವಂತವಾಗಿರುವ ಮಹಾ ಚೇತನ ಶ್ರೀಯುತ ಅಶ್ವಥ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

Wednesday, December 23, 2009

ಕ್ಯಾಸೆಟ್ ಚೌರ್ಯ !

ಒಬ್ಬ ರಚಿಸಿದ ಯಾವುದೇ ಕೃತಿಯನ್ನು ಯಥಾವತ್ ಯಾ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಭಟ್ಟಿ ಇಳಿಸಿದರೆ ಅದನ್ನು ಕೃತಿ ಚೌರ್ಯ ಎನ್ನುತ್ತಾರೆ. ಕೆಲವರಂತೂ ಇತ್ತೀಚಿಗೆ ರಾಜಾರೋಷವಾಗಿ "ಇಂಥ ಕಡೆಯಿಂದ ಕದ್ದದ್ದು " ಎಂದು ತಮ್ಮ ಚೋರತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೆಸರುವಾಸಿಯಾಗ ಬಯಸಿದರೆ ಇನ್ನು ಕೆಲವರು ಕೇವಲ ಹಣ ಸಂಪಾದನೆಯೇ ಗುರಿಯಾಗಿಸಿ ಕೃತಿ ಚೌರ್ಯ ಮಾಡುವುದು ಕಂಡುಬರುತ್ತದೆ.ಕೃತಿ ಚೌರ್ಯ ಮಾಡುವುದು ಕಾನೂನು ರೀತ್ಯಾ ಅಪರಾಧ. ಇಂಥ ಕೆಟ್ಟ ಚಾಳಿಯೂ ನಿಜವಾದ ಕೃತಿಕಾರನಿಗೆ ಹಲವು ರೀತಿಯ ನಷ್ಟವನ್ನು ಉಂಟುಮಾಡುತ್ತದೆ .ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕೃತಿ ಚೌರ್ಯ ಇಂದು ವ್ಯಾಪಕವಾಗಿರುವುದು ವಿಷಾದನೀಯ. ನಿಜವಾದ ಪ್ರತಿಭೆ ಇದ್ದಲ್ಲಿ ಇಂಥ ದುರ್ಧೆಸೆಗೆ ಯಾವೊಬ್ಬನೂ ಇಳಿಯುವುದು ಹಿತಕರವಲ್ಲ .

ಇಲ್ಲಿ ನಾನು ಹೇಳಹೊರಟಿರುವುದು ಕೃತಿ ಚೌರ್ಯದ ಒಂದು ರೂಪವಾದ ಧ್ವನಿಮುದ್ರಿಕೆಗಳ ಚೋರತನದ ಬಗ್ಗೆ !

ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೀಕ್ಷಣೆಗೆ ಹೋಗಿದ್ದಾಗ ಧ್ವನಿಮುದ್ರಿಕೆಗಳ ತಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಅಪೂರ್ವವೆನಿಸಿದ ಕೆಲವು ಪ್ರಸಂಗಗಳ ತಟ್ಟೆಯೊಂದನ್ನು ಗಮನಿಸಿದಾಗ ಅದರಲ್ಲಿ ಮುದ್ರಿತವಾಗಿರುವಂತೆ "ಪಾಂಡವಸ್ವರ್ಗಾರೋಹಣ ", "ರಣಚಂಡಿ ", "ವಿಷಮ ದಾಂಪತ್ಯ " ಇತ್ಯಾದಿ ಎಂಟು ಪ್ರಸಂಗಗಳಿರುವ ಒಂದು ಅಪೂರ್ವ ಸಂಗ್ರಹವೆಂದೂ ಹಿಮ್ಮೇಳದಲ್ಲಿ ಬಡಗುತಿಟ್ಟಿನ ಭಾಗವತ ವಿದ್ವಾನ್ ಒಬ್ಬರು ಈ ಎಲ್ಲ ಪ್ರಸಂಗಗಳಲ್ಲೂ ಭಾಗವತರೆಂದೂ , ಮುಮ್ಮೆಳದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳಾದ ಶೇಣಿ, ಕುಂಬಳೆ, ನಯನ ಕುಮಾರ್,ಕೆ.ಗೋವಿಂದ ಭಟ್ ಎಂದೂ ಪಟ್ಟಿಯಲ್ಲಿ ಪ್ರಕಟಿಸಿದ್ದು ಸಹಜವಾಗಿ ಕುತೂಹಲ ಹುಟ್ಟಿಸುವ ವಿಚಾರವಾದುದರಿಂದ ಕೂಡಲೇ ಹಣ ತೆತ್ತು ಖರೀದಿಸಿದೆ .

ಮನೆಗೆ ಮರಳಿ ಹೊಸತಾಗಿ ಖರೀದಿಸಿದ ತಟ್ಟೆಯನ್ನು ಆಲಿಸಬೇಕೆಂದು ಆರಂಭಿಸಿದಾಗ ಮೊದಲಿಗೆ "ಇದನ್ನೆಲ್ಲಿಯೋ ಕೇಳಿದ್ದೆನಲ್ಲಾ? " ಎಂಬ ಗುಮಾನಿ ಹುಟ್ಟಿಕೊಂಡಿತು . ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಶೇಣಿಯವರ ಧರ್ಮರಾಯ ಹಾಗೂ ನಯನ ಕುಮಾರರ ಕೃಷಿಕ ಸಿದ್ಧನ ಪಾತ್ರದ ಸಂಭಾಷಣೆ ಕೇಳುತ್ತಿದ್ದಂತೆ ನನ್ನ ಸಂದೇಹವೆಲ್ಲ ಮಾಯವಾಗಿ ಇದು ಅದುವೇ! ಎಂದು ಸ್ಪಷ್ಟವಾಯಿತು . ನಾನು ೨೦೦೧ ರಲ್ಲಿ ಸುಳ್ಯದ ಸಂಗೀತ ಕ್ಯಾಸೆಟ್ ಅಂಗಡಿಯಿಂದ ಖರೀದಿಸಿದ್ದ ಆಡಿಯೋ ಕ್ಯಾಸೆಟ್ "ಪಾಂಡವ ಸ್ವರ್ಗಾರೋಹಣ " ದಲ್ಲಿ ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರೊಬ್ಬರು ಭಾಗವತಿಕೆಯನ್ನು ಮಾಡಿದ್ದು ಅದರ ಸವಿಯನ್ನು ತುಂಬಾ ಸಲ ಸವಿದ ಮೇಲೆ ಈ ತಟ್ಟೆಯಿಂದ ಹೊರ ಹೊಮ್ಮುವ ಅರ್ಥಕ್ಕೂ ಆ ಕ್ಯಾಸೆಟ್ ಅರ್ಥಕ್ಕೂ ಎಳ್ಳಷ್ಟು ವೆತ್ಯಾಸವಿಲ್ಲ ಕೇವಲ ಪದಗಳು ಮಾತ್ರ ಬಡಗಿನವು ಅಷ್ಟೇ ಎಂದು ತಿಳಿಯಿತು !

ಬಹಳ ಜಾಣತನದಿಂದ ತೆಂಕಿನ ಪದಗಳನ್ನು ಮಾತ್ರ ಕಿತ್ತು ಹಾಕಿ ಬಡಗಿನ ಪದ್ಯಗಳನ್ನು ಜೋಡಿಸಿ ಮಾರುಕಟ್ಟೆಯಲ್ಲಿ ಬಿಟ್ಟು ಲಾಭ ಪಡೆದ ಕೃತಿ ಚೋರರು ಮಾಡಿದ ಕಿತಾಪತಿ ಇದು ಎಂದು ತಿಳಿದಾಗ ಬಹಳ ವಿಷಾದವೆನಿಸಿತು.

ಇದೇಕೆ ಹೀಗೆ ?
ತೆಂಕು ತಿಟ್ಟಿನ ಪ್ರಖ್ಯಾತ ಮನೆತನದ ಭಾಗವತರ ಹಾಡು ಅಷ್ಟೊಂದು ಕಳಪೆಯೇ ? ಈಗಿನಂತೆ ಕೇಳಲು ಕರ್ಣ ಕರ್ಕಶವೇ ?
ಖಂಡಿತಾ ಇಲ್ಲ .

ಯಾಕೆಂದರೆ ತೆಂಕಿನ ಗಾನ ಗಂಧರ್ವರೆನಿಸಿದ್ದ ಭಾಗವತರು ತಮ್ಮ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ಹಾಡಿದ ಹಾಡು ಅದು. ಹಿರಿಯ ಕಲಾವಿದರೆಲ್ಲ ಒಂದೇ ಉಸಿರಿಗೆ ಸೂಚಿಸುತ್ತಿದ್ದ ಯುವ ಭಾಗವತರಾಗಿದ್ದ ಅವರ ಹಾಡು ಅತ್ಯಂತ ಮನೋಹರವಾಗಿ ಮೂಡಿ ಬಂದ ಕ್ಯಾಸೆಟ್ ಅದು. ಯಾವನೇ ಕಲಾ ರಸಿಕ ಈ ಭಾಗವತರ ವೃತ್ತಿ ಜೀವನದ ಉತ್ತುಂಗ ಸ್ಥಿತಿಯಲ್ಲಿ ಹಾಡಿದ ಕರ್ಣ ಪರ್ವ ಪ್ರಸಂಗದ " ಎಲೆ ಪಾರ್ಥ ನೀ ಕೇಳು ಒಲಿದೆನ್ನ ಮಾತಾ " ಅಥವಾ ಪಟ್ಟಾಭಿಷೇಕ ಪ್ರಸಂಗದ " ವೀರ ದಶರಥ ನೃಪತಿ ಇನ ಕುಲವಾರಿಧಿಗೆ ಚಂದ್ರಮನು ...." ಕೇಳಿದರೆ ಈಗಲೂ ಹುಚ್ಚೆದ್ದು ಕುಣಿಯಬಲ್ಲ ಅದ್ಭುತ ಪ್ರತಿಭೆ ಅದು !

ಹಾಗಿದ್ದರೆ ಬಡಗಿನ ಭಾಗವತರ ಹಾಡು ಅಷ್ಟೊಂದು ಸೊಗಸಾಗಿದೆಯೇ ?
ಖಂಡಿತಾ ಇಲ್ಲ !
ಅವರಂತೂ ಗಡಿಬಿಡಿಗೆ ಮಾಡಿದ ಅಡುಗೆಯಂತೆ ಪದ್ಯಗಳನ್ನು ಹೇಳಿ ಮುಗಿಸಿದ್ದಾರೆ !

ಇರಲಿ ಇದೊಂದಲ್ಲವೇ ಎಂದು ಮುಂದಿನ "ರಣಚಂಡಿ " ತಾಳಮದ್ದಲೆ ಕೇಳ ಹೊರಟರೆ ಮತ್ತದೇ ಕಲಬೆರಕೆ!

ಕ್ಯಾಸೆಟ್ ಕಲಬೆರಕೆ ಮಾಡುವ ಭರದಲ್ಲಿ ಮೂಲ ಭಾಗವತರು ಪಾತ್ರಧಾರಿಯ ಮಾತಿನ ನಡುವೆ ಹೂಂ ಗುಟ್ಟಿದ್ದನ್ನು ತೆಗೆಯಲು ಮರೆತಿದ್ದು ಕೇಳುಗರಿಗೆ ಇದು ಕಲಬೆರಕೆ ಎಂದು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗಿದೆ . ಒಟ್ಟಿನಲ್ಲಿ ಈ ಕಲಬೆರಕೆ ಕ್ಯಾಸೆಟ್ ಕೇಳುವಾಗ ಹೋಳುಗಳಿಲ್ಲದ ಸಾಂಬಾರನ್ನು ಸವಿದ ಅನುಭವ ಆಗುವುದಂತೂ ಖಚಿತ !

ಇಂಥ ಕ್ಯಾಸೆಟ್ ಚೌರ್ಯ ನಿಜಕ್ಕೂ ಖಂಡನೀಯ . ಇದರಿಂದ ನಿಜವಾದ ರಸಾಸ್ವಾದನೆ ಸಿಗದೇ ನಿರಾಶೆಯಾಗುವುದಂತೂ ಖಂಡಿತ .

ಕಲಾ ರಸಿಕರು ಇಂಥ ತಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಉತ್ತಮ .

ನಿಮಗಿಂಥಾ ಅನುಭವ ಆಗಿದೆಯೇ ?

Wednesday, December 9, 2009

ಮೊದಲ ಹವ್ಯಕ ಯಕ್ಷಗಾನ "ದಕ್ಷಾಧ್ವರ "...




ಕರಾವಳಿ ಕರ್ನಾಟಕ ಹಾಗೂ ಕಾಸರಗೋಡು , ಗಡಿನಾಡು ಪ್ರದೇಶಗಲ್ಲಿ ಹೆಚ್ಚಾಗಿಕಂಡುಬರುವ ಬ್ರಾಹ್ಮಣ ಪಂಗಡಗಳಲ್ಲಿ ಹವ್ಯಕರು ಪ್ರಮುಖರು ಪಂಚಾಯತನ ಪೂಜೆಯ ಮೂಲಕ ಪ್ರಕೃತಿಯ ಆರಾಧನೆ, ಹೋಮ ಹವನಾದಿಗಳಲ್ಲಿ ಹವಿಸ್ಸನ್ನು ಅರ್ಪಿಸುವಮೂಲಕ ದೇವತಾ ಸಂತೃಪ್ತಿಯನ್ನು ನಡೆಸುವುದರಿಂದ "ಹವ್ಯಕ"ರೆಂಬ ಹೆಸರು ಪಡೆದವರು ಎಂಬುದು ಹಿರಿಯರಿಂದ ತಿಳಿದುಬರುತ್ತದೆ.ಹವ್ಯಕರ ಆಡುಭಾಷೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ,ಕಾಸರಗೋಡು ಪ್ರದೇಶಗಳಲ್ಲಿ ತುಸು ಭಿನ್ನವಾಗಿದೆ.

ಯಕ್ಷಗಾನ ಕ್ಷೇತ್ರಕ್ಕೆ ಹವ್ಯಕ ಸಮುದಾಯದವರ ಕೊಡುಗೆ ಅಪಾರ. ಹಲವಾರು ಶ್ರೇಷ್ಠಕಲಾವಿದರು ಯಕ್ಷಗಾನ ಕಲೆಯನ್ನು ತಮ್ಮ ಪ್ರತಿಭೆಯಿಂದ ಬೆಳಗಿದ್ದಾರೆ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಅವಲೋಕಿಸಿದರೆ ಎಲ್ಲ ಕಲಾವಿದರೂ ಕನ್ನಡ ಭಾಷೆ ಯಾ ತುಳು ಭಾಷೆಯ ಪ್ರಸಂಗಗಳಲ್ಲಿ ಮಿಂಚಿ ಭಾಷಾ ಮಾಧ್ಯಮದ ಮೂಲಕ ತಮ್ಮ ಪ್ರತಿಭಾ ಜ್ಯೋತಿಯನ್ನು ಬೆಳಗಿದ್ದಾರೆ.

ಹವ್ಯಕರಿಗೆ ತಮ್ಮದೇ ಭಾಷೆಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಲಭ್ಯವಿಲ್ಲದ ವಿಚಾರವನ್ನು ಮನಗಂಡ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟರ ಮಗ ಶ್ರೀ ವಿಶ್ವ ವಿನೋದ ಬನಾರಿಯವರು ಪ್ರಪ್ರಥಮವಾಗಿ ಹವ್ಯಕ ಆಡು ಭಾಷೆಯಲ್ಲಿ ರಚಿಸಿದ ಪ್ರಸಂಗವೇ ದಕ್ಷಾಧ್ವರ. ಈ ಪ್ರಸಂಗದ ಬಳಿಕ ಅಂಬೇಮೂಲೆ ಗೋವಿಂದ ಭಟ್ಟರು ಕೆಲವಾರು ಹವ್ಯಕ ಪ್ರಸಂಗಗಳನ್ನು ರಚಿಸಿದ್ದಾರೆ.

ಶ್ರೀ ವಿಶ್ವವಿನೋದ ಬನಾರಿಯವರು ಕನ್ನಡ ಭಾಷೆಯಲ್ಲಿರುವ ಬಲು ಪ್ರಸಿದ್ಧ"ಗಿರಿಜಾ ಕಲ್ಯಾಣ" ಪ್ರಸಂಗದ ಮೊದಲ ಸಂಧಿಯನ್ನು " ದಕ್ಷಾಧ್ವರ" ಹವ್ಯಕ ಆಡು ಭಾಷೆಯಲ್ಲಿ ಬರೆದಿದ್ದು ಬಹುತೇಕ ಕನ್ನಡದಲ್ಲಿರುವ ಪದ್ಯಗಳ ತೆರನಂತೆ ಹವ್ಯಕ ಭಾಷೆಯಲ್ಲೂ ಉಳಿಸಿಕೊಂಡು ಪ್ರಸಂಗದ ಒಟ್ಟಂದವನ್ನು ಕಾಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ವ ಸಿದ್ದಾಂತ ಗ್ರಂಥಾಲಯ ಉಡುಪಿಯವರು ಪ್ರಕಟಿಸಿದ ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಬರುವ ದಕ್ಷನು ಸತ್ರ ಯಾಗಕ್ಕಾಗಿ ಬರುವಾಗ ದೇವತೆಗಳೆಲ್ಲ ಎದ್ದು ವಂದಿಸಿದರೂ ಈಶ್ವರನು ಸುಮ್ಮನಿರುವುದನ್ನು ಕಂಡು ಕೆರಳಿ ಈಶ್ವರನನ್ನು ಜರೆಯುವಾಗ ಇರುವ ಬಲು ಪ್ರಸಿದ್ದ ಪದ್ಯ " ಸರಸಿಜಾಸನನೆಂದ ನುಡಿಗೆ ನಾ ಮರುಳಾಗಿ| ಕನ್ನೆಯನಿತ್ತೆ ನಿರರ್ಥ | ಪರಕಿಸಲು ಕೋಡಗನ ಕೈಯ್ಯ ಮಾಲೆಯ ಕೊಟ್ಟ ತೆರನಾದುದಕಟೆನ್ನ ಬದುಕು || .... " ಎಂಬ ಪದವು ಕುಂಬಳೆ ಸೀಮೆ ಹವ್ಯಕ ಭಾಷೆಯಲ್ಲಿ " ಸರಸಿಜಾಸನ ಹೇದ ಮಾತಿಂಗೆ ಮರುಳಾಗಿ | ಅರಡ್ಯದ್ದೆ ಮಗಳಾನು ಕೊಟ್ಟು | ಪರಿಮಳದ ಮಲ್ಲಿಗೆಯ ಮಾಲೆಯಾ ಮಂಗನ ಕೊರಳಿಂಗೆ ಹಾಕಿದಾಂಗಾತು ...." (ಸಾಮಾನ್ಯವಾಗಿ ಈ ಪದವನ್ನು ಹೆಣ್ಣು ಮಗಳನ್ನು ಕೊಟ್ಟ ಮಾವ, ತಮ್ಮ ಅಳಿಯನ ಕುರಿತಾಗಿ ದನಗಳಿಗೆ ಅಕ್ಕಚ್ಚು ಕೊಡುವಾಗ ತಲೆ ಬಿಸಿಯಾಗಿ ಹಾಡುವುದನ್ನು ಕೆಲವೆಡೆ ನಾನು ಕಂಡಿದ್ದೇನೆ!)

ಹಾಗೆಯೇ ಈಶ್ವರನು ದಾಕ್ಷಾಯಿಣಿಗೆ ದಕ್ಷನೇಕೆ ತನ್ನನು ಆಹ್ವಾನಿಸಿಲ್ಲ ಎಂಬುದನ್ನು ವಿವರಿಸುವ " ಒಂದು ದಿವಸ ನಾನು ಕುಳಿತಿರ್ಪ ಸಭೆಗೆ | ಬಂದನು ದಕ್ಷ ನಾನೇಳದ ಬಗೆಗೆ |......." ಪದ್ಯವೂ ಹವ್ಯಕದಲ್ಲಿ " ಒಂದು ದಿನ ಆನು ಕೂದೊಂಡಿದ್ದ ಸಭೆಗೆ | ಬಂದ ದಕ್ಷ ಆನೇಳದ್ದ ಬಗೆಗೆ ...." ಮಧ್ಯಮಾವತಿ ಏಕತಾಳದಲ್ಲಿ ಮೂಲ ಕನ್ನಡದಂತೆಯೇ ಸೊಗಸಾಗಿ ಬರೆದಿದ್ದು ಪಕ್ಕನೆ ಪಾತ್ರಧಾರಿಗೆ ಪ್ರಸಂಗ ನಡೆ ತಪ್ಪದಂತೆ ಅನುಕೂಲವೇ ಆಗಿದೆ.

ಈ ಪ್ರಸಂಗದ ಬಿಡುಗಡೆ ಹಾಗೂ ಮೊದಲ ಪ್ರದರ್ಶನ ನೀರ್ಚಾಲಿನಲ್ಲಿ ನಡೆದ ಅಖಿಲ ಭಾರತ ಹವ್ಯಕ ಸಮ್ಮೇಳನದಲ್ಲಿ ನಡೆದಿತ್ತು. ಶೇಣಿ ಅಜ್ಜನ ಮುನ್ನುಡಿ ಹೊಂದಿರುವ ಈ ಕೃತಿ ಹವ್ಯಕರ ಹೆಮ್ಮೆ ಎಂದರೂ ತಪ್ಪಾಗಲಾರದು .ಹವ್ಯಕ ಕನ್ನಡದ ಭಾಷೆಯ ಸೊಗಡನ್ನು ಸವಿಯಲು ಈ ಪ್ರಸಂಗದ ಧ್ವನಿ ಮುದ್ರಿಕೆಯು ಪದ್ಯಾಣ ಗಣಪತಿ ಭಟ್ಟರ ಕಂಠ ಸಿರಿಯಲ್ಲಿ ಶೇಣಿ ಅಜ್ಜನ ನಿರ್ದೇಶನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆಸಕ್ತರು ಈ ಪ್ರಸಂಗದ ಎಲ್ಲ ಪುಟಗಳಿಗಾಗಿ ಲೇಖಕರನ್ನು ಸಂಪರ್ಕಿಸಬಹುದು. .

***

Tuesday, December 8, 2009

" ದೃಷ್ಟ - ಅದೃಷ್ಟ" ದೊಳಗೊಮ್ಮೆ ಇಣುಕಿದಾಗ .....


ಕೆಲವು ವರ್ಷಗಳ ಹಿಂದೆ ಆರ್ಕುಟ್ ಸಂಪರ್ಕ ಜಾಲದಲ್ಲಿ ಯಕ್ಷಗಾನಾಸಕ್ತರ ಗುಂಪಿನಲ್ಲಿ "ಸಮಾನ ಶೀಲೇಶು ವ್ಯಸನೇಶು ಸಖ್ಯಂ " ಎಂಬಂತೆ ದೃಷ್ಟನಾದ ಮಹೇಶ ಮೊನ್ನೆಯಷ್ಟೇ ನೀಡಿದ ಪುಸ್ತಕ "ದೃಷ್ಟ-ಅದೃಷ್ಟ"ವೆಂಬ ಆತ್ಮ ವೃತ್ತಾಂತವನ್ನು ಸಾದ್ಯಂತವಾಗಿ ಓದಿದಾಗ ಸಹಜವಾಗಿ ಕೆಲವು ಅನಿಸಿಕೆಗಳು ಮನದಲ್ಲಿ ಮೂಡಿದವು. ಅವುಗಳನ್ನು ಲಿಪಿರೂಪಕ್ಕಿಳಿಸಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ.


"ದೃಷ್ಟ-ಅದೃಷ್ಟ " ಎಂಬುದು ಎಲ್ಯಡ್ಕ ಶ್ರೀಯುತ ಈಶ್ವರ ಭಟ್ಟರ ಆತ್ಮವೃತ್ತಾಂತ . ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಶುಭಾವಸರದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಅನಾವರಣಗೊಂಡ ಕೃತಿ ಕುಸುಮ.
ಸುಮಾರು ೧೯೪೦ ರಿಂದ ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಮೂಲದ ಕೆಳ ಮಧ್ಯಮ ವರ್ಗದ ಹವ್ಯಕರ ಕುಟುಂಬಗಳ ಆರ್ಥಿಕ , ಸಾಮಾಜಿಕ ಹಾಗೂ ನೈತಿಕ ಜನ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಪುಸ್ತಕದ ಪೂರ್ವಾರ್ಧವಿದ್ದರೆ , ಪ್ರಾಮಾಣಿಕತೆ ,ಕಠಿಣ ದುಡಿಮೆಗೆ ಸಂದ ಪ್ರತಿಫಲವೇನೆಂಬ ಅಂಶವು ಕೊನೆಯ ಭಾಗದಲ್ಲಿ ಜೀವನ ಸಾರ್ಥಕ್ಯದೊಂದಿಗೆ ಉಲ್ಲೇಖಿಸಲಾಗಿದೆ .

ಪುಸ್ತಕದ ಆರಂಭದಲ್ಲಿ ಬಾಲಕ ಈಶ್ವರ ಭಟ್ಟರು ಬಾಲ್ಯದಲ್ಲಿಯೇ ಮಾತೃ ವಿಯೋಗವನ್ನು ಅನುಭವಿಸಿದ ಚಿತ್ರಣ ಮನಕಲಕುವಂತಿದೆ . ಪುಸ್ತಕ ಓದುತ್ತ ಮುಂದೆ ಸಾಗುತ್ತಿದ್ದಂತೆ ಹಳೆಯ ದಶಕಗಳ ಜೀವನ ಶೈಲಿಯ ಚಿತ್ರಣಗಳು ( ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಬದಲಾಗಿ ಮಡಲಿನ ಗೊರಬೆ....ಇತ್ಯಾದಿ ) ಮನೋಮಂಡಲದಲ್ಲಿ ಭಿತ್ತಿ ಚಿತ್ರಗಳಂತೆ ಹಾದುಹೋಗುತ್ತವೆ . ಇದರಿಂದ ನಮ್ಮ ಹಿರಿಯರು ಎಷ್ಟು ಕಷ್ಟ ಸಹಿಷ್ಣುಗಳು , ಅಶಾವಾದಿಗಳೂ , ನಿರಂತರ ಪ್ರಯತ್ನಶೀಲರು ಆಗಿದ್ದುದರಿಂದ ಇಂದಿನ ಯುವ ಪೀಳಿಗೆ ಭದ್ರ ಬುನಾದಿಯ ಮೇಲೆ ಸಮರ್ಥವಾಗಿ ನಿಂತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆಯುಳ್ಳವರನ್ನಾಗಿ ಮಾಡಿದೆ ಎಂದು ತಿಳಿಯುತ್ತದೆ .

ಉದ್ಯಮ ಸಾಹಸಂ ಧೈರ್ಯಂ
ಬುದ್ಧಿ ಶಕ್ತಿ ಪರಾಕ್ರಮ:
ಷಡೇತೇ ಯತ್ರ ವರ್ತಂತೆ
ತತ್ರ ದೈವಂ ಪ್ರಸೀದತಿ

ಎಂಬ ಸೂಕ್ತಿಯಂತೆ ತಮ್ಮ ಜೀವನವೆಂಬ ಉದ್ಯೋಗದಲ್ಲಿ ಸಾಹಸ ಧೈರ್ಯ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಪ್ರವೃತ್ತಿ ಇದ್ದುದರಿಂದ ಕಾಲ ಕಾಲಕ್ಕೆ ದೈವ ಸಹಾಯವೂ ನಾನಾ ಸ್ವರೂಪದಿಂದ ದೊರೆತುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಪಡೆಯಲು ಅವಕಾಶವಾದುದು ಸಂತಸದ ವಿಚಾರ.

ಜೀವನದ ಸಂಕಷ್ಟದ ದಿನಗಳಲ್ಲಿ ಸ್ಥಿತಪ್ರಜ್ಞರಾಗಿ ಸರ್ವ ರೀತಿಯ ಸಮಸ್ಯೆಗಳಿಗೆ ಎದೆಗೊಟ್ಟು ಪ್ರತಿಯೊಂದು ಸನ್ನಿವೇಶಗಳನ್ನು ಅನಿವಾರ್ಯವಾಗಿ ಸವಾಲಾಗಿ ಸ್ವೀಕರಿಸಿ ಅಧ್ಯಾಪಕರಾದ ಶ್ರೀಯುತರು ಬದುಕಿನ ಸಾರ್ಥಕತೆಯನ್ನು ಪ್ರಯತ್ನಶೀಲತೆಯಿಂದ ಸಾಧಿಸಿದ್ದು "ದೃಷ್ಟ -ಅದೃಷ್ಟ "ದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

ಆತ್ಮ ವೃತ್ತಾಂತವನ್ನು ಬರೆಯುವುದು ನಿಜಕ್ಕೂ ಸವಾಲಿನ ಕೆಲಸವೇ . ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು , ತಾನು ಜೀವನದಲ್ಲಿ ಅನುಭವಿಸಿದ ಹಾಗೂ ಎದುರಿಸಿದ ವಿವಿಧ ಅವಕಾಶರೂಪೀ ಸವಾಲುಗಳನ್ನು ಯಥಾವತ್ತಾಗಿ ನೆನಪಿಸಿಕೊಂಡು ಬರೆಯುವಾಗ ನೇರ ಪ್ರಸ್ತುತಿಯೇ ಸಮಂಜಸವಾದರೂ ಕೆಲವೊಂದು ಕಡೆ ಆಗಿನ ಕಾಲದ ವೈಶಿಷ್ಟ್ಯಗಳು , ಆಚರಣೆಗಳು , ಸಾಂಸ್ಕೃತಿಕ ವಿಚಾರಗಳು ವಿಶೇಷ ಘಟನೆಗಳು ಮತ್ತು ಶಿಕ್ಷಣ ಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿದಲ್ಲಿ ಹೊತ್ತಗೆಯು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ ? ಈ ವಿಚಾರವನ್ನು ಗಮನಿಸಿದಾಗ "ದೃಷ್ಟ -ಅದೃಷ್ಟ " ದಲ್ಲಿ ಏನೋ ಕಳಕೊಂಡ ಅನುಭವ ಯಾ "ಅತೃಪ್ತ " ಭಾವನೆ ಓದುಗನಿಗೆ ಬರದೆ ಇರಲಾರದು .

ಅರುವತ್ತು ವರುಷಗಳ ಸುದೀರ್ಘ ಜೀವನಾನುಭವಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ೬೪ ಪುಟಗಳಲ್ಲಿ ವಿವರಿಸಲು ಕಷ್ಟವೇ ಆದರೂ ಅತ್ಯಂತ ಚೊಕ್ಕವಾಗಿ ಚುಟುಕಾಗಿ ಪ್ರಸ್ತುತ ಪಡಿಸಿದ್ದು ಒಂದು ಈ ಪುಸ್ತಕದ ಉತ್ತಮಾಂಶ . ಸಮೃದ್ಧ ಜೀವನಾನುಭಾವಿಗಳಾದ ಶ್ರೀಯುತ ಈಶ್ವರ ಭಟ್ಟರ "ಜೀವನದ ರಸನಿಮಿಷಗಳ " ಬಗೆಗೆ ಸವಿಸ್ತಾರವಾದ ಪುಸ್ತಕವೊಂದನ್ನು ಹೊರತಂದಲ್ಲಿ ವಾಚಕರಿಗೆ ಮಹದುಪಕಾರವಾಗುತ್ತದೆ.

ಶ್ರೀಯುತರು ಬರೆದ ಟಿಪ್ಪಣಿಗಳನ್ನು ಪುಸ್ತಕ ರೂಪಾಂತರಿಸುವಲ್ಲಿ ಸಹಕರಿಸಿದ ಕು . ಮನೋರಮಾ ಬಿ. ಏನ್. ರವರ ಪರಿಶ್ರಮ , ಲಿಪಿ ಗಣಕೀಕರಿಸಿದ ಕು.ಅಕ್ಷತಾ , ಅಂದವಾದ ಮತ್ತು ಅರ್ಥಪೂರ್ಣವಾದ ಮುಖಪುಟ ವಿನ್ಯಾಸಗೊಳಿಸಿದ ಅಕ್ಷರೋದ್ಯಮದ ಸುನಿಲ್ ಕುಲಕರ್ಣಿಯವರ ಅನುಭವ , ಸುಂದರವಾಗಿ ಮುದ್ರಿಸಿದ ದಿಗಂತ ಮುದ್ರಣಾಲಯದವರ ಕಾರ್ಯ ದಕ್ಷತೆಗಳೆಲ್ಲ ಅಭಿನಂದನೀಯ .
ಒಟ್ಟಿನಲ್ಲಿ ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ ಸಂಗ್ರಹ ಯೋಗ್ಯವಾದ ಮಾಹಿತಿಪೂರ್ಣ ಅನುಭವದ ರಸ ಪಾಕ ಈ "ದೃಷ್ಟ -ಅದೃಷ್ಟ".

Thursday, November 12, 2009

ತೆಂಕಬೈಲು ಹಾಡಿದರೆಂದರೆ...


ರವಿವಾರದ ಸುಂದರ ಸಂಜೆಯ ಹೊತ್ತು ಪುಸ್ತಕ ತಿರುವಿ ಹಾಕುತ್ತಾ ಧ್ವನಿ ಸುರುಳಿಯ ಯಕ್ಷಗಾನ ಹಾಡುಗಳನ್ನು ಕೇಳುತ್ತಾ ಇದ್ದ ನನಗೆ ಹಿರಿಯ ಕವಿಯೊಬ್ಬರು ಗದುಗಿನ ನಾರಣಪ್ಪನವರ ಕುರಿತು

" ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ..."

ಎಂದು ಹೇಳಿದ್ದನ್ನು ಓದಿದಾಗ ಅನಿಸಿದ್ದು ,
ಯಾವನೇ ಯಕ್ಷಗಾನ ಅಭಿಮಾನಿ ಇರುತ್ತಿದ್ದರೆ ಕೆಳಗಿನ ಸಾಲನ್ನು ಹೇಳುತ್ತಿದ್ದ ಅನಿಸಿತ್ತು .

ತೆಂಕಬೈಲು (ಮನಸ್ಸಿಟ್ಟು) ಹಾಡಿದರೆಂದರೆ
ಪ್ರಸಂಗವು ಕಣ್ಣಲಿ ಕುಣಿಯುವುದು
ನಿತ್ಯವೂ ಮನವನು ಕಾಡುವುದು !

ಇನ್ನಾರೆನ್ನನು ಗುಣದಲಿ ಬಣ್ಣಿಸಿ ಮನ್ನಿಸಿ ಕರೆವರು...... ಎಂದು ಸುಶ್ರಾವ್ಯ ಕಂಠದಲ್ಲಿ ಭಾವಪೂರ್ಣವಾಗಿ ಶಾಸ್ತ್ರಿಯವರು ಹಾಡುತ್ತಿದ್ದರೆ ಎಂಥವನೇ ಆದರೂ ಪದ್ಯದ ಲಯದೊಂದಿಗೆ ಲೀನವಾಗಿ ಹೋಗುವಂಥ ಸನ್ನಿವೇಶ ನಿರ್ಮಾಣವಾಗಿರುತ್ತದೆ . ಒಬ್ಬ ಅಪೂರ್ವ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಶ್ತ್ರಿಯವರ ಬಗ್ಗೆ ಕೆಲವೊಂದು ವಿಚಾರಗಳನ್ನು ಬರೆಯಬೇಕೆಂದು ಅನಿಸಿದ್ದು ಅವರ ಉತ್ಕೃಷ್ಠ ಪದ್ಯಗಳನ್ನು ನಿರಂತರ ಆಸ್ವಾದಿಸಿದ ಮೇಲೆ...

ಒಮ್ಮೆಗೇ ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡ ಅನನ್ಯ ಭಾಗವತ . ಶೃಂಗಾರ, ಕರುಣ ದು:ಖ ರಸದ ಪದ್ಯಗಳನ್ನು ಮನಮುಟ್ಟುವಂತೆ ಹಾಡುವ ಇವರು ತಮ್ಮ ವಿಶಿಷ್ಟ ಶೈಲಿಯಿಂದಾಗಿಯೇ ಕಲಾರಸಿಕರನ್ನು ಮತ್ತೆ ಮತ್ತೆ ಹಿತವಾಗಿ ಕಾಡುತ್ತಾರೆ !

ಹಾಗೆಂದು ತೆಂಕಬೈಲುರವರ ಭಾಗವತಿಕೆಯ ಮೇಲೆ ನಿರೀಕ್ಷೆಯಿಟ್ಟು ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ! ಹಾಗೇನಾದರೂ ಹೋದಿರೋ ಆ ದಿನ "ಯಾಕಾದರೂ ಈ ಕೆಟ್ಟ ಹಾಡು ಕೇಳಲು ಬಂದೆನೋ " ಅನಿಸುವಸ್ಟೂ ಪದ್ಯಗಳನ್ನು ಕುಲಗೆಡಿಸಿ ಬಿಟ್ಟಾರು ! ಒಂದು ವೇಳೆ ಸಂಘಟಕನ ಅದೃಷ್ಟ ಶಾಸ್ತ್ರಿಯವರ ಉಲ್ಲಸದಾಯಕ ಮನಸ್ಸು ಜೊತೆ ಸೇರಿದರೆ ಅವರ ಶೈಲಿಯ ಉತ್ತುಂಗ ಸ್ಥಿತಿಯ ಅನಾವರಣವಾಗುತ್ತದೆ. ಅದರ ಸಹಜ ಸೌ೦ದರ್ಯವನ್ನು ಕಂಡ ಎಂಥ ಪ್ರೇಕ್ಷಕನೇ ಆದರೂ "ಸೈ " ಅನ್ನಲೇಬೇಕು . ಹಲವು ನೋವನ್ನು ಅನುಭವಿಸಿದರೂ ಮಾತೆಯೋರ್ವಳು ತಾನು ಪ್ರಸವಿಸಿದ ಮಗುವಿನ ಮೊಗವನ್ನು ನೋಡಿ ನೋವನ್ನು ಮರೆವಂತೆ ಹಿಂದೆ ಕೇಳಿದ ಎಲ್ಲಾ ಕೆಟ್ಟ ಪದ್ಯಗಳನ್ನೂ ಹೊಡೆದು ಹಾಕಿ ಬಿಡಬಲ್ಲ ಅಸಾಧಾರಣ ಸಾಮರ್ಥ್ಯ ತೆಂಕಬೈಲುರವರಲ್ಲಿ ಮಾತ್ರ ಕಾಣಬಹುದೇನೋ?

ದಕ್ಷಾಧ್ವರ-ಗಿರಿಜಾಕಲ್ಯಾಣ , ಇಂದ್ರಜಿತು ಕಾಳಗ , ತುಳಸಿ ಜಲಂಧರ , ಕಂಸವಧೆ ,ಕರ್ಣಪರ್ವ ,ಸುಧನ್ವ ಮೋಕ್ಷ , ಪಟ್ಟಾಭಿಷೇಕ , ವಿದ್ಯುನ್ಮತಿ ಕಲ್ಯಾಣ ,ಶರಸೇತು ಬಂಧನ ಮುಂತಾದ ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಇವರ ಕುರಿತು ಹಿರಿಯ ಭಾಗವತರೊಬ್ಬರು ಹೇಳಿದ್ದು ಹೀಗೆ " ಶಾಸ್ತ್ರಿಯವರಲ್ಲಿ ವೃತ್ತಿಪರತೆಯ ಸ್ಥಿರತೆಯ ಕೊರತೆ ಇದೆ. ಅದೊಂದು ಬಿಟ್ಟರೆ ಯಾವ ಕ್ಷಣದಲ್ಲಾದರೂ ಸಿಡಿಲಮರಿಯ ಹಾಗೆ ಅವರು ವಿಜೃ೦ಭಿಸಿಯಾರು . ಅದು ಯಾವಾಗ ಅಂತ ತರ್ಕಿಸುವುದೇ ಕಷ್ಟ ". ಆದ್ದರಿಂದಲೇ ಅವರೊಬ್ಬ ಅನನ್ಯ (unique) ಭಾಗವತ ...!

ಅವರ ಶೈಲಿಯನ್ನು ಅನುಕರಿಸುವುದು ಅಸಾಧ್ಯ . ಅಪ್ಪನ ಶೈಲಿಯನ್ನು ಮಕ್ಕಳು ಅನುಸರಿಸುವುದು ಹಿರಿಯ ಭಾಗವತರ ಮನೆತನದಲ್ಲಿ ಕಾಣುತ್ತೇವೆ . ಆದರೂ ಇವರ ಮಗ ಅಪ್ಪನಂತೆ ಪ್ರಸಂಗವನ್ನು ಮೆರೆಸುವ ಕ್ರಮವನ್ನು ಕರಗತ ಮಾಡಿಕೊಳ್ಳಬೇಕಿದೆ . ಅವರ ಶೈಲಿಯ ಉತ್ತರಾಧಿಕಾರಿಗಳು ಅದನ್ನು ಸಮರ್ಥವಾಗಿ ಕಲಿತರೆ ಪ್ರೇಕ್ಷಕನಿಗಾಗುವ ಲಾಭ ಅಪರಿಮಿತ . ಸಮೀಪವರ್ತಿಗಳು ಹೇಳುವಂತೆ ತೆಂಕಬೈಲುರವರು ಶೀಘ್ರಕೋಪಿ (ದೂರ್ವಾಸರ ಕುಲದವರು !). ಅವರಿಗೇನಾದರೂ ಸ್ವರ ಬಿದ್ದರೆ "ಛೆ " ಮದ್ದಲೆ ಸರಿ ಇಲ್ಲೆ" ಎಂದು ಎದ್ದು ಹೋದದ್ದೂ ಇದೆ !

ದ್ವಂದ್ವ ಕಾರ್ಯಕ್ರಮ , ಯಕ್ಷ ಸಂಗೀತ ಕಾರ್ಯಕ್ರಮಗಳಲ್ಲಿ ಎದ್ದು ಕಾಣಿಸುವ ಇವರ ಬತ್ತಳಿಕೆಯಲ್ಲಿ ಅಪೂರ್ವ ರಾಗಗಳ ಸಂಗ್ರಹವೇ ಇದೆ. ಪ್ರಸಂಗವನ್ನು ಸರಿಯಾಗಿ ಅಧ್ಯಯನ ಮಾಡಿಯೇ ರಂಗವೇರುವ ಇವರು ಸದಾ ಮನಸೂರೆಗೊಳ್ಳುವ ಭಾಗವತರಲ್ಲಿ ಪ್ರಮುಖರು.




ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ನೆಲೆಯಾಗಿರುವ ಇವರಿಗೆ ಹೆಚ್ಚಿನ ಅವಕಾಶ, ಪ್ರಚಾರಗಳು ದೊರಕದಿದ್ದರೂ, ಕೇಳುಗರ ಮನದಲ್ಲಿ "ಹಿತವಾಗಿ ಗಿರಕಿ ಹೊಡೆಯುವ " ಅಪೂರ್ವ ಕಲೆಗಾರಿಕೆ ಹೊಂದಿದ ಇವರ ಕಂಠದಲ್ಲಿ ಮೂಡಿ ಬಂದ
ದೇವಿ ಮಹಾತ್ಮೆಯ "ನೋಡಿದನು ಕಲಿ ರಕ್ತಬೀಜನು ....." ರಾವಣವಧೆಯ " ಕಂಡನು ದಶವದನ ...." ದಕ್ಷಾಧ್ವರದ "ಯಾತಕೆ ಬಂದೆನು ತಾನೇ
ಪಾತಕಿ ಮಾಡುವ ...." ಜಲಂಧರನ ಕಾಳಗದ " ಕೇಳು ಶ್ರೀರಮೆ ... ಕರುಣ ಸಾಗರೆ " ಕರ್ಣ ಪರ್ವದ "ಭಾನುಸುತ ರಥವಿಳಿದು ...." ಮುಂತಾದ ಪದಗಳು ಮತ್ತೆ ಮತ್ತೆ ಕೇಳುವಂತೆ ಮಾಡಿ ತಲೆಯಲ್ಲಿ ಹಿತವಾಗಿ ಸುತ್ತುತ್ತಾ , ಬಾಯಿಯಲ್ಲಿ ಗುನುಗುನಿಸುತ್ತಾ " ಕೊಂಡಾಟದ " ಅನುಭವವನ್ನು ನೀಡುತ್ತದೆ.

ಕೆಳಗಿನ ಕೊಂಡಿಯಲ್ಲಿ ತೆಂಕಬೈಲು ಶಾಸ್ತ್ರಿಯವರ ಹಾಡುಗಳನ್ನು ಕೇಳಿ ಆನ೦ದಿಸಬಹುದು .

http://oyakshagana.googlepages.com/audios.htm




ಏನಿದ್ದರೂ ಇಂಥ ಅಪೂರ್ವ ಕಲಾವಿದನ ಪದ್ಯಗಳ ಮಾದರಿ ಸಂಗ್ರಹವನ್ನು ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಇಡಬೇಕಾದ ಹೊಣೆಗಾರಿಕೆ ಇಂದು ಅವರ ಪದ್ಯಗಳನ್ನು ಆಸ್ವಾದಿಸುವ ಕಲಾರಸಿಕರಾದ ನಮ್ಮೆಲ್ಲರ ಗುರುತರ ಜವಾಬ್ದಾರಿಯಲ್ಲವೆ ?

***

Wednesday, November 11, 2009

ಪುಟಾಣಿಗಳ ಯಕ್ಷಲೋಕ



ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ . ಹಲವು ಶತಮಾನಗಳ ಇತಿಹಾಸವಿರುವ ಈ ಕಲೆ ಆರಾಧನಾ ಕಲೆಯಾಗಿ ಆವಿರ್ಭವಿಸಿ , ಮನೋರಂಜನಾ ಕಲೆಯಾಗಿ ಬೆಳೆದು ಬಂದಿದೆ. ಗಂಡು ಮೆಟ್ಟಿನ ಕಲೆಯೆಂದೇ ಯಕ್ಷಗಾನ ಪ್ರಸಿದ್ದವಾದರೂ ಸ್ತ್ರೀಯರೂ ಇತ್ತೀಚಿಗೆ ಈ ಕಲೆಯನ್ನು ಮೈಗೂಡಿಸಿ ಪ್ರದರ್ಶನಗಳನ್ನು ನೀಡುತ್ತಿರುವುದನ್ನು ನಾವು ಇತ್ತೀಚಿಗೆ ಕಾಣುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ . ಇಂದು ಅಳಿದುಳಿದಿರುವ ಕಲೆಯನ್ನು ಮಕ್ಕಳಿಗೆ ಕಲಿಸಿ "ಬಿಡುವಿಲ್ಲದ" ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಹಲವು ಹಿರಿಯರನ್ನು ನಾವು ಮನಸಾ ಮೆಚ್ಚಲೇಬೇಕು .

ಮಕ್ಕಳಿಗೆ ಯಾವುದೇ ಕಲೆಯನ್ನು ಕಲಿಸುವುದು ಸುಲಭ . ನಿರ್ಮಲ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತಲು ಬಾಲ್ಯವೇ ಸಕಾಲ. ಕಲಿಸಿದ ವಿಚಾರಗಳನ್ನು ಶೀಘ್ರವಾಗಿ ಕರಗತ ಮಾಡಿಕೊಳ್ಳಬಲ್ಲ , ಹೇಳಿಕೊಟ್ಟದ್ದನ್ನು ಚಾಚೂ ತಪ್ಪದೆ ಒಪ್ಪಿಸುವ ಕಲೆಗಾರಿಕೆಯುಳ್ಳ ಮಕ್ಕಳು ಉತ್ತಮವಾದ ಯಕ್ಷಗಾನ ಪ್ರದರ್ಶನ ನೀಡುವುದು ಸಂತಸದ ವಿಚಾರ .
ಮಕ್ಕಳ ಮೇಳ ಎಂದೇ ಪ್ರಸಿದ್ಧವಾಗಿರುವ ಸಾಲಿಗ್ರಾಮದ ಮಕ್ಕಳ ಮೇಳ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ದಕ್ಷಿಣ ಕನ್ನಡದ ಹಲವಾರು ಶಾಲೆಗಳಲ್ಲಿ ಇಂಥ ಮಕ್ಕಳ ಮೇಳಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ .
ಬೆಂಗಳೂರು , ಮುಂಬೈಯಂಥ ಮಹಾನಗರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕರಾವಳಿ ಕರ್ನಾಟಕ ಮೂಲದ ಪಾಲಕರ / ಪೋಷಕರ ಪರಿಶ್ರಮದಿಂದಾಗಿ ರೂಪುಗೊಂಡ ವೃತ್ತಿಪರ ಮಟ್ಟದ ಪ್ರದರ್ಶನವನ್ನು ನೀಡಬಲ್ಲ ಮಕ್ಕಳ ಮೇಳವಿರುವುದು ಹೆಮ್ಮೆಯ ವಿಷಯ.



ಮಕ್ಕಳ ಮನಸ್ಸಿನಲ್ಲಿ ಪೌರಾಣಿಕ ಜ್ಞಾನ , ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂಥ ಪ್ರಯತ್ನಗಳು ಸಹಕಾರಿಯಾಗುತ್ತವೆ. ಹಿರಿಯ ಕಲಾವಿದರ ಮಾರ್ಗದರ್ಶನ , ಮುಖವರ್ಣಿಕೆ , ಪ್ರಸಂಗ ಸಾಹಿತ್ಯ ಪರಿಚಯವೇ ಮೊದಲಾದುವನ್ನು ಸರಿಯಾಗಿ ಸಮ್ಮಿಳಿತಗೊಳಿಸಿ ಮಕ್ಕಳಿಗೆ ಕಲಿಸಿದಲ್ಲಿ ಅವರ ಭಾಷಾ ಜ್ಞಾನ , ಮಾತುಗಾರಿಕಾ ಕೌಶಲ ಹೆಚ್ಚುವುದರೊಂದಿಗೆ ಯಕ್ಷಗಾನ ಕಲೆಯು ಜೀವಂತವಾಗಿ ಮುಂದಿನ ಪೀಳಿಗೆಯಲ್ಲೂ ಮುಂದುವರಿದು ಅದರ ರಸಾಸ್ವಾದನೆಗೆ ಅವಕಾಶವಾಗುತ್ತದೆ ಅಲ್ಲವೇ ?
***